ಚಿತ್ರದುರ್ಗ: ಭೂತೋಚ್ಛಾಟನೆ ನೆಪದಲ್ಲಿ ಎರಡು ವರ್ಷದ ಹೆಣ್ಣು ಮಗುವನ್ನು ಮಾಂತ್ರಿಕನೊಬ್ಬ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಹೊಳಲ್ಕೆರೆ ತಾಲ್ಲೂಕಿನ ಅಜ್ಜಿ ಕ್ಯಾತನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಪೂರ್ಣಿಕಾ (2) ಮಂತ್ರವಾದಿಯಿಂದ ಹತ್ಯೆಯಾದ ಮಗು. ಪ್ರವೀಣ್ ಹಾಗೂ ಬೇಬಿ ದಂಪತಿಯ ಪುತ್ರಿ ಪೂರ್ಣಿಕಾ ನಿದ್ದೆಯಲ್ಲಿ ಬೆಚ್ಚಿ ಬೀಳುತ್ತಿದ್ದಳು. ಈ ಕಾಯಿಲೆಯ ಬಗ್ಗೆ ಆಸ್ಪತ್ರೆಗೆ ತೋರಿಸಿದ್ದರೂ ಪ್ರಯೋಜನವಾಗಿರಲಿಲ್ಲ.
ಕೊನೆಗೆ ಮೌಢ್ಯದ ಮೊರೆ ಹೋಗಿದ್ದು , ರಾಕೇಶ್ ಎಂಬ ಮಾಂತ್ರಿಕನ ಬಳಿ ಹೋಗಿದ್ದಾರೆ. ಮಗುವನ್ನು ನೋಡಿದ ರಾಕೇಶ್ ಇದು ದೆವ್ವದ ಕಾಟ. ಪೂಜೆ ಮಾಡಬೇಕೆಂದು ಪೂರ್ಣಿಕಾನನ್ನು ಕರೆಸಿಕೊಂಡು ಗ್ರಾಮದ ಹೊರ ವಲಯದಲ್ಲಿ ಪೂಜೆ ಮಾಡುತ್ತಾ ಗಿಡವೊಂದರ ಕಡ್ಡಿಯಿಂದ ಮಗುವಿಗೆ ಮನ ಬಂದಂತೆ ಬಾರಿಸಿದ್ದಾನೆ.
ಮೈ ತುಂಬಾ ಬಾಸುಂಡೆ ಬಿದ್ದ ಪರಿಣಾಮ ನೋವು ಹೆಚ್ಚಾಗಿ ಬಾಲಕಿ ಪ್ರಜ್ಞೆ ತಪ್ಪಿದ್ದಾಳೆ. ಮಗುವಿನ ಸ್ಥಿತಿ ಕಂಡು ಕಂಗಾಲಾದ ಪೋಷಕರು ಹೊಳಲ್ಕೆರೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಮಗು ಮೃತಪಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ. ರಾಕೇಶ್ ನನ್ನು ಪೊಲೀಸರು ಬಂಧಿಸಿದ್ದಾರೆ.
Advertisement