ತೀರ್ಥಹಳ್ಳಿ: ಭೂ ಸುಧಾರಣಾ ತಿದ್ದುಪಡಿ ಮಸೂದೆ ಮತ್ತು ಎಪಿಎಂಸಿ ತಿದ್ದು ಪಡಿ ಕಾಯಿದೆಗಳು ರೈತರ ಪರವಾಗಿದ್ದು, ಅದರಿಂದ ಅನ್ನದಾತರಿಗೆ ಲಾಭವಾಗಲಿದೆ ಎಂದು ತೀರ್ಥಹಳ್ಳಿ ಕ್ಷೇತ್ರದ ಬಿಜೆಪಿ ಶಾಸಕ ಅರಗ ಜ್ಞಾನೇಂದ್ರ ಹೇಳಿದ್ದಾರೆ.
ಮಸೂದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವವರು ಸಂಪೂರ್ಣವಾಗಿ ಅರ್ಥ ಮಾಡಿಕೊಂಡಿಲ್ಲ, ರೈತನೊಬ್ಬ 35 ಸಾವಿರ ರು ಮೌಲ್ಯದ 1 ಕ್ವಿಂಟಾಲ್ ಅಡಕೆಯನ್ನು ಎಪಿಎಂಸಿ ಮಾರುಕಟ್ಟೆಗೆ ಕೊಂಡೊಯ್ದೊರೇ ಶೇ,1 ರಷ್ಟು ಎಪಿಎಸಿ ಸೆಸ್ ಮತ್ತು ದಲ್ಲಾಳಿಗಳಿಗೆ ಶೇ, ರಷ್ಟು ಕಮಿಷನ್ ನೀಡಬೇಕಾಗುತ್ತದೆ, ಕ್ವಿಂಟಾಲ್ ಗೆ 1,050 ನಷ್ಟ ಅನುಭವಿಸಬೇಕಾಗುತ್ತದೆ, ಎಪಿಎಂಸಿ ತಿದ್ದುಪಡಿ ಕಾಯಿದೆಯಿಂದ ರೈತನಿಗೆ ಈ ಹಣ ಉಳಿತಾಯವಾಗುತ್ತದೆ, ಎಂಎನ್ಸಿಗಳು ಬರುತ್ತವೆ ಎಂದು ವಿರೋಧ ಪಕ್ಷಗಳು ಹೇಳುತ್ತವೆ. ಅದರಲ್ಲಿ ಏನು ತಪ್ಪು? ಬೇಡಿಕೆ ಮತ್ತು ಪೂರೈಕೆಯ ಆಧಾರದ ಮೇಲೆ ರೈತರಿಗೆ ಅನುಕೂಲವಾಗಲಿದೆ, ಎಂದು ಹೇಳಿದ್ದಾರೆ.
ತಿದ್ದುಪಡಿ ಮಸೂದೆಯಿಂದ ರೈತರ ಸಬ್ಸಿಡಿ ಮತ್ತು ಕನಿಷ್ಠ ಬೆಂಬಲ ಬೆಲೆಗಳಿಗೆ ಯಾವುದೇ ತೊಂದರೆಯಾಗು ದಿಲ್ಲ. ಭೂ ಸುಧಾರಣಾ ತಿದ್ದುಪಡಿ ಕಾಯ್ದೆಯಿಂದಾಗಿ ಕೃಷಿ ಮಾಡಲು ಇಚ್ಚೆಯಿರುವವರಿಗೆ ಅನುಕೂಲವಾಗಲಿದೆ. ಹಲವು ವಿದ್ಯಾವಂತರು ಕೃಷಿ ನಡೆಸಲು ಬಯಸುತ್ತಾರೆ, ಹೀಗಾಗಿ ಭೂಮಿ ಖರೀದಿಸಲು ಕಂದಾಯ ಇಲಾಖೆ ಅಧಿಕಾರಿಗಳಿಗೆ ಲಂಚ ನೀಡಬೇಕಾಗುತ್ತದೆ.
ಸುಳ್ಳು ಪ್ರಮಾಣಪತ್ರ ಸೃಷ್ಟಿಸಿ ಆಂಧ್ರ ಪ್ರದೇಶ ಮತ್ತು ತಮಿಳುನಾಡು ವ್ಯಕ್ತಿಗಳು ಇಲ್ಲಿ ಕೃಷಿ ಭೂಮಿ ಖರೀದಿಸುತ್ತಿದ್ದಾರೆ. ಈ ಎಲ್ಲಾ ಭ್ರಷ್ಟಾಚಾರ ನಿಯಂತ್ರಿಸಲು ತಿದ್ದುಪಡಿ ಮಸೂದೆ ಸಹಾಯವಾಗಲಿದೆ.
ಇನ್ನೂ ವಯಸ್ಸಾದ ಕಾರಣ ಹಲವರಿಗೆ ತಮ್ಮದೇ ಭೂಮಿಯಲ್ಲಿ ವ್ಯವಸಾಯ ಮಾಡಲು ಆಗುವುದಿಲ್ಲ, ಅವರ ಮಕ್ಕಳುಗಳು ನಗರ ಪ್ರದೇಶದಲ್ಲಿರುತ್ತಾರೆ, ಅಂತವರು ತಮ್ಮ ಜಮೀನನನ್ನು ಉತ್ತಮ ಬೆಲೆಗೆ ಮಾರಬಹುದಾಗಿದೆ.
ಕೃಷಿಯ ಹೊರತಾಗಿ ಇತರ ಉದ್ದೇಶಗಳಿಗಾಗಿ ನೀರಾವರಿ ಭೂಮಿಯನ್ನು ಖರೀದಿಸುವುದನ್ನು ನಿಷೇಧಿಸಲಾಗಿದೆ, ನಿಯಮ ಉಲ್ಲಂಘಿಸಿದರೇ ಕಾನೂನು ಕ್ರಮ ಎದುರಿಸಬೇಕಾಗುತ್ತದೆ. ಸದ್ಯದ ಪರಿಸ್ಥಿತಿಗೆ ಅನುಕೂಲವಾಗುವಂತ ಮಸೂದೆನ್ನು ನಾವು ಜಾರಿಗೆ ತಂದಿದ್ದೇವೆ, ಇದೇ ಮೊದಲಲ್ಲ ಹಿಡುವಳಿ ಕಾಯ್ದೆಯ ನಂತರ ಭೂ ಸುಧಾರಣಾ ಕಾಯ್ದೆಗೆ 30 ಕ್ಕೂ ಹೆಚ್ಚು ಬಾರಿ ತಿದ್ದುಪಡಿ ಮಾಡಲಾಗಿದೆ.
Advertisement