ಬೆಂಗಳೂರು: ಅಗಣಿತ ಸಾಧು-ಸಂತರ, ಶ್ರದ್ಧಾಳುಗಳ ತಪಸ್ಸು, ಪರಿಶ್ರಮ, ಬಲಿದಾನ, ಪ್ರಾರ್ಥನೆಗಳು ಸಾಕಾರಗೊಳ್ಳುವ ಸಮಯ ಬಂದಿದೆ. ಜನಾಂದೋಲನಗಳಲ್ಲಿ ಪಾಲ್ಗೊಂಡು, ಅನೇಕ ರೀತಿಯ ಸವಾಲುಗಳನ್ನು ಎದುರಿಸಿ, ಹೋರಾಟಗಳನ್ನು ಮಾಡಿದ ಪಕ್ಷದ ಎಲ್ಲ ನಾಯಕರು, ಕಾರ್ಯಕರ್ತರ ಪ್ರಯತ್ನಗಳನ್ನು ಸ್ಮರಿಸುತ್ತಾ, ಈ ಹೆಮ್ಮೆಯ ಐತಿಹಾಸಿಕ ಕ್ಷಣವನ್ನು ಸ್ವಾಗತಿಸೋಣ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.
ಶತಮಾನಗಳ ನಂತರ ಮತ್ತೆ ಅಯೋಧ್ಯೆಯಲ್ಲಿ ಶ್ರೀರಾಮ ಪಟ್ಟಾಭಿಷೇಕ ನಡೆಯಲಿದೆ. ಸರ್ವೋಚ್ಛ ನ್ಯಾಯಾಲಯದ ತೀರ್ಪಿನನ್ವಯ ಭಾರತೀಯರ ಪರಮ ಪವಿತ್ರ ಶ್ರದ್ಧಾಕೇಂದ್ರ ಅಯೋಧ್ಯೆಯಲ್ಲಿ ಭವ್ಯವಾದ ಶ್ರೀರಾಮ ಮಂದಿರ ನಿರ್ಮಾಣವಾಗಲಿದ್ದು, ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿರವರು ಮಂದಿರಕ್ಕೆ ಭೂಮಿಪೂಜೆ ನೆರವೇರಿಸಲಿದ್ದಾರೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ಆರೋಗ್ಯ ಸಚಿವ ಬಿ.ಶ್ರೀರಾಮುಲು, ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮನ ಭವ್ಯ ಮಂದಿರ ನಿರ್ಮಾಣದ ಭೂಮಿ ಪೂಜೆ ಇಂದು ನೆರವೇರುತ್ತಿದೆ. ಈ ಅಪರೂಪದ ಕ್ಷಣಕ್ಕೆ ಸನ್ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರೂ ಸೇರಿದಂತೆ ಅಸಂಖ್ಯಾತ ಗಣ್ಯರು, ಮಠಾಧೀಶರು, ಸಾಧು ಸಂತರು, ಶ್ರೀರಾಮ ಭಕ್ತರು ಸಾಕ್ಷಿಯಾಗುತ್ತಿದ್ದಾರೆ. ಈ ಶುಭ ಕಾರ್ಯ ಯಶಸ್ವಿಯಾಗಲಿ ಎಂದು ಹಾರೈಸೋಣ ಎಂದು ತಿಳಿಸಿದ್ದಾರೆ.
Advertisement