ಬೆಂಗಳೂರು: ಕೋಲಾರದ ನರಸಾಪುರ ವಿಸ್ಟ್ರಾನ್ ಐ ಫೋನ್ ತಯಾರಿಕಾ ಘಟಕದಲ್ಲಿ ನಡೆದ ಗಲಭೆಯಿಂದ ಕರ್ನಾಟಕ ಬ್ರ್ಯಾಂಡ್ ಘನತೆಗೆ ಧಕ್ಕೆಯಾಗುವುದಿಲ್ಲ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ,
ವಿಸ್ಟ್ರಾನ್ ಕಂಪನಿಯಲ್ಲಿ ನಡೆದ ದೊಡ್ಡಮಟ್ಟದ ಹಿಂಸಾಚಾರ ಪ್ರಧಾನಿ ನರೇಂದ್ರ ಮೋದಿ ಅವರ ಗಮನ ಸೆಳೆಯುವುದರ ಜೊತೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು.
ರಾಜ್ಯದಲ್ಲಿ ಬಂಡವಾಳ ಹೂಡಲು ಹೂಡಿಕೆದಾರರನ್ನು ಆಕರ್ಷಿಸಲು ಕರ್ನಾಟಕ ನೆರೆಯ ರಾಜ್ಯಗಳೊಂದಿಗೆ ಸ್ಪರ್ಧಿಸುತ್ತಲೇ ಬಂದಿದೆ, ಕೊರೋನಾ ಕಾರಣದಿಂದ ಈ ವರ್ಷ ಜಾಗತಿಕ ಹೂಡಿಕೆದಾರರ ಸಮಾವೇಶ ನಡೆದಿಲ್ಲ, ರಾಜ್ಯ ಸರ್ಕಾರ ತನ್ನ ಮೊದಲಿನ ನಿರ್ಧಾರಕ್ಕೆ ಬದ್ಧವಾಗಿದ್ದು, 2020-21ರಲ್ಲಿ ನಡೆಸುವುದಾಗಿ ಸಿಎಂ ತಿಳಿಸಿದ್ದಾರೆ.
"ಆದರೆ ಕೋವಿಡ್ ಪರಿಸ್ಥಿತಿಯ ನಂತರದ ಕೈಗಾರಿಕಾ ಸನ್ನಿವೇಶವನ್ನು ಅವಲಂಬಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು," ಎಂದು ಅವರು ಹೇಳಿದರು.
ಬಿಡದಿಯ ಟೊಯೋಟಾ ಕಿರ್ಲೋಸ್ಕರ್ ಮತ್ತು ವಿಸ್ಟ್ರಾನ್ ನಲ್ಲಿ ನಡೆದ ಘಟನೆಗಳು ಆಕಸ್ಮಿಕ, ಎರಡು ಕಂಪನಿಗಳ ಜೊತೆ ನಾವು ನಿರಂತರ ಸಂಪರ್ಕದಲ್ಲಿದ್ದೇವೆ, ಹೂಡಿಕೆದಾರರ ಮನೋಭಾವಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಲು ಭಾರತ ಸರ್ಕಾರ ಮತ್ತು ನಾವು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಡಿಸೆಂಬರ್ 12 ರಂದು ನಡೆದ ಹಿಂಸಾಚಾರದ ನಂತರ ವಿಸ್ಟ್ರಾನ್ ಕಂಪನಿಯನ್ನು ಧ್ವಂಸಗೊಳಿಸಿದ 128 ಕಾರ್ಮಿಕರನ್ನು ಪೊಲೀಸರು ಬಂಧಿಸಿದ್ದಾರೆ. "ಸರ್ಕಾರವು ಎಲ್ಲಾ ಸೌಲಭ್ಯಗಳನ್ನು ಮತ್ತು ಸಹಕಾರವನ್ನು ವಿಸ್ತರಿಸಲಿದೆ ಎಂದು ನಾವು ಕಂಪನಿ ಅಧಿಕಾರಿಗಳಿಗೆ ತಿಳಿಸಿದ್ದೇವೆ. ನಾವು ಅವರಿಗೆ ಪೊಲೀಸ್ ರಕ್ಷಣೆಯನ್ನೂ ನೀಡುತ್ತೇವೆ. ಘಟಕವನ್ನುಶೀಘ್ರವಾಗಿ ಮರುಪ್ರಾರಂಭಿಸುವಂತೆ ನಾವು ಅವರಿಗೆ ಮನವಿ ಮಾಡುತ್ತೇವೆ, ’’ ಎಂದು ಶೆಟ್ಟರ್ ತಿಳಿಸಿದ್ದಾರೆ.
"ಜಿಲ್ಲಾಧಿಕಾರಿ ಮತ್ತು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ, ಮತ್ತು ತನಿಖೆ ನಡೆದ ನಂತರ ನಮಗೆ ಸ್ಪಷ್ಟ ಚಿತ್ರಣ ಸಿಗುತ್ತದೆ ಎಂದು ಸಣ್ಣ ಮತ್ತು ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.
ಕೈಗಾರಿಕಾ ಸ್ನೇಹಿ ನೀತಿಗೆ ರಾಜ್ಯ ಯಾವಾಗಲೂ ಹೆಸರುವಾಸಿಯಾಗಿರುವುದರಿಂದ ಈ ಘಟನೆಯು ಬ್ರಾಂಡ್ ಕರ್ನಾಟಕಕ್ಕೆ ಹಾನಿಯಾಗುವುದಿಲ್ಲ ಎಂದು ಅವರು ಹೇಳಿದರು.
Advertisement