ಬೆಂಗಳೂರು: ಬಿಬಿಎಂಪಿ ಬೊಮ್ಮನಹಳ್ಳಿ ಝೋನ್ ನ ಕಾರ್ಯನಿರ್ವಾಹಕ ಎಂಜಿನಿಯರ್ ಸಿಟಿ ಆಂಜನಪ್ಪ ಇತ್ತೀಚೆಗೆ ಕೋವಿಡ್-19 ಪಾಸಿಟಿವ್ ಬಂದು ಆಸ್ಪತ್ರೆಗೆ ದಾಖಲಾಗಿದ್ದರು. ಆದರೂ ಸಹ ಪ್ರತಿ ದಿನವೂ ದಾಖಲಾತಿ ಪುಸ್ತಕದಲ್ಲಿ ಸಹಿ ಮಾಡಿರುವುದು ಕಂಡುಬಂದಿದ್ದು ಇದು ನಿಷ್ಠಾವಂತಿಯೋ ಅಥವಾ ಅಜ್ಞಾನವೋ ಎಂದು ಬೊಮ್ಮನಹಳ್ಳಿಯ ನಾಗರಿಕರು ಪ್ರಶ್ನಿಸುತ್ತಿದ್ದಾರೆ.
ಆರ್ ಟಿಐ ಸಲ್ಲಿಸಿದ್ದ ಚಂದ್ರಶೇಖರ್ ವಿ. ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ್ದು, ಕೋಡಿಚಿಕ್ಕನಹಳ್ಳಿಯ ರಾಜಾಕಾಲುವೆಯ ಸರ್ವೆನಂಬರ್ 24/6 ನಲ್ಲಿ ನಡೆದಿದ್ದ ಒತ್ತುವರಿಯ ಕುರಿತು ಅಂಜನಪ್ಪ ಅವರಿಂದ ಮಾಹಿತಿ ಕೇಳಿದ್ದರು.
ಅಂಜನಪ್ಪ ಅವರನ್ನು ಸಂಪರ್ಕಿಸಿದಾಗ "ಕೋವಿಡ್-19 ದೃಢಪಟ್ಟ ಹಿನ್ನೆಲೆಯಲ್ಲಿ ಜು.13 ರಂದು ಆಸ್ಪತ್ರೆಗೆ ದಾಖಲಾಗಿರುವುದಾಗಿ ಅಂಜನಪ್ಪ ಹೇಳಿದ್ದರು. ದಾಖಲೆಗಳ ಪ್ರಕಾರ ಅವರು ಜು.27 ರ ವರೆಗೆ ಆಸ್ಪತ್ರೆಯಲ್ಲೇ ಇರಬೇಕಾಗಿತ್ತು. ಅವರನ್ನು 14 ದಿನಗಳ ಕಾಲ ಹೋಂ ಕ್ವಾರಂಟೈನ್ ಆಗಿರುವುದಕ್ಕೆ ಸೂಚಿಸಲಾಗಿತ್ತು.
"ನಾನು ಒತ್ತುವರಿಯ ಬಗ್ಗೆ ಮಾಹಿತಿ ಕೇಳಿ ಆರ್ ಟಿಐ ಸಲ್ಲಿಸಿದ್ದೆ. ಕೋರ್ಟ್ ನಿರ್ದೇಶನ ನೀಡಿ, ಡಾಟಾ ಪಡೆಯುವುದಕ್ಕೆ ದಾಖಲಾತಿಗಳನ್ನು ಪರಿಶೀಲಿಸುವಂತೆ ಹೇಳಿದ್ದಾಗಿ ಚಂದ್ರಶೇಖರ್ ತಿಳಿಸಿದ್ದಾರೆ. ಈ ವೇಳೆ ಕೋವಿಡ್-19 ಬಂದಿದ್ದರೂ ಮೇಲೆ ಹೇಳಿದ ಅವಧಿಯಲ್ಲಿ ಪ್ರತಿ ದಿನವೂ ಅಂಜನಪ್ಪ ಅವರು ಬಿಬಿಎಂಪಿ ದಾಖಲಾತಿ ಪುಸ್ತಕದಲ್ಲಿ ಸಹಿ ಹಾಕಿರುವುದನ್ನು ನೋಡಿದ್ದೆ ಎಂದು ಚಂದ್ರಶೇಖರ್ ಹೇಳಿದ್ದು, ಇದು ಐಸಿಎಂಆರ್ ಹಾಗೂ ರಾಜ್ಯ ಸರ್ಕಾರದ ನಿಯಮಗಳ ಉಲ್ಲಂಘನೆ ಎಂದು ಆರೋಪಿಸಿದ್ದಾರೆ.
ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಈ ಬಗ್ಗೆ ವಿಚಾರಿಸಿದಾಗ ಪ್ರತಿಕ್ರಿಯೆ ನೀಡಿರುವ ಅಂಜನಪ್ಪ, ನನಗೆ ಕೋವಿಡ್-19 ಬಂದು ಆಸ್ಪತ್ರೆಗೆ ದಾಖಲಾಗಿದ್ದೆ. ದಾಖಲಾತಿ ಪುಸ್ತಕಗಳ ಬಗ್ಗೆ ನನಗೆ ತಿಳಿದಿಲ್ಲ. ಯಾರೋ ಅದನ್ನು ತಿದ್ದಿರಬಹುದು ಎಂದು ಹೇಳಿದ್ದಾರೆ.
ಈ ಪ್ರಕರಣದ ಬಗ್ಗೆ ಗಮನ ಹರಿಸುವುದಾಗಿ ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತ ತಿಳಿಸಿದ್ದಾರೆ.
Advertisement