ಮಂಡ್ಯ: ಹಳೇ ವೈಷಮ್ಯದ ಹಿನ್ನಲೆಯಲ್ಲಿ ಎಳನೀರು ವ್ಯಾಪಾರಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಮದ್ದೂರು ತಾಲ್ಲೂಕಿನ ದೊಡ್ಡ ಅರಸಿನಕೆರೆ ಗ್ರಾಮದಲ್ಲಿ ಕಳೆದ ಸೋಮವಾರ ರಾತ್ರಿ ನಡೆದಿದೆ.
ಚಿಕ್ಕಮರಿಗೌಡನ ದೊಡ್ಡಿ ಗ್ರಾಮದ ಶಿವು(21) ಎಂಬಾತನೇ ಮೃತಪಟ್ಟಿರುವ ಎಳನೀರು ವ್ಯಪಾರಿಯಾಗಿದ್ದು, ದೊಡ್ಡರಸಿನಕೆರೆ ಗ್ರಾಮದ ಶ್ರೀಧರ್ ನಿಂದ ಕೃತ್ಯ ನಡೆದಿದೆ ಎಂದು ಆರೋಪಿಸಲಾಗಿದೆ.
ಘಟನೆ ಹಿನ್ನೆಲೆ: ಎಳನೀರು ವ್ಯಾಪಾರಿಯಾಗಿದ್ದ ಶಿವು ಕೆಲಸ ಮುಗಿಸಿ ಮನೆಗೆ ವಾಪಸ್ಸು ಬರುತ್ತಿದ್ದ ವೇಳೆ ದೊಡ್ಡರಸಿನಕೆರೆಯ ಬಳಿ ಚಾಕುವಿನಿಂದ ಇರಿದು ಶ್ರೀಧರ್ ಪರಾರಿಯಾಗಿದ್ದಾನೆ, ಚಾಕು ಇರಿತದಿಂದ ತೀವ್ರ ಗಾಯಗೊಂಡು ರಸ್ತೆಯಲ್ಲೇ ಬಿದ್ದಿದ್ದ ಶಿವು ಅವರನ್ನು ಸಮೀಪದ ಭಾರತೀನಗರ ಜಿ,ಮಾದೇಗೌಡ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಮೊನ್ನೆ(ಭಾನುವಾರ) ಆತ್ಮಲಿಂಗೇಶ್ವರ ಜಾತ್ರೆಯಲ್ಲಿಯೂ ಸಹ ಕ್ಷುಲ್ಲಕ ಕಾರಣಕ್ಕೆ ಶ್ರೀಧರ್ ಮತ್ತು ಶಿವು ನಡುವೆ ಜಗಳ ನಡೆದಿತ್ತು ಎನ್ನಲಾಗಿದ್ದು, ಸೇಡಿಗಾಗಿ ಇಂದು(ಸೋಮವಾರ) ರಾತ್ರಿ ಆರೋಪಿ ಶ್ರೀಧರ್ ದೊಡ್ಡರಸಿನಕೆರೆಯ ಮಾರ್ಗಮಧ್ಯೆ ಶಿವನೊಂದಿಗೆ ಜಗಳ ತೆಗೆದು ಚಾಕುವಿನಿಂದ ಇರಿದಿದ್ದಾನೆ ಎಂದು ಆರೋಪಿಸಲಾಗಿದೆ.
ಈ ಸಂಬಂಧ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಪತ್ತೆಗಾಗಿ ತಂಡ ರಚನೆ ಮಾಡಲಾಗಿದೆ.
Advertisement