ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್ ಪತ್ತೆ, ಸತ್ಯಾಸತ್ಯತೆ ಬಯಲಿಗೆಳೆಯಲು ಎಸ್.ಡಿ.ಪಿ.ಐ ಆಗ್ರಹ

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್ ಪತ್ತೆಯಾಗಿರುವ ಪ್ರಕರಣವು ಆತಂಕಕಾರಿ ವಿಚಾರವಾಗಿದೆ. ಈ ಪ್ರಕರಣದ ವಾಸ್ತವವನ್ನು ಬಹಿರಂಗ ಪಡಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಎಸ್.ಡಿ.ಪಿ.ಐ ಸಮಿತಿಯು ಆಗ್ರಹಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್ ಪತ್ತೆಯಾಗಿರುವ ಪ್ರಕರಣವು ಆತಂಕಕಾರಿ ವಿಚಾರವಾಗಿದೆ. ಈ ಪ್ರಕರಣದ ವಾಸ್ತವವನ್ನು ಬಹಿರಂಗ ಪಡಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಎಸ್.ಡಿ.ಪಿ.ಐ ಸಮಿತಿಯು ಆಗ್ರಹಿಸಿದೆ.

ಈ ಬಗ್ಗೆ ದ.ಕ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಹೇಳಿಕೆ ಬಿಡುಗಡೆ ಮಾಡಿದ್ದು, ಇಡೀ ಪ್ರಕರಣ ಸಂಶಾಯಸ್ಪದ ರೀತಿಯಲ್ಲಿ ಸಾಗುತ್ತಿದೆ. ಪತ್ತೆಯಾಗಿರುವ ಬಾಂಬ್ ನ್ನು ಒಮ್ಮೆ ಆಟೋ ರಿಕ್ಷಾದಲ್ಲಿ ತಂದಿಡಲಾಗಿದೆ ಎಂದು ಹೇಳಲಾಗುತ್ತಿದೆ. ಅದೇ ಸಮಯದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಂತಹ ಸೂಕ್ಷ್ಮ ಸ್ಥಳಗಳಲ್ಲಿ ಸುಸ್ಥಿಯಲ್ಲಿರಬೇಕಾದ ಸಿಸಿ ಕ್ಯಾಮರಾಗಳು ಕಾರ್ಯನಿರ್ವಹಣೆ ಮಾಡುತ್ತಿರಲಿಲ್ಲ ಎಂದು ಅಧಿಕಾರಿಗಳು ಹೇಳುತ್ತಿರುವುದರಿಂದ ಜನರಲ್ಲಿ ಈ ಪ್ರಕರಣದ ಬಗ್ಗೆ ಗೊಂದಲ ಮೂಡುವಂತಾಗಿದೆ. ಹಾಗೆಯೇ ಇಷ್ಟರವರೆಗೆ ಇಡೀ ದೇಶದಲ್ಲಿ ಎಲ್ಲಿ ಬಾಂಬ್ ಸ್ಫೋಟ ನಡೆದರೂ ಅದನ್ನು ಅಲ್ಪಸಂಖ್ಯಾತ ಸಮುದಾಯದ ಯುವಕರ ತಲೆಗೆ ಕಟ್ಟಿ ವರ್ಷಗಟ್ಟಲೆ ಜೈಲಿನಲ್ಲಿ ಕೊಳೆಯುವಂತೆ ಮಾಡಿ ಕೊನೆಗೆ ನಿರಪರಾಧಿಯಾಗಿ ಹೊರ ಬರುತ್ತಿರುವ ಪ್ರಕರಣಗಳು ದೇಶದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವಾಗಲೇ, ಅತೀ ಸೂಕ್ಷ್ಮ ನಗರವಾದ ಮಂಗಳೂರಿನಲ್ಲಿ ಕೂಡ ಅದೇ ರೀತಿ ಮಾಡಿ ಮುಂದಿನ ದಿನಗಳಲ್ಲಿ ಈ ಪ್ರಕರಣವನ್ನು ಕೂಡ ಅಲ್ಪಸಂಖ್ಯಾತರ ತಲೆಗೆ ಕಟ್ಟುವ ಯೋಜನೆಯೆಂದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಮಾತ್ರವಲ್ಲದೆ ಮಂಗಳೂರು ಗೋಲಿಬಾರ್ ಪ್ರಕರಣದ ದಿಕ್ಕು ತಪ್ಪಿಸುವ ಹುನ್ನಾರದಂತೆ ಭಾಸವಾಗುತ್ತಿದೆ. ಅದೇ ರೀತಿಯಲ್ಲಿ ಗೋಲಿಬಾರ್ ಪ್ರಕರಣದ ಬಗ್ಗೆ ನೈಜ ಘಟನೆಗಳ ವೀಡಿಯೋ ಬಿಡುಗಡೆಗೊಳಿಸಿದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ನಾಳೆ ಮಂಗಳೂರಿಗೆ ಆಗಮಿಸಿ ಗೋಲಿಬಾರ್ ಪ್ರಕರಣದ ಇನ್ನಷ್ಟು ವಾಸ್ತವಾಂಶವನ್ನು ಬಯಲಿಗೆಳೆಯುವ ಬಗ್ಗೆ ಪೊಲೀಸ್ ಇಲಾಖೆಗೆ ಹೆದರಿಕೆಯಾಯಿತು? ಆ ಕಾರಣದಿಂದ ಅವರನ್ನು ಬರದ ಹಾಗೆ ತಡೆಯುವ ಭಾಗವೆಂಬಂತೆ ಜನರೆಡೆಯಲ್ಲಿ ಚರ್ಚೆಯಾಗುತ್ತಿದೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ ಹಿಂದಿನಿಂದಲೂ ಅಲ್ಪಸಂಖ್ಯಾತ ಸಮುದಾಯದ ಜನರನ್ನು ವಿನಾಕಾರಣ ತನಿಖೆಯ ನೆಪದಲ್ಲಿ ಅನಗತ್ಯ ತೊಂದರೆಗಳನ್ನು ಕೊಡುವ ಜಾಯಮಾನವು ನಡೆಯುತ್ತಾ ಬಂದಿದೆ. 

ಇದೀಗ ಈ ಪ್ರಕರಣವನ್ನು ಮುಂದಿಟ್ಟುಕೊಂಡು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ತೊಂದರೆಗೆ ಸಿಲುಕಿಸುವ ಸಾಧ್ಯತೆಯಿದೆ, ಇವೆಲ್ಲಕ್ಕಿಂತಲು ಗಂಭೀರವಾದ ಮತ್ತು ಆಶ್ಚರ್ಯಕರ ಸಂಗತಿ ಎಂದರೆ ಅತ್ಯಂತ ಕಠಿಣ ಭದ್ರತಾ ತಪಾಸಣಾ ಇರುವ ಈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುತ್ತಮುತ್ತಲಿನ ಎಲ್ಲಾ ಕಡೆಗಳಲ್ಲಿ ಕೂಡ ಸಿಸಿ ಕ್ಯಾಮರಾ, ಪೋಲಿಸ್ ಮತ್ತು ಸೈನಿಕರ ಭದ್ರತೆಯೆಲ್ಲಾ ಇರುವಾಗ ಒಳಗಡೆ ಸಣ್ಣ ಬ್ಲೇಡ್ ನ್ನು ಸಾಗಿಸಲು ಅನುಮತಿ ಇರದಂತಹ ಇಂತಹ ಸೂಕ್ಷ್ಮ ಜಾಗಕ್ಕೆ ಅನುಮಾನಾಸ್ಪದ ಒಬ್ಬ ವ್ಯಕ್ತಿ ಬಂದು ಸ್ಫೋಟಕ ವಸ್ತುಗಳನ್ನು ತರಲು ಹೇಗೆ ಸಾದ್ಯವಾಯಿತು ಎಂಬ ಪ್ರಶ್ನೆಗಳು ಮೂಡಿ ಬರುತ್ತವೆ. ಈ ಬಗ್ಗೆ ಎಲ್ಲಾ ಸಂಶಯವನ್ನು ಮತ್ತು ಗೊಂದಲವನ್ನು ನಿವಾರಿಸಲು ಸರಕಾರವು ಉನ್ನತ ಪೊಲೀಸ್ ಅಧಿಕಾರಿಗಳ ಮೂಲಕ ನಿಷ್ಪಕ್ಷಪಾತ ತನಿಖೆ ನಡೆಸಿ ಸತ್ಯಾಸತ್ಯತೆ ಹೊರ ತರಬೇಕೆಂದು ಅತಾವುಲ್ಲಾ ಜೋಕಟ್ಟೆ ಆಗ್ರಹಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com