ಮಾಜಿ ಶಾಸಕ, ಬೆಂಬಲಿಗರಿಂದ ಗೂಂಡಾಗಿರಿ: ಒತ್ತುವರಿ ತೆರವು ಕಾರ್ಯದಲ್ಲಿ ತೊಡಗಿದ್ದ ಜೆಸಿಬಿ ಚಾಲಕನ ಮೇಲೆ ಹಲ್ಲೆ

ಸರ್ಕಾರಿ ಜಾಗ ಒತ್ತುವರಿ ತೆರವುಕಾರ್ಯದಲ್ಲಿ ತೊಡಗಿದ್ದ ಜೆಸಿಬಿ ಚಾಲಕನ ಮೇಲೆ ಪೊಲೀಸರ ಮುಂದೆಯೇ ಮಾಜಿ ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರು ಹಲ್ಲೆ ನಡೆಸುವ ಮೂಲಕ ಗೂಂಡಾಗಿರಿ ನಡೆಸಿದ ಘಟನೆ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಅರಕೆರೆಯಲ್ಲಿ ನಡೆದಿದೆ.
ಮಾಜಿ ಶಾಸಕ ರಮೇಶ್ ಬಂಡಿ ಸಿದ್ದೇಗೌಡ
ಮಾಜಿ ಶಾಸಕ ರಮೇಶ್ ಬಂಡಿ ಸಿದ್ದೇಗೌಡ

ಮಂಡ್ಯ: ಸರ್ಕಾರಿ ಜಾಗ ಒತ್ತುವರಿ ತೆರವುಕಾರ್ಯದಲ್ಲಿ ತೊಡಗಿದ್ದ ಜೆಸಿಬಿ ಚಾಲಕನ ಮೇಲೆ ಪೊಲೀಸರ ಮುಂದೆಯೇ ಮಾಜಿ ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರು ಹಲ್ಲೆ ನಡೆಸುವ ಮೂಲಕ ಗೂಂಡಾಗಿರಿ ನಡೆಸಿದ ಘಟನೆ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಅರಕೆರೆಯಲ್ಲಿ ನಡೆದಿದೆ.

ಸುಮಾರು ೧೦ ಕೋಟಿ ರೂ. ವೆಚ್ಚದಲ್ಲಿ ಅರಕೆರೆ ಗ್ರಾಮದಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದು, ಸ್ಥಳಕ್ಕೆ ಬಂದ ಮಾಜಿ ಶಾಸಕ ರಮೇಶ್ ಬಂಡಿಸಿದ್ದೇಗೌಡ, ಜೆಸಿಬಿ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ.

ಅಧಿಕಾರಿಗಳು ಹಾಗೂ ಪೊಲೀಸರ ಸಮ್ಮುಖದಲ್ಲೇ ತೆರವು ಕಾರ್ಯಾಚರಣೆ ನಡೆಯುವಾಗ ಮಧ್ಯ ಪ್ರವೇಶಿಸಿದ ಮಾಜಿ ಶಾಸಕ ರಮೇಶ್ ಬಂಡಿಸಿದ್ದೇಗೌಡ ಹಾಗೂ ಬೆಂಬಲಿಗರು ಜೆಸಿಬಿ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಈ ವೇಳೆ ಚಾಲಕನನ್ನು ಹಿಡಿದು ಬಂಡಿಸಿದ್ದೇಗೌಡ ಥಳಿಸಿದ್ದಾರೆ.  ಇದರಿಂದಾಗಿ ಅರಕೆರೆ ಗ್ರಾಮದಲ್ಲಿ ಬಿಗುವಿನ ವಾತಾವರಣ ಉಂಟಾಗಿತ್ತು.

ಅರಕೆರೆಯು ಹಾಲಿ ಶಾಸಕ ರವೀಂದ್ರ ಶ್ರೀಕಂಠಯ್ಯ ಹಾಗೂ ಮಾಜಿ ಶಾಸಕ ರಮೇಶ್ ಬಂಡಿಸಿದ್ದೇಗೌರ ಸ್ವಗ್ರಾಮದವರಾಗಿದ್ದು ಇದೇ ತಿಂಗಳ ೬ ರಂದು ಶ್ರೀರಂಗಪಟ್ಟಣದ ಪಿಎಲ್ಡಿ ಬ್ಯಾಂಕ್ ಮಳಿಗೆಯ ಉದ್ಘಾಟನೆ ವಿಚಾರದಲ್ಲಿ ಮಾಜಿ ಮತ್ತು ಹಾಲಿ ಶಾಸಕರ ಬೆಂಬಲಿಗರ ನಡುವೆ ಹೊಡೆದಾಟವಾಗಿತ್ತು. ಕ್ಷೇತ್ರದಲ್ಲಿ ಹಾಲಿ, ಮಾಜಿ ಶಾಸಕರ ರಂಪಾಟ ತಾರಕ್ಕೇರಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಮಂಡ್ಯ ಎಸ್ಪಿ ಪರಶುರಾಮ್, ಅರಕೆರೆಯಲ್ಲಿ  ರಸ್ತೆ ಅಗಲಿಕರಣ ಕೆಲಸ ನಡೆಯುತ್ತಿತ್ತು. ಅಧಿಕಾರಿಗಳು ಎಲ್ಲರೂ ಸ್ಥಳದಲ್ಲಿದ್ದು ಸಮಾಜಯಿಷಿ ನೀಡಿದ್ದರೂ ಕೆಲವರು ಕೆಲಸಕ್ಕೆ ಅಡ್ಡಿಪಡಿಸಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸಿ, ಕೆಲಸಕ್ಕೆ ಅಡ್ಡಿಪಡಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.ಸರ್ಕಾರಿ ಅಧಿಕಾರಿಗಳ ಅಣತಿಯಂತೆ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲೆ ಹಲ್ಲೆ ನಡೆಸಿದ ಮಾಜಿ ಶಾಸಕರ ನಡೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಮಾಜಿ ಶಾಸಕ ರಮೇಶ ಬಂಡಿಸಿದ್ದೇಗೌಡ ಪೊಲೀಸರ ವಶಕ್ಕೆ: ಅರಕೆರೆಯಲ್ಲಿ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸದಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿ ಎಇಇ ಮಹೇಶ್  ನೀಡಿದ ದೂರಿನ ಆಧಾರದ ಮೇಲೆ ಮಾಜಿ ಶಾಸಕ ರಮೇಶ ಬಂಡಿಸಿದ್ದೇಗೌಡ,ತಾಪಂ ಸದಸ್ಯ ಸಂತೋಷ್ ಹಾಗೂ ಎಬಿಆರ್ ಬಳಗದ ಅಧ್ಯಕ್ಷ ಶಶಾಂಕ್ ಅವರನ್ನು ವಶಕ್ಕೆ ಪಡೆದಿದ್ದ ಪೊಲೀಸರು ಶ್ರೀರಂಗಪಟ್ಟಣದ 3ನೇ ಜಿಲ್ಲಾ ಮತ್ತು ಅಪರ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು.ನಂತರ ಷರತ್ತುಬದ್ಧ ಜಾಮೀನಿನೊಂದಿಗೆ ಮೂವರನ್ನು ಬಿಡುಗಡೆ ಮಾಡಲಾಗಿದೆ. 

ವರದಿ:ನಾಗಯ್ಯ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com