ತುಮಕೂರು: ಕೊಳವೆ ಬಾವಿ ಕೊರೆಸಿದ್ದ ಎಂದು ಸಿಟ್ಟಿನಿಂದ ದಲಿತನ ಮೇಲೆ ಮೇಲ್ವರ್ಗದ ಜಾತಿಯವರು ಹಲ್ಲೆ ಮಾಡಿದ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ತಿಪ್ಪಾಪುರದಲ್ಲಿ ನಡೆದಿದೆ.
65 ವರ್ಷದ ವೃದ್ಧ ಹನುಮಂತರಾಯಪ್ಪನ ಕೈ ಮತ್ತು ಕಾಲುಗಳು ಮುರಿದಿದ್ದು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಮರದ ತುಂಡು ಮತ್ತು ಲೋಹದ ಸಲಾಕೆಯಿಂದ ಹೊಡೆದು ನನ್ನನ್ನು ಸಾಯಿಸಲು ಪ್ರಯತ್ನಿಸಿದರು ಎಂದು ಹನುಮಂತರಾಯಪ್ಪ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.
ಪ್ರಕರಣ ಸಂಬಂಧ ಪೊಲೀಸರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ನರಸಿಂಹಮೂರ್ತಿ, ಆತನ ಸೋದರ ಅಶ್ವಥ್ ನ ವಿರುದ್ಧ ಕೇಸು ದಾಖಲಿಸಿದ್ದಾರೆ. ತಮ್ಮ ಜಮೀನಿನ ಪಕ್ಕದಲ್ಲಿಯೇ ಹನುಮಂತರಾಯಪ್ಪ ಕೊಳವೆ ಬಾವಿ ಕೊರೆಸಿ ನೀರು ಸಿಕ್ಕಿದ್ದರಿಂದ ಕೆಲ ಸಮಯ ಕಳೆದ ನಂತರ ಎಲ್ಲಿ ತಮ್ಮ ಕೊಳವೆ ಬಾವಿಯಲ್ಲಿ ನೀರು ಬತ್ತಿಹೋಗಬಹುದೋ ಎಂಬ ಮತ್ಸರದಿಂದ ಹಲ್ಲೆ ನಡೆಸಿದ್ದಾರೆ ಎಂದು ಅಕ್ಕಪಕ್ಕದ ಗ್ರಾಮಸ್ಥರು ಪೊಲೀಸರಿಗೆ ಹೇಳಿದ್ದಾರೆ.
ಇತ್ತ ಪೊಲೀಸರು ಆರೋಪಿಗಳಿಂದಲೂ ಪ್ರತಿದೂರು ಸ್ವೀಕರಿಸಿ ಹನುಮಂತರಾಯಪ್ಪ ಮತ್ತು ಆತನ ಮನೆಯವರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
Advertisement