ಕೊಪ್ಪಳ: ಕೊಪ್ಪಳ ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ ಶುರುವಾಗಿದೆ. ಬುಧವಾರ ಸೋಂಕಿತ ಮಹಿಳೆಯನ್ನು ಬಲಿ ಪಡೆದ ಕೊರೊನಾ ಇಂದು (ಶುಕ್ರವಾರ) ಮತ್ತೆ ಆರು ಜನರಿಗೆ ತಗುಲಿದೆ.
ಜೂನ್ 16ರಂದು ಆಂಧ್ರಪ್ರದೇಶದ ವಿಜಯವಾಡದಿಂದ ಗಂಗಾವತಿ ತಾಲೂಕಿನ ಶ್ರೀರಾಮನಗರಕ್ಕೆ ಬಂದಿದ್ದ 45 ವರ್ಷದ ವ್ಯಕ್ತಿ, 40 ವರ್ಷದ ಮಹಿಳೆ ಮತ್ತು 17 ವರ್ಷದ ಯುವತಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢವಾಗಿದೆ.
ಬಳ್ಳಾರಿ ಜಿಲ್ಲೆಯ ಮಲಪನಗುಡಿಯಿಂದ ಹುಲಗಿಗೆ ಜೂನ್ 14ರಂದು ಆಗಮಿಸಿದ್ದ ಹುಲಗಿಯ 65 ವರ್ಷದ ವ್ಯಕ್ತಿಗೆ, ಜೂನ್ 12ರಂದು ಜಿಂದಾಲ್ನಿಂದ ಬಂದಿದ್ದ ಹೊಸಲಿಂಗಾಪುರದಲ್ಲಿ 38 ವರ್ಷದ ವ್ಯಕ್ತಿಗೆ ಹಾಗೂ ಜೂನ್ 16ರಂದು ಬೆಂಗಳೂರಿನಿಂದ ಬಂದಿದ್ದ ಕುಕನೂರಿನ ಕಕ್ಕಿಹಾಳದಲ್ಲಿ 14 ವರ್ಷದ ಬಾಲಕನಿಗೆ ಒಬ್ಬರಿಗೆ ಕೊರೊನಾ ವೈರಸ್ ಅಟ್ಯಾಕ್ ಆಗಿರುವುದು ಕನ್ಫರ್ಮ್ ಆಗಿದೆ.
ಜಿಲ್ಲೆಯಲ್ಲಿ ಇಂದು ಪತ್ತೆಯಾಗಿರುವ ಆರು ಜನ ಸೋಂಕಿತರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರನ್ನು ಜಿಲ್ಲಾಡಳಿತ ಪತ್ತೆ ಮಾಡುತ್ತಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ಕುಮಾರ್ ತಿಳಿಸಿದ್ದಾರೆ. ಒಟ್ಟಾರೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 28ಕ್ಕೇರಿದೆ. ಇದರಲ್ಲಿ 11 ಜನ ಗುಣಮುಖರಾಗಿದ್ದು, ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ. ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ 16ಕ್ಕೆ ಏರಿಕೆ ಕಂಡಿದೆ.
ವರದಿ: ಬಸವರಾಜ ಕರುಗಲ್
Advertisement