ಬೆಂಗಳೂರು: ಸ್ವಾತಂತ್ರ್ಯ ಉದ್ಯಾನದಲ್ಲಿ ಆಯೋಜಿಸಲಾಗಿದ್ದ ಪೌರತ್ವ ವಿರೋಧಿ ತಿದ್ದುಪಡಿ ಕಾಯ್ದೆ ಪ್ರತಿಭಟನೆಯ ಸಂದರ್ಭದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿ ದೇಶದ್ರೋಹ ಪ್ರಕರಣದಲ್ಲಿ ಬಂಧಿಯಾಗಿದ್ದ ಅಮೂಲ್ಯ ಲಿಯೋನಾ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್ಐಎ) ವಹಿಸಬೇಕೆಂದು ಕೋರಿ ರಾಜ್ಯ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಲಾಗಿದೆ.
ಮಂಡ್ಯ ಮೂಲದ ವಕೀಲ ಎಚ್ ಎಲ್ ವಿಶಾಲಾ ರಘು ಎನ್ನುವವರು ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದು ಕೋರ್ಟ್ ಅರ್ಜಿಯ ವಿಚಾರಣೆ ಇನ್ನೂ ಪ್ರಾರಂಭಿಸಿಲ್ಲ.
ಪ್ರಕರಣ ನೊಂದಾಯಿಸಿರುವ ಉಪ್ಪಾರಪೇಟೆ ಪೋಲೀಸರು ಮತ್ತು ತನಿಖಾ ಅಧಿಕಾರಿ ಈ ಪ್ರಕರಣದಲ್ಲಿ ಇನ್ನೂ ನಿಗದಿತ ಅವಧಿಯೊಳಗೆ ಚಾರ್ಜ್ಶೀಟ್ ದಾಖಲಿಸಿಲ್ಲ ಎಂದು ಅರ್ಜಿದಾರರು ಆರೋಪಿಸಿದ್ದಾರೆ. "ಕಾನೂನು ನಿಬಂಧನೆಗಳ ಲಾಭವನ್ನು ಪಡೆದುಕೊಂಡು, ಆರೋಪಿ ಇದಾಗಲೇ ಜಾಮೀನು ಪಡೆದಿದ್ದಾರೆ. ಆದ್ದರಿಂದ, ತನಿಖಾ ಅಧಿಕಾರಿಯನ್ನು ಸೇವೆಯಿಂದ ಅಮಾನತುಗೊಳಿಸುವಂತೆ ಮತ್ತು ಆಕೆಗೆ ನೀಡಲಾದ ಜಾಮೀನು ರದ್ದುಗೊಳಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು" ಎಂದು ಅರ್ಜಿಯಲ್ಲಿ ಕೋರಲಾಗಿದೆ.
ಏತನ್ಮಧ್ಯೆ, ಅಮೂಲ್ಯ ಲಿಯೋನಾ ವಿರುದ್ಧ ಸರ್ಕಾರದ ಪರವಾಗಿ ವಾದಿಸಲು ಸರ್ಕಾರ ಐ ಎಸ್ ಪ್ರಮೋದ್ ಚಂದ್ರ ಅವರನ್ನು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ನೇಮಿಸಿದೆ.
Advertisement