ನಾಳೆ ಸಂಜೆಯೊಳಗೆ ಹಾಸ್ಟೆಲ್ ಖಾಲಿಮಾಡಿ, ಬರುವಾಗ ವೈದ್ಯಕೀಯ ಪ್ರಮಾಣಪತ್ರ ತನ್ನಿ: ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ಆದೇಶ

ಕೋವಿಡ್-19  ವೈರಸ್ ನಿಯಂತ್ರಿಸುವ ಉದ್ದೇಶದಿಂದ ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಗೊಳಪಡುವ ವಿಶ್ವವಿದ್ಯಾಲಯಗಳ ಎಲ್ಲಾ ವಸತಿ ನಿಲಯಗಳಿಗೆ ಸೋಮವಾರದಿಂದ ಮಾಸಾಂತ್ಯದ ವರೆಗೆ ರಜೆ ಘೋಷಿಸಲಾಗಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕೋವಿಡ್-19  ವೈರಸ್ ನಿಯಂತ್ರಿಸುವ ಉದ್ದೇಶದಿಂದ ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಗೊಳಪಡುವ ವಿಶ್ವವಿದ್ಯಾಲಯಗಳ ಎಲ್ಲಾ ವಸತಿ ನಿಲಯಗಳಿಗೆ ಸೋಮವಾರದಿಂದ ಮಾಸಾಂತ್ಯದ ವರೆಗೆ ರಜೆ ಘೋಷಿಸಲಾಗಿದೆ. 
ಹೀಗಾಗಿ ಭಾನುವಾರ ಸಂಜೆಯೊಳಗಾಗಿ ವಸತಿ ನಿಲಯಗಳನ್ನು ತೊರೆಯಬೇಕು. ಮತ್ತೆ ಏಪ್ರಿಲ್ 1 ರಿಂದ ವಸತಿ ನಿಲಯಕ್ಕೆ ವಾಪಸ್ ಅಗುವಾಗ ತಮಗೆ ಕೋವಿಡ್ – 19 ಸೋಂಕು ವ್ಯಾಪಿಸಿಲ್ಲ ಎಂಬ ಪ್ರಮಾಣಪತ್ರ ಸಲ್ಲಿಸುವುದು ಕಡ್ಡಾಯವಾಗಿದೆ ಎಂದು ಉನ್ನತ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. 

ವೈರಸ್ ನಿಯಂತ್ರಿಸುವ ದೃಷ್ಟಿಯಿಂದ ಶನಿವಾರದಿಂದ ಜಾರಿಗೆ ಬರುವಂತೆ ಉನ್ನತ ಶಿಕ್ಷಣ ಇಲಾಖೆಯ ವ್ಯಾಪ್ತಿಗೊಳಪಟ್ಟ ವಿಶ್ವವಿದ್ಯಾಲಯ ಮತ್ತು ಈ ವ್ಯಾಪ್ತಿಗೆ ಒಳಪಟ್ಟ ಕಾಲೇಜುಗಳ ವಿದ್ಯಾರ್ಥಿಗಳಿಗೆ 15 ದಿನಗಳ ಕಾಲ ರಜೆ ಘೋಷಿಸಲಾಗಿದೆ. ಜತೆಗೆ ವಿಶ್ವವಿದ್ಯಾಲಯದ ಎಲ್ಲಾ ಸ್ನಾತಕೋತ್ತರ ವಿಭಾಗಗಳು ಹಾಗೂ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸೋಮವಾರದಿಂದ ಮಾಸಾಂತ್ಯದ ವರೆಗೆ ರಜೆ ಘೋಷಿಸಲಾಗಿದೆ. ಜತೆಗೆ ಸೋಮವಾರದಿಂದಲೇ ವಸತಿ ನಿಲಯಗಳನ್ನು ಮುಚ್ಚಲು ಆದೇಶಿಸಲಾಗಿದ್ದು, ಭಾನುವಾರ ಸಂಜೆವೇಳೆಗೆ ಎಲ್ಲರೂ ವಸತಿ ನಿಲಯಗಳನ್ನು ತೆರವುಮಾಡಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಸೋಮವಾರದಿಂದ ಯಾವ ವಿದ್ಯಾರ್ಥಿಗಳು ವಸತಿ ನಿಲಯಗಳಲ್ಲಿ ವಾಸಮಾಡತಕ್ಕದ್ದಲ್ಲ. ಈ ಅವಧಿಯಲ್ಲಿ ಊಟೋಪಚಾರ ವ್ಯವಸ್ಥೆಯನ್ನು ಸಹ ನಿರ್ಬಂಧಿಸಲಾಗಿದೆ. ರಜಾ ಅವಧಿ ಮುಗಿದನಂತರ ಹಾಸ್ಟೆಲ್ ವಿದ್ಯಾರ್ಥಿಗಳು ಕೋವಿಡ್-19 (ಕೊರೊನಾ ವೈರಸ್) ಸೋಂಕು ಇರದ ಬಗ್ಗೆ ವೈದ್ಯಕೀಯ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕು ಎಂದು ಹೇಳಿದೆ. 

ರಜಾ ಅವಧಿ ಮುಗಿದನಂತರ ಎಲ್ಲಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದಲೂ ಸಹ ವೈದ್ಯಕೀಯ ತಪಾಸಣೆ ನಡೆಸಲಾಗುವುದು. ಬೆಂಗಳೂರು ವಿಶ್ವವಿದ್ಯಾಲಯದ ಎಲ್ಲಾ ವಿಭಾಗಗಳಲ್ಲಿ, ಕಛೇರಿಗಳಲ್ಲಿ ಬೋಧಕ/ಬೋಧಕೇತರ ಸಿಬ್ಬಂದಿ ಎಂದಿನಂತೆ ಕೆಲಸ ಕಾರ್ಯ ನಿರ್ವಹಿಸುತ್ತಾರೆ ಎಂದು ವಿಶ್ವವಿದ್ಯಾಲಯದ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com