ರಾಷ್ಟ್ರೀಯ ಕಾನೂನು ವಿದ್ಯಾಲಯ ತಿದ್ದುಪಡಿ ವಿಧೇಯಕ 2020: ಸರ್ವಾನುಮತದ ಅಂಗೀಕಾರ ನೀಡಿದ ಪರಿಷತ್

ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿರುವ ರಾಷ್ಟ್ರೀಯ ಕಾನೂನು ವಿದ್ಯಾಲಯ ತಿದ್ದುಪಡಿ ವಿಧೇಯಕ 2020 ಅನ್ನು ವಿಧಾನ ಪರಿಷತ್ ನಲ್ಲಿಂದು ಸರ್ವಾನುಮತದಿಂದ ಅಂಗೀಕರಿಸಲಾಯಿತು.
ವಿಧಾನಪರಿಷತ್ (ಸಂಗ್ರಹ ಚಿತ್ರ)
ವಿಧಾನಪರಿಷತ್ (ಸಂಗ್ರಹ ಚಿತ್ರ)

ಬೆಂಗಳೂರು: ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿರುವ ರಾಷ್ಟ್ರೀಯ ಕಾನೂನು ವಿದ್ಯಾಲಯ ತಿದ್ದುಪಡಿ ವಿಧೇಯಕ 2020 ಅನ್ನು ವಿಧಾನ ಪರಿಷತ್ ನಲ್ಲಿಂದು ಸರ್ವಾನುಮತದಿಂದ ಅಂಗೀಕರಿಸಲಾಯಿತು.

ವಿಧಾನ ಪರಿಷತ್ ನ ಶಾಸನ ರಚನೆ ಕಲಾಪದಲ್ಲಿ ರಾಷ್ಟ್ರೀಯ ಕಾನೂನು ವಿದ್ಯಾಲಯದಲ್ಲಿ‌ ರಾಜ್ಯದ ವಿದ್ಯಾರ್ಥಿಗಳಿಗೆ ಶೇ. 25 ರ ಮೀಸಲಾತಿ ಕಲ್ಪಿಸುವ ರಾಷ್ಟ್ರೀಯ ಕಾನೂನು ವಿದ್ಯಾಲಯ ತಿದ್ದುಪಡಿ ವಿಧೇಯಕವನ್ನು ಮಂಡಿಸಿ ಅಂಗೀಕಾರಕ್ಕೆ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಮನವಿ ಮಾಡಿದರು.

ವಿಧೇಯಕದ ಮೇಲೆ ಮಾತನಾಡಿದ ಜೆಡಿಎಸ್ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ, ಈ ತಿದ್ದುಪಡಿ ವಿಧೇಯಕವನ್ನು ಸ್ವಾಗತಿಸುತ್ತಿದ್ದೇವೆ, ನಾವು ಹಿಂದೆ ಪ್ರಯತ್ನ ಮಾಡಿದ್ದೆವು, ಆದರೆ ಆಗಿರಲಿಲ್ಲ, ಮೊದಲು ಬಿಲ್ ಜಾರಿಗೆ ತರಬೇಕು ನಂತರ‌ ಶೇ. 50 ಕ್ಕೆ‌ ಮೀಸಲಾತಿ ಹೆಚ್ಚಿಸಬೇಕು, ಐಐಟಿ ಸೇರಿ ಇತರೆಡೆಯೂ ಕರ್ನಾಟಕದ ವಿದ್ಯಾರ್ಥಿಗಳಿಗೆ ಮೀಸಲು‌ ಇರಬೇಕು ಆ ರೀತಿ ಪ್ರಯತ್ನಿಸಿ ಎಂದು ಸಲಹೆ ನೀಡಿದರು.

ಪ್ರತಿಪಕ್ಷ ನಾಯಕ ಎಸ್.ಆರ್ ಪಾಟೀಲ್ ಮಾತನಾಡಿ ಬಿಲ್ ಸ್ವಾಗತಿಸಿದರು. ಐಐಟಿ, ಐಐಎಂ, ಐಐಐ ಗಳಿಗೆ ಕೇಳಿದಷ್ಟು ಭೂಮಿ ಕೊಟ್ಟಿದ್ದೇವೆ, ಆದರೂ ನಮ್ಮ ರಾಜ್ಯದ ಮಕ್ಕಳಿಗೆ ಅವಕಾಶ ಕಡಿಮೆ ಇದೆ ಅದನ್ನು ಪರಿಶೀಲಿಸಬೇಕು, ಈಗ ಶೇ. 25 ಮೀಸಲಾತಿಯನ್ನು ಕಾನೂನು ವಿದ್ಯಾಲಯದಲ್ಲಿ ಕಲ್ಪಿಸಿ 2 ಕೋಟಿ ಅನುದಾನ ಕೊಡುವುದಾಗಿ ಹೇಳಿದ್ದೀರಿ, ಹತ್ತು ವರ್ಷ ಈ ನೆಲದಲ್ಲಿ ಓದಿದವರಿಗೆ ಮೀಸಲು ಕೊಟ್ಟಿರುವುದನ್ನು‌ ಸ್ವಾಗತಿಸುದ್ದೇನೆ ಎಂದು ವಿಧೇಯಕವನ್ನು ಬೆಂಬಲಿಸಿದರು.

ವಿಧೇಯಕದ ಮೇಲಿನ ಚರ್ಚೆಯ ನಂತರ ಪಕ್ಷಾತೀತವಾಗಿ ಸರ್ವಾನುಮತದಿಂದ ಧ್ವನಿಮತದ ಮೂಲಕ ರಾಷ್ಟ್ರೀಯ ಕಾನೂನು ವಿದ್ಯಾಲಯ ತಿದ್ದುಪಡಿ ವಿಧೇಯಕ 2020 ಅನ್ನು ಅಂಗೀಕರಿಸಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com