ಬೆಂಗಳೂರು: ಮೇ 20 ರಿಂದ ಹೋಟೆಲ್ ಗಳಲ್ಲಿ ಪಾರ್ಸೆಲ್ ಸೇವೆ ರದ್ದುಗೊಳಿಸುವುದಾಗಿ ಬಿಬಿಎಂಪಿ ಹೋಟೆಲ್ ಸಂಘದ ಸದಸ್ಯರು ಬೆದರಿಕೆ ಹಾಕಿದ್ದಾರೆ. ಹೋಟೆಲ್ಗಳಲ್ಲಿ ಕೇವಲ ಪಾರ್ಸೆಲ್ ಸೇವೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಬೀದಿ ಬದಿ ವ್ಯಾಪಾರಕ್ಕೆ ಅವಕಾಶ ನೀಡಿರುವ ಸರಕಾರ ಲಕ್ಷಾಂತರ ರೂ. ಸಾಲ ಮಾಡಿ ನಡೆಸುತ್ತಿರುವ ಹೋಟೆಲ್ಗಳಿಗೆ ಅನುಮತಿ ನೀಡಿಲ್ಲ. ಹಾಗಾಗಿ, ಹೋಟೆಲ್ಗಳನ್ನು ಸಂಪೂರ್ಣವಾಗಿ ಬಂದ್ ಮಾಡಿ ಬೀದಿ ಬದಿ ಹೋಟೆಲ್ ನಡೆಸುವುದಾಗಿ ಹೇಳಿದ್ದಾರೆ,
ನಾವು ನಾಲ್ಕು ದಿನಗಳ ಹಿಂದೆ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದೆವು, ಹೋಟೆಲ್ ತೆರೆಯಲು ಅನುಮತಿ ಕೋರಿದ್ದೇವು, ಈ ವೇಳೆ ಸಿಎಂ ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದರು, ಆದರೆ ಈಗ ನಮಗೆ ಹೋಟೆಲ್ ತೆರೆಯಲು ಅನುಮತಿ ನೀಡಿಲ್ಲ, ಗುರುವಾರ ಮತ್ತೆ ಸಿಎಂ ಭೇಟಿ ಮಾಡುತ್ತೇವೆ, ಒಂದು ವೇಳೆ ಸಾಧ್ಯವಾಗದಿದ್ದರೇ ಮೇ 20 ರಿಂದ ಪಾರ್ಸೆಲ್ ಸೇವೆ ರದ್ದುಗೊಳಿಸಲಿದ್ದೇವೆ ಎಂದು ಸಂಘ ತಿಳಿಸಿದೆ.
ನಾವು ಸರ್ಕಾರದ ಎಲ್ಲಾ ಮಾರ್ಗ ಸೂಚಿಗಳನ್ನು ಪಾಲಿಸುತ್ತೇವೆ, ಹವಾ ನಿಯಂತ್ರಿತ ಕೊಠಡಿ ಬಳಸುವುದಿಲ್ಲ, ಒಂದು ಟೇಬಲ್ ನಲ್ಲಿ ಇಬ್ಬರಿಗೆ ಮಾತ್ರ ಅವಕಾಶ ನೀಡುತ್ತೇವೆ, ಕೆಲವೇ ಕೆಲವು ಗ್ರಾಹಕರಿಗೆ ಮಾತ್ರ ಒಂದು ಬಾರಿಗೆ ಅವಕಾಶ ನೀಡುತ್ತೇವೆ. ಒಂದು ವೇಳೆ ಸರ್ಕಾರ ನಮ್ಮ ಮನವಿಗೆ ಸ್ಪಂದಿಸದಿದ್ದರೇ ಪಾರ್ಸೆಲ್ ಸೇವೆ ರದ್ದುಗೊಳಿಸುತ್ತೇವೆ ಎಂದು ತಿಳಿಸಿದ್ದಾರೆ.
Advertisement