ಬೆಂಗಳೂರು: ವಿಧಾನಸೌಧ, ವಿಕಾಸ ಸೌಧ ಹಾಗೂ ಬಹುಮಹಡಿ ಕಟ್ಟಡಗಳಲ್ಲಿ ಆಯುಧ ಪೂಜೆ ಮಾಡುವ ಸಂದರ್ಭದಲ್ಲಿ ರಸಾಯನಿಕಯುಕ್ತ ಬಣ್ಣಗಳನ್ನು ಕಚೇರಿಗಳ ಒಳಗೆ ಹಾಗೂ ಕಾರಿಡಾರ್ಗಳಲ್ಲಿ ಬಳಸಿದರೆ ಅಂತಹ ಇಲಾಖೆಯ ಮುಖ್ಯಸ್ಥರನ್ನೇ ಜವಾಬ್ದಾರರನ್ನಾಗಿ ಮಾಡುವುದಾಗಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶ ಹೊರಡಿಸಿದೆ.
ಆಯುಧ ಪೂಜೆ ಸಮಯದಲ್ಲಿ ಕಚೇರಿಗಳ ಒಳಗೆ ಮತ್ತು ಕಾರಿಡಾರ್ ಗಳಲ್ಲಿ ರಾಸಾಯನಿಕ ಮಿಶ್ರಿತ ಬಣ್ಣ ಬಳಸುವುದರಿಂದ ಹಾನಿಕಾರಕ ಬಣ್ಣ ನೆಲಹಾಸಿನ ಮೇಲೆ ಬಿದ್ದು ತಿಂಗಳುಗಳ ಕಾಲ ಹಾಗೆಯೇ ನೆಲಹಾಸಿನ ಮೇಲೆ ಅಂಟಿಕೊಳ್ಳುವುದರಿಂದ ನೆಲಹಾಸಿನ ಸೌಂದರ್ಯಕ್ಕೆ ಧಕ್ಕೆಯುಂಟಾಗುತ್ತಿದೆ. ಈ ಕುರಿತು ಹಿಂದೆಯೇ ಸುತ್ತೋಲೆ ಹೊರಡಿಸಿದರೂ ಅನೇಕ ಇಲಾಖೆಗಳು ಪಾಲನೆ ಮಾಡುತ್ತಿಲ್ಲ.
ಆಯುಧ ಪೂಜೆ ಸಂದರ್ಭದಲ್ಲಿ ಕುಂಬಳಕಾಯಿಗೆ ರಸಾಯನಿಕಯುಕ್ತ ಬಣ್ಣ ಹಾಗೂ ರಸಾಯನಿಕಯುಕ್ತ ಬಣ್ಣದ ರಂಗೋಲಿಯನ್ನು ಬಳಸದಂತೆ ಸೂಚಿಸಲಾಗಿದೆ. ಅಲ್ಲದೇ ಪೂಜೆಯ ದಿನವೇ ದೀಪಗಳನ್ನು ನಂದಿಸುವಂತೆ ಸೂಚಿಸಲಾಗಿದೆ.
Advertisement