ಮಳವಳ್ಳಿ: ಮಂಡ್ಯ ಜಿಲ್ಲೆಯ ಲಿಂಗಪಟ್ಟಣ ಗ್ರಾಮದ ಮಾರಮ್ಮ ದೇವಸ್ಥಾನವೊಂದರಲ್ಲಿ ಪ್ರಸಾದ ಸೇವಿಸಿದ ನಂತರ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 70 ಕ್ಕೂ ಹೆಚ್ಚು ಭಕ್ತಾಧಿಗಳು ಅಸ್ವಸ್ತಗೊಂಡಿರುವ ಘಟನೆ ಬುಧವಾರ ನಡೆದಿದೆ.
ಅಧಿಕೃತ ಮೂಲಗಳಂತೆ, ಪ್ರಸಾದ ಸೇವಿಸಿದ ಭಕ್ತಾಧಿಗಳು ವಾಂತಿ ಮಾಡಿಕೊಂಡು ಅಸ್ವಸ್ತಗೊಂಡಿದ್ದಾರೆ.
ಅಸ್ವಸ್ತಗೊಂಡ ಭಕ್ತಾಧಿಗಳನ್ನು ಮಳವಳ್ಳಿ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಗ್ರಾಮದ ನಡುವೆ ಇರುವ ಮಾರಮ್ಮನ ದೇವಸ್ಥಾನದಲ್ಲಿ ಪ್ರತೀ ಮಂಗಳವಾರ ವಿಶೇಷ ಪೂಜೆ ನಡೆಯುತ್ತದೆ. ಪೂಜೆ ನಂತರ ಪೊಂಗಲ್ ಹಾಗೂ ಪುಳಿಯೋಗರೆಯನ್ನು ಪ್ರಸಾದ ರೂಪದಲ್ಲಿ ನೀಡುತ್ತಾರೆ. ನಿನ್ನೆ ಸಹ ಇದೇ ರೀತಿ ಪ್ರಸಾದ ವಿತರಿಸಿದ್ದು ಪ್ರಸಾದ ಸೇವಿಸಿದ ಭಕ್ತರು ಅಸ್ವಸ್ಥರಾಗಿದ್ದಾರೆ.
ಇದರಲ್ಲಿ ಶ್ರೇಯಾ, ದರ್ಶನ್, ಲಿಂಗೇಗೌಡ, ಜ್ಯೋತಿಕಾ, ಐಶ್ವರ್ಯಾ, ಶಿಲ್ಪಾ, ಲಿಖಿತಾ ಎಂಬುವವರು ತೀವ್ರ ಅಸ್ವಸ್ಥರಾಗಿದ್ದಾರೆ. ಅವರಿಗೆ ಲಿಂಗಪಟ್ಟಣ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ. ಇನ್ನೂ ಹತ್ತು ಮಂದಿಯನ್ನು ಹಲಗೂರು ಆರೋಗ್ಯ ಕೇಂದ್ರಕ್ಕೆ ದಾಖಲು ಂಆಡಲಾಗಿದೆ. ಅಸ್ವಸ್ಥರಾದವರೆಲ್ಲಾ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯಾಧಿಕಾರಿ ಡಾ. ವೀರಭದ್ರಪ್ಪ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ತಹಶೀಲ್ದಾರ್ ಕೆ. ಚಂದ್ರಮೌಳಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement