ಗದಗ: ತೋಟಗಾರಿಕೆ ಬೆಳೆ ಬೆಳೆಯಲು ಸರ್ಕಾರದಿಂದ ಸಿಗುವ ಸಹಾಯಧನ ಮಂಜೂರು ರೈತರಿಂದ 14 ಸಾವಿರ ರೂಪಾಯಿ ಲಂಚ ಸ್ವೀಕರಿಸಿದ ಗದಗ ಜಿಲ್ಲೆಯ ಮುಂಡರಗಿ ತೋಟಗಾರಿಕಾ ಸಹಾಯಕನೊಬ್ಬನನ್ನು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಬಂಧಿಸಿದ್ದಾರೆ.
ತೋಟಗಾರಿಕಾ ಸಹಾಯಕ ಸುರೇಶ್ ಹನುಮಂತಪ್ಪ ಬಂಧಿತ ಆರೋಪಿ.
ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಜಂತ್ಲಿ ಗ್ರಾಮದ ನಿವಾಸಿಯೊಬ್ಬರು ತಮ್ಮ ಜಮೀನಿನಲ್ಲಿ ಪಪ್ಪಾಯ, ನುಗ್ಗೆ ಬೆಳೆ ಬೆಳೆಯುವ ಸಂಬಂಧ 2019, ಮೇ 22ರಂದು ಮುಂಡರಗಿಯ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರಿಗೆ ಅರ್ಜಿ ಸಲ್ಲಿಸಿದ್ದರು. ಅವರು ಕೂಲಿ ಕಾರ್ಮಿಕರೊಂದಿಗೆ ಸೇರಿ ಒಟ್ಟು 2 ಎಕರೆ ಪ್ರದೇಶದಲ್ಲಿ ಪಪ್ಪಾಯಿ, ನುಗ್ಗೆ ಬೆಳೆ ಬೆಳೆಯಲು ಗುಂಡಿ ತೋಡುವುದು, ಸಸಿ ನೆಡುವುದು, ಗೊಬ್ಬರ ಹಾಕುವ ಇತ್ಯಾದಿ ಕೆಲಸ ಮಾಡಿದ್ದರು. ಬಳಿಕ ಪಪ್ಪಾಯ ಹಾಗೂ ನುಗ್ಗೆ ಬೆಳೆ ಫಲಸಿಗೆ ಬಂದಿದೆ. ಈ ಕುರಿತಂತೆ ತೋಟಗಾರಿಕೆ ಬೆಳೆ ಬೆಳೆಯಲು ಸರ್ಕಾರದಿಂದ ಪ್ರತಿ ಹೆಕ್ಟೇರ್ ಗೆ ಪ್ರೋತ್ಸಾಹ ಧನವಾಗಿ 1,89,0000 ರೂ. ಮಂಜೂರು ಮಾಡಲು ಮನವಿ ಮಾಡಿದ್ದರು. ಅದರಂತೆ ತೋಟಗಾರಿಕಾ ಅಧಿಕಾರಿಗಳು ರೈತನ ಜಮೀನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಆದರೂ ಸುಮಾರು 1 ವರ್ಷಗಳಿಂದ ಎಂಜಿಎನ್ ಆರ್ ಇಜಿಎಸ್ ಯೋಜನೆಯಡಿ ಕೆಲಸ ಮಾಡಿದ ವೆಚ್ಚದ ಸಹಾಯಧನವನ್ನು ಮಂಜೂರು ಮಾಡದೆ ಕಾಲ ವಿಳಂಬ ಮಾಡಿದ್ದಾರೆ.
ಖಚಿತ ಮಾಹಿತಿಯ ಮೇರೆಗೆ ಎಸಿಬಿ ಡಿವೈಎಸ್ಪಿ ವಾಸುದೇವರಾಮ್ ನೇತೃತ್ವದ ತಂಡ ದಾಳಿ ನಡೆಸಿ ಆರೋಪಿ ಹನುಮಂತಪ್ಪ ನನ್ನು ವಶಕ್ಕೆ ಪಡೆದಿದೆ.
Advertisement