ವಿಜಯಪುರ:  ಮಹಿಳಾ ವಿವಿ ಹಾಸ್ಟೆಲ್ ನಲ್ಲಿ ಎಂಕಾಮ್ ವಿದ್ಯಾರ್ಥಿನಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಹಾಸ್ಟೆಲ್ ನಲ್ಲಿ ಎಂಕಾಮ್ ಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.
ವಿಜಯಪುರ:  ಮಹಿಳಾ ವಿವಿ ಹಾಸ್ಟೆಲ್ ನಲ್ಲಿ ಎಂಕಾಮ್ ವಿದ್ಯಾರ್ಥಿನಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ವಿಜಯಪುರ: ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಹಾಸ್ಟೆಲ್ ನಲ್ಲಿ ಎಂಕಾಮ್ ಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಇಂದು (ಸೋಮವಾರ) ಅಂತಿಮ ಪರೀಕ್ಷೆ ಬರೆಯಬೇಕಿದ್ದ ಯುವತಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಗಿರುವ ಘಟನೆ ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.

ಮೃತಯುವತಿಯನ್ನು ಐಶ್ವರ್ಯ ಶಂಕರ ನಾಟಿಕಾರ(23) ಎಂದು ಗುರುತಿಸಲಾಗಿದ್ದು ಈಕೆ ಕಲಬುರಗಿ ಜಿಲ್ಲೆಗೆ ಸೇರಿದವಳಾಗಿದ್ದಳು.  ಶಂಕರ ನಾಟಿಕಾರ ಮತ್ತು ವಿಶಾಲಾಕ್ಷಿದಂಪತಿಯ ಪುತ್ರಿಯಾಗಿದ್ದ ಐಶ್ವರ್ಯಾ ಕಡುಬಡತನದ ಹಿನ್ನೆಲೆಯಿಂದ ಬಂದು ಉನ್ನತ ಶಿಕ್ಷಣ ಪಡೆಯುತ್ತಿದ್ದಳು. ಅವಳು ಓದಿನಲ್ಲಿ ಬುದ್ದಿವಂತೆಯಾಗಿದ್ದು ಆಕೆ ಮುಂದೆ ತಾನು  ಪಿಹೆಚ್​ಡಿ ಮಾಡುವುದಾಗಿಯೂ ತಂದೆಗೆ ಹೇಳಿದ್ದಳು.

ಮೃತಳ ತಂದೆ ಶಂಕರ ನಾಟಿಕಾರ ರಸ್ತೆ ಬದಿ ಚಹಾ ಅಂಗಡಿಯನ್ನಿಟ್ಟು ಜೀವನ ನಡೆಸುತ್ತಿದ್ದಾರೆ. ಮಗಳು ಚೆನ್ನಾಗಿ ಓದಿದರೆ ಮುಂದೆ ನಮಗೂ ಆಸರೆಯಾಗುವಳೆಂದು ಭಾವಿಸಿದ್ದ ಅವರಿಗೆ ಇದೀಗ ಆಘಾತವಾಗಿದೆ. 

ಅಂತಿಮ ಪರೀಕ್ಷೆ ಬರೆದು ಇಂದು ಕಲಬುರಗಿಗೆ ಮರಳಬೇಕಿದ್ದ ಐಶ್ವರ್ಯಾ ತಾನು ತಂಗಿದ್ದ ಹಾಸ್ಟೆಲ್ ಕೋಣೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಭಾನುವಾರ ಮಧ್ಯಾಹ್ನ ಯುವತಿಯ ಪೋಷಕರು ಮಗಳಿಗೆ ಕರೆ ಮಾಡಿದರೆ ಆಕೆ ಕರೆ ಸ್ವೀಕರಿಸಿಲ್ಲ. ಆಗ ಅವರು ಯುವತಿಯ ಸ್ನೇಹಿತೆಗೆ ಕರೆ ಮಾಡಿದ್ದಾರೆ. ಹಾಗೆ ಸ್ನೇಹಿತೆಯರು ಬಂದು ಕಾಣುವ ವೇಳೆಗೆ ಐಶ್ವರ್ಯಾ ಮಂಚದ ಕೆಳಗೆ ಬಿದ್ದಿದ್ದು ತಿಳೀದಿದೆ. 

ಘಟನೆ ಬಗ್ಗೆ ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಡಾ. ಓಂಕಾರ ಕಾಕಡೆ ವಿಷಾದ ವ್ಯಕ್ತಪಡಿಸಿದ್ದಾರೆ.

ಇನ್ನು ಮೃತ ಯುವತಿಗೆ ಇತ್ತೀಚೆಗೆ ತಮ್ಮ ಸಂಬಂಧಿಕ ಯುವಕನೊಂದಿಗೆ ಮದುವೆ ನಿಶ್ಚಿತಾರ್ಥ ಕೂಡ ಆಗಿತ್ತು. ಘಟನೆಗೆ ಕಾರಣ ತಿಳಿದಿಲ್ಲ. ಘಟನಾ ಸ್ಥಳಕ್ಕೆ  ವಿಜಯಪುರ ಗ್ರಾಮೀಣ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು ತನಿಖೆ ಮುಂದುವರಿದಿದೆ. ಈ ಮಧ್ಯೆ ಯುವತಿಯ ಪೋಷಕರು ಮೃತದೇಹವನ್ನು ಪಡೆದುಕೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com