ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾಧಿಕಾರಿ
ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾಧಿಕಾರಿ

ಮಾಸ್ಕ್ ಧರಿಸದೆ ಫೋಟೋಗೆ ಪೋಸ್ ಕೊಟ್ಟ ಉಡುಪಿ ಜಿಲ್ಲಾಧಿಕಾರಿ: ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟೀಕೆ

ಎಎಸ್‌ಪಿ ಕುಮಾರಚಂದ್ರ ಅವರ ಪುತ್ರಿಯ ಮೆಹಂದಿ ಕಾರ್ಯಕ್ರಮದಲ್ಲಿ ಮಾಸ್ಕ್ ಧರಿಸದೆ ಫೋಟೊಗೆ ಫೋಸ್ ನೀಡಿದ ಜಿಲ್ಲಾಧಿಕಾರಿ ಜಿ.ಜಗದೀಶ್ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆಗಳು ವ್ಯಕ್ತವಾಗುತ್ತಿವೆ. 
Published on

ಉಡುಪಿ: ಎಎಸ್‌ಪಿ ಕುಮಾರಚಂದ್ರ ಅವರ ಪುತ್ರಿಯ ಮೆಹಂದಿ ಕಾರ್ಯಕ್ರಮದಲ್ಲಿ ಮಾಸ್ಕ್ ಧರಿಸದೆ ಫೋಟೊಗೆ ಫೋಸ್ ನೀಡಿದ ಜಿಲ್ಲಾಧಿಕಾರಿ ಜಿ.ಜಗದೀಶ್ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆಗಳು ವ್ಯಕ್ತವಾಗುತ್ತಿವೆ. 

ಎ.25ರಂದು ಉಡುಪಿಯಲ್ಲಿ ನಡೆಯಲಿರುವ ಹೆಚ್ಚುವರಿ ಎಸ್ಪಿಯ ಮಗಳ ಮದುವೆಯ ಮೆಹಂದಿ ಕಾರ್ಯಕ್ರಮವು ಎ.23ರಂದು ರಾತ್ರಿ ಉಡುಪಿಯ ಅವರ ನಿವಾಸದಲ್ಲಿ ಆಯೋಜಿಸಲಾಗಿತ್ತು. ಅದರಲ್ಲಿ ಜಿಲ್ಲಾಧಿಕಾರಿ ಕುಟುಂಬ ಸಮೇತರಾಗಿ ಭಾಗವಹಿಸಿದ್ದು, ವೇದಿಕೆಯಲ್ಲಿ ಮದುಮಗಳ ಜೊತೆ ಜಿಲ್ಲಾಧಿಕಾರಿ ಹಾಗೂ ಹೆಚ್ಚುವರಿ ಎಸ್ಪಿ ಮಾಸ್ಕ್ ಧರಿಸದೆ ಸುರಕ್ಷಿತ ಅಂತರ ಕಾಪಾಡದೆ ನಿಂತಿರುವುದು ಫೋಟೊದಲ್ಲಿ ಕಂಡುಬಂದಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಫೋಟೋದಲ್ಲಿ ಜಗದೀಶ್ ಹಾಗೂ ಕುಮಾರಚಂದ್ರ ಇತರರು ಮಾಸ್ಕ್ ಧರಿಸದೆ ಫೋಟೋಗೆ ಪೋಸ್ ನೀಡಿರುವುದು ಕಂಡು ಬಂದಿದ್ದು, ಇಬ್ಬರೂ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಭಾರೀ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 

ಸರಕಾರದ ಮಾರ್ಗಸೂಚಿ ಪ್ರಕಾರ ಮದುವೆಯಲ್ಲಿ 50 ಮಂದಿ ಮಾತ್ರ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ವಧು ಮತ್ತು ವರರ ಕಡೆಯವರು ತಲಾ 25ರಂತೆ ಒಟ್ಟು 50 ಮಂದಿಯ ಪಟ್ಟಿಯನ್ನು ಅನುಮತಿ ಪಡೆಯುವಾಗ ತಾಲೂಕು ಕಚೇರಿಗೆ ಸಲ್ಲಿಸಬೇಕು ಎಂಬ ನಿಯಮ ಕೂಡ ಇದೆ. ಆದರೆ ಮೆಹಂದಿ ಕಾರ್ಯಕ್ರಮ ನಡೆಸುವ ಬಗ್ಗೆ ಯಾವುದೇ ಉಲ್ಲೇಖ ಇಲ್ಲ.

ಆದರೂ ಅವಕಾಶ ಇಲ್ಲದ ಮೆಹಂದಿ ಕಾರ್ಯಕ್ರಮವನ್ನು ತಡೆಯಬೇಕಾದ ಡಿಸಿ, ಅದರಲ್ಲಿ ಭಾಗವಹಿಸಿರುವುದೇ ತಪ್ಪು ಎಂಬ ಅಭಿಪ್ರಾಯ ಕೇಳಿ ಬರುತ್ತಿವೆ.

ಕಾರ್ಯಕ್ರಮದ ವೇಳೆ ರಾತ್ರಿ 8.40ರ ಸುಮಾರಿಗೆ ಬಂದಿರುವ ಜಿಲ್ಲಾಧಿಕಾರಿಗಳು ಕಾರ್ಯಕ್ರಮದಲ್ಲಿ 10 ನಿಮಿಷಗಳ ಕಾಲ ಉಳಿದಿದ್ದರು ಎಂದು ತಿಳಿದುಬಂದಿದೆ. ಕಾರ್ಯಕ್ರಮದಲ್ಲಿ ಮಧುಮಗಳಿಗೆ ಶುಭಾಶಯ ಕೋರಲು ಬಂದ ಜಿಲ್ಲಾಧಿಕಾರಿಗಳಿಗೆ ಮಾಸ್ಕ್ ತೆಗೆದು ಫೋಟೋಗೆ ಪೋಸ್ ಕೊಡುವಂತೆ ಫೋಟೋಗ್ರಾಫರ್ ಗಳು ಕೇಳಿದ್ದಾರೆಂದು ತಿಳಿದುಬಂದಿದೆ. ಇದಕ್ಕೆ ಒಪ್ಪಿದ ಅಧಿಕಾರಿಗಳು ಮಾಸ್ಕ್ ತೆಗೆದಿದ್ದಾರೆಂದು ತಿಳಿದುಬಂದಿದೆ. 

ಈ ನಡುವೆ ಸಾಮಾಜಿಕ ಹೋರಾಟಗಾರ ಪ್ರಕಾಶ್ ಮಲ್ಪೆಯವರು ಘಟನೆ ಕುರಿತು ಆಶ್ಚರ್ಯ ವ್ಯಕ್ತಪಡಿಸಿದ್ದು, ಇಬ್ಬರು ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗಳು ಇಷ್ಟೊಂದು ಬೇಜವಾಬ್ದಾರಿತನದಿಂದ ಇರುವುದು ಹೇಗೆ ಎಂದು ಪ್ರಶ್ನಿಸಿದ್ದಾರೆ. 

ಜಿಲ್ಲೆಯಾದ್ಯಂತ ಜನರು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಸರ್ಕಾರಿ ಅಧಿಕಾರಿಗಳು ಆಯೋಜಿಸುವ ಕಾರ್ಯಕ್ರಮದಲ್ಲಿ ಕೊರೋನಾ ಹರಡುವುದಿಲ್ಲವೇ? ಎಂದು ಪ್ರಶ್ನಿಸಿದ್ದಾರೆ. 

ಈ ನಡುವೆ ಕುಮಾರಚಂದ್ರ ಅವರು ಸ್ಪಷ್ಟನೆ ನೀಡಿ, ಇಡೀ ಕಾರ್ಯಕ್ರಮದಲ್ಲಿ ನಾವು ಕೇವಲ 15 ಮಂದಿಯಷ್ಟೇ ಇದ್ದೆವು. ಜಿಲ್ಲಾ ಆಯುಕ್ತರು ಕೆಲವು ನಿಮಿಷಗಳ ಕಾಲವಷ್ಟೇ ಕಾರ್ಯಕ್ರಮದಲ್ಲಿದ್ದರು. ನಮ್ಮ ಮಗಳಿಗೆ ಶುಭಾಶಯ ಕೋರಲು ಬಂದಿದ್ದವು. ನಾವಿಬ್ಬರೂ ನೆರೆಮನೆಯವರಾಗಿದ್ದೇವೆ. ಕಾರ್ಯಕ್ರಮದಲ್ಲಿ ಕೊರೋನಾದ ಎಲ್ಲಾ ನಿಯಮಗಳನ್ನು ಪಾಲನೆ ಮಾಡಲಾಗಿದೆ. ಕೇವಲ ಫೋಟೋಗೆ ಪೋಸ್ ನೀಡಲಷ್ಟೇ ಮಾಸ್ಕ್ ತೆಗೆದುವಂತೆ ಫೋಟೋಗ್ರಾಫರ್ ಗಳು ಹೇಳಿದ್ದರು ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com