18 ವರ್ಷ ಮೇಲ್ಪಟ್ಟವರಿಗೆ ಮೇ 1ಕ್ಕೆ ಕೊರೋನಾ ಲಸಿಕೆ ಅಭಿಯಾನ ಆರಂಭವಾಗುತ್ತಿಲ್ಲ, ಆಸ್ಪತ್ರೆ ಬಳಿ ಹೋಗಬೇಡಿ: ಸಚಿವ ಡಾ. ಕೆ.ಸುಧಾಕರ್ ಮನವಿ

ಕೇಂದ್ರ ಸರ್ಕಾರ ಈ ಹಿಂದೆ ಪ್ರಕಟಿಸಿದಂತೆ ನಾಳೆ ಅಂದರೆ ಮೇ 1ಕ್ಕೆ 18 ವರ್ಷ ಮೇಲ್ಪಟ್ಟವರಿಗೆ ರಾಜ್ಯದಲ್ಲಿ ಸಾಮೂಹಿಕ ಕೊರೋನಾ ಲಸಿಕೆ ಅಭಿಯಾನವನ್ನು ಆರಂಭಿಸಲು ಸಾಧ್ಯವಾಗುತ್ತಿಲ್ಲ, ಹೀಗಾಗಿ ಯಾರೂ ಆಸ್ಪತ್ರೆಗಳಿಗಾಗಲಿ, ಲಸಿಕಾ ಕೇಂದ್ರಗಳಿಗಾಗಲಿ ಹೋಗಬೇಡಿ ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್ ಮನವಿ ಮಾಡಿಕೊಂಡಿದ್ದಾರೆ.
ಡಾ ಕೆ ಸುಧಾಕರ್(ಸಂಗ್ರಹ ಚಿತ್ರ)
ಡಾ ಕೆ ಸುಧಾಕರ್(ಸಂಗ್ರಹ ಚಿತ್ರ)
Updated on

ಬೆಂಗಳೂರು: ಕೇಂದ್ರ ಸರ್ಕಾರ ಈ ಹಿಂದೆ ಪ್ರಕಟಿಸಿದಂತೆ ನಾಳೆ ಅಂದರೆ ಮೇ 1ಕ್ಕೆ 18 ವರ್ಷ ಮೇಲ್ಪಟ್ಟವರಿಗೆ ರಾಜ್ಯದಲ್ಲಿ ಸಾಮೂಹಿಕ ಕೊರೋನಾ ಲಸಿಕೆ ಅಭಿಯಾನವನ್ನು ಆರಂಭಿಸಲು ಸಾಧ್ಯವಾಗುತ್ತಿಲ್ಲ, ಹೀಗಾಗಿ ಯಾರೂ ಆಸ್ಪತ್ರೆಗಳಿಗಾಗಲಿ, ಲಸಿಕಾ ಕೇಂದ್ರಗಳಿಗಾಗಲಿ ಹೋಗಬೇಡಿ ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್ ರಾಜ್ಯದ ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಕೇಂದ್ರ ಸರ್ಕಾರ ಘೋಷಿಸಿರುವಂತೆ 18 ವರ್ಷದಿಂದ 44 ವರ್ಷದೊಳಗಿನವರಿಗೆ ಮೇ 1ರಿಂದ ಲಸಿಕೆ ನೀಡುವ ಅಭಿಯಾನ ಆರಂಭವಾಗಬೇಕಿತ್ತು. ಅದರ ಪ್ರಕಾರ ಕರ್ನಾಟಕ ರಾಜ್ಯದಲ್ಲಿ 3ರಿಂದ 3.5 ಕೋಟಿ ಜನರು ಫಲಾನುಭವಿಗಳು ಇದ್ದಾರೆ ಎಂದು ಅಂದಾಜು ಮಾಡಿದ್ದೇವೆ. ಈಗಾಗಲೇ ಸರ್ಕಾರ 400 ಕೋಟಿ ರೂಪಾಯಿಗಳನ್ನು ಲಸಿಕೆ ತಯಾರಿಕಾ ಕಂಪೆನಿ ಸೆರಂ ಇನ್ಸ್ಟಿಟ್ಯೂಟ್ ಗೆ ನೀಡಿ 1 ಕೋಟಿ ಡೋಸ್ ಗೆ ಆರ್ಡರ್ ನೀಡಿದೆ. ಭಾರತ್ ಬಯೋಟೆಕ್ ಕಂಪೆನಿ, ರಷ್ಯಾ ಮೂಲದ ಕಂಪೆನಿಯನ್ನು ಸಹ ಸಂಪರ್ಕಿಸಿದ್ದು ಅವರಿಂದ ಅಧಿಕೃತವಾಗಿ ಮಾಹಿತಿ ಬಂದಿಲ್ಲ ಎಂದು ಹೇಳಿದರು.

ಕಂಪೆನಿ ಕಡೆಯಿಂದ ಯಾವಾಗ ಲಸಿಕೆ ಬರುತ್ತದೆ ಎಂದು ಸರ್ಕಾರಕ್ಕೆ ಅಂದಾಜು ಮಾಡಲು ಸಾಧ್ಯವಿಲ್ಲ, ಹೀಗಾಗಿ ಎಷ್ಟು ವಾರಗಳಾಗಬಹುದು ಎಂದು ನಾನು ಹೇಳುವುದಿಲ್ಲ. ಆದಷ್ಟು ಶೀಘ್ರ ಲಸಿಕೆ ತರಿಸುವ ಸರ್ಕಾರದ ಪ್ರಯತ್ನ ಮುಂದುವರಿಯುತ್ತಿದೆ. ಕಂಪೆನಿ ಮೇಲೆ ಒತ್ತಡ ಹೇರಿ ಆದಷ್ಟು ಬೇಗ ಲಸಿಕೆ ತರಿಸುವುದು ಸರ್ಕಾರದ ಧ್ಯೇಯ ಕೂಡ ಆಗಿದೆ ಎಂದರು.

18 ವರ್ಷದಿಂದ 44 ವರ್ಷದೊಳಗಿನವರಿಗೆ ರಾಜ್ಯದ ಜನತೆಗೆ ಸರ್ಕಾರ ಉಚಿತವಾಗಿ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ನೀಡುವುದು ಖಂಡಿತ. ಇದರಲ್ಲಿ ಯಾವುದೇ ಗೊಂದಲ ಬೇಡ. ಕೋವಿಡ್ ಪೋರ್ಟಲ್ ನಲ್ಲಿ ಹೆಸರು ನೋಂದಾಯಿಸಿಕೊಳ್ಳುವ ಪ್ರಕ್ರಿಯೆ ಮುಂದುವರಿಸಬಹುದು, ಅದೇ ರೀತಿ 45 ವರ್ಷ ಮೇಲ್ಪಟ್ಟವರು ಲಸಿಕೆ ಹಾಕಿಸಿಕೊಳ್ಳದವರು ಆಸ್ಪತ್ರೆಗಳಿಗೆ ಹೋಗಿ ಲಸಿಕೆ ಹಾಕಿಸಿಕೊಳ್ಳಿ ಎಂದು ಸಹ ಸಚಿವರು ಮನವಿ ಮಾಡಿಕೊಂಡರು.

ಸರ್ಕಾರವೇ ಮಾಹಿತಿ ನೀಡುತ್ತದೆ: ಸೆರಂ ಇನ್ಸ್ಟಿಟ್ಯೂಟ್ ನಾಳೆಯ ಹೊತ್ತಿಗೆ ಲಸಿಕೆ ವಿತರಿಸದಿರುವ ಕಾರಣ ರಾಜ್ಯದಲ್ಲಿ 18 ವರ್ಷದಿಂದ 44 ವರ್ಷದೊಳಗಿನವರಿಗೆ ಲಸಿಕೆ ಅಭಿಯಾನ ಆರಂಭವಾಗುತ್ತಿಲ್ಲ. ಸೆರಂ ಸಂಸ್ಥೆಯಿಂದ ಖಚಿತ ಮಾಹಿತಿ ಬಂದ ಕೂಡಲೇ ನಾವೇ ರಾಜ್ಯದ ಜನತೆಗೆ 18 ವರ್ಷ ಮೇಲ್ಪಟ್ಟವರಿಗೆ ಯಾವಾಗ ಲಸಿಕೆ ಅಭಿಯಾನ ಆರಂಭವಾಗುತ್ತದೆ ಎಂದು ತಿಳಿಸುತ್ತೇವೆ ಎಂದರು. 

ಈಗಾಗಲೇ ಕಂಪೆನಿಗಳಿಂದ ಕರ್ನಾಟಕಕ್ಕೆ 99 ಲಕ್ಷ ಡೋಸ್ ಲಸಿಕೆಗಳು ಬಂದಿದ್ದು, 95 ಲಕ್ಷ ಡೋಸ್ ಲಸಿಕೆಗಳನ್ನು ಜನರಿಗೆ ನೀಡಿದ್ದೇವೆ. ಕೇಂದ್ರ ಸರ್ಕಾರ ಜೊತೆ ಕೂಡ ದಿನನಿತ್ಯ ಲಸಿಕೆಗಳನ್ನು ಬೇಗನೆ ಪೂರೈಸುವಂತೆ ಮನವಿ ಮಾಡಿಕೊಳ್ಳುತ್ತೇವೆ, ಸರ್ಕಾರದ ವ್ಯವಸ್ಥೆಗಳಲ್ಲಿ ಲೋಪದೋಷಗಳಾಗಿಲ್ಲ, ಯಾರೂ ಕೂಡ ಅನ್ಯತಾ ಭಾವಿಸಬೇಡಿ, ಸದ್ಯದ ಆರೋಗ್ಯ ತುರ್ತು ಪರಿಸ್ಥಿತಿಯಲ್ಲಿ ನಾಗರಿಕರು ಕೋವಿಡ್ ಮಾರ್ಗಸೂಚಿಗಳನ್ನು ಶಿಸ್ತುಬದ್ಧವಾಗಿ ಪಾಲಿಸಿ ಆರೋಗ್ಯ ಕಾಪಾಡಿಕೊಳ್ಳಿ ಎಂದು ಮತ್ತೊಮ್ಮೆ ಮನವಿ ಸಚಿವ ಸುಧಾಕರ್ ಮನವಿ ಮಾಡಿಕೊಂಡರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com