ರೈಲ್ವೆ ಕೆಲಸಗಳಿಗೆ ಬಾಲ ಕಾರ್ಮಿಕರ ಬಳಕೆ ಪ್ರಕರಣ; 3 ಅಧಿಕಾರಿಗಳಿಗೆ ಮಾನವ ಹಕ್ಕುಗಳ ಆಯೋಗ ನೋಟಿಸ್
ಬೆಂಗಳೂರು: ರೈಲ್ವೆ ಕೆಲಸಗಳಿಗೆ ಬಾಲ ಕಾರ್ಮಿಕರನ್ನು ಬಳಸಿಕೊಳ್ಳುತ್ತಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ, ಕಾರ್ಮಿಕ ಮತ್ತು ಸಮಾಜ ಕಲ್ಯಾಣ ಇಲಾಖೆಗಳ ಆಯುಕ್ತರು ಮತ್ತು ರಾಮನಗರ ಪೊಲೀಸ್ ಅಧೀಕ್ಷಕರಿಗೆ ನೋಟಿಸ್ ಜಾರಿ ಮಾಡಿದೆ.
ನೋಟಿಸ್ ನಲ್ಲಿ ಪ್ರಕರಣ ಸಂಬಂಧ ಆಗಸ್ಟ್ 16ರೊಳಗಾಗಿ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದ್ದು, ಆಗಸ್ಟ್ 17 ರಂದು ವಿಚಾರಣೆ ನಡೆಸುವುದಾಗಿ ತಿಳಿಸಿದೆ ಎಂದು ತಿಳಿದುಬಂದಿದೆ.
ಕಳೆದ ಆಗಸ್ಟ್ 2ರಂದು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯಲ್ಲಿ ಮಕ್ಕಳನ್ನು ಕಠಿಣ ಕೆಲಸಕ್ಕೆ ಬಳಸಿಕೊಂಡ ಬಗ್ಗೆ ವರದಿಯೊಂದು ಪ್ರಕಟವಾಗಿತ್ತು. ರೈಲ್ವೆ ಕಾಂಟ್ರಾಕ್ರ್ ಒಬ್ಬರು ಕಲ್ಲು ಹೊರುವಂತಹ ಕಠಿಣ ಕೆಲಸಗಳನ್ನು ಬೆಂಗಳೂರು ರೈಲ್ವೆ ವಿಭಾಗದ ಶೆಟ್ಟಿಹಳ್ಳಿ ರೈಲ್ವೆ ನಿಲ್ದಾಣದ ರೈಲ್ವೆ ಹಳಿ ಬಳಿ ಮಕ್ಕಳಿಂದ ಮಾಡಿಸುತ್ತಿರುವ ಬಗ್ಗೆ ಪತ್ರಿಕೆಯಲ್ಲಿ ವರದಿಯೊಂದು ಪ್ರಕಟವಾಗಿತ್ತು.
ಪತ್ರಿಕೆಯಲ್ಲಿ ವರದಿ ಬಂದ ತಕ್ಷಣ ಅದನ್ನು ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ ಪ್ರಕರಣವನ್ನು ಸ್ವಯಂಪ್ರೇರಿತವಾಗಿ ದಾಖಲು ಮಾಡಿಕೊಂಡಿದ್ದು, ಇದೀಗ ಮೂವರು ಅಧಿಕಾರಿಗಳಿಗೆ ನೋಟಿಸ್ ಮಾಡಿ ಮಾಡಿದೆ ಎಂದು ತಿಳಿದುಬಂದಿದೆ.
ಈ ನಡುವೆ ಎಫ್ಐಆರ್ನಲ್ಲಿ ಪ್ರಮುಖ ಆರೋಪಿಯಾಗಿರುವ ನೆಲಮಂಗಲ ಮೂಲದ ಸಚಿನ್ ಕನ್ಸ್ಟ್ರಕ್ಷನ್ನ ಗುತ್ತಿಗೆದಾರ ಗೋವಿಂದರಾಜ್ ನಾಗಮುನಿ, ನಿನ್ನೆ ಸಂಜೆ 1,40,000 ರೂ.ಗಳ ಚೆಕ್ ಅನ್ನು ಕಾರ್ಮಿಕ ನ್ಯಾಯಾಲಯಕ್ಕೆ ನೀಡಿದ್ದಾರೆಂದು ಮೂಲಗಳು ತಿಳಿಸಿವೆ.
ಈ ದಂಡದ ಹಣವನ್ನು ಪ್ರತಿ ಮಗುವಿಗೆ 20,000 ರೂ.ಗಳಾಗಿ ವಿಭಜಿಸಿ ಖಾತೆಗೆ ಜಮಾ ಮಾಡಲಾಗುತ್ತದೆ. ಮಕ್ಕಳಿಗೆ 18 ವರ್ಷ ತುಂಬಿದ ನಂತರ ಈ ಹಣ ಅವರ ಕೈ ಸೇರಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ