1 ರಿಂದ 8ನೇ ತರಗತಿ ಪ್ರಾರಂಭಕ್ಕೆ ಚಿಂತನೆ: ಶಿಕ್ಷಣ ಸಚಿವ ಬಿ.ಸಿ.ನಾಗೇಶ್
ಚಿತ್ರದುರ್ಗ: ಕೋವಿಡ್ ಕಾರ್ಯಪಡೆ, ಮಕ್ಕಳ ತಜ್ಞರು ಹಾಗೂ ತಾಂತ್ರಿಕ ಸಮಿತಿ ವರದಿ ಆಧರಿಸಿ 9, 10 ಹಾಗೂ ಪಿಯುಸಿ ತರಗತಿ ಆರಂಭಿಸಲಾಗುತ್ತಿದ್ದು, ಇದರಲ್ಲಿ ಯಶಸ್ವಿಯಾದರೇ ಮುಂದಿನ ದಿನಗಳಲ್ಲಿ 1 ರಿಂದ 8 ನೇ ತರಗತಿ ಆರಂಭಿಸಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಬುಧವಾರ ಹೇಳಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸ್ತುತ ಪೋಷಕರು ಹಾಗು ಮಕ್ಕಳ ಧೈರ್ಯ ನೋಡಿ ಶಾಲೆ ತೆರೆಯಲಾಗುತ್ತಿದೆ. ಈಗಾಗಲೇ ಕೋವಿಡ್ -19 ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಗಿದ್ದು, ಮಕ್ಕಳ ಮನವೊಲಿಸಲು ಶಿಕ್ಷಕರಿಗೆ ತಿಳಿಸಲಾಗಿದೆ ಎಂದರು.
ಇನ್ನು, ಯಾವುದೇ ಕಾರಣಕ್ಕೂ ಬಲವಂತವಾಗಿ ಮಕ್ಕಳನ್ನು ಶಾಲೆಗೆ ಕರೆತರುವಂತಿಲ್ಲ. ಒಂದು ಪೋಷಕರು ಇದಕ್ಕೆ ಸಹಮತನೀಡದಿದ್ದರೇ, ಆನ್ ಲೈನ್ ತರಗತಿ ಮೂಲಕ ಅವರಿಗೆ ಅಭ್ಯಾಸ ಮುಂದುವರೆಯುವುದು. ಈ ಕುರಿತು ಯಾರೂ ಕೂಡ ಆತಂಕಕ್ಕೆ ಒಳಗಾಗುವುದು ಬೇಡ ಎಂದರು.
ತರಗತಿಗೆ ಹಾಜರಾದ ವಿದ್ಯಾರ್ಥಿಗಳಲ್ಲಿ ಒಂದು ವೇಳೆ ಕೋವಿಡ್ ದೃಢಪಟ್ಟರೇ ಒಂದು ವಾರಗಳ ಕಾಲ ಶಾಲೆ ಮುಚ್ಚಲಾಗುವುದು. ನಂತರ ಸಂಪೂರ್ಣ ಸ್ಯಾನಿಟೈಸ್ ಮಾಡಿ ಮತ್ತೆ ಶಾಲೆ ಆರಂಭಿಸಲಾಗುವುದು. ಶೇ.30 ರಿಂದ 40 ರಷ್ಟು ಮಕ್ಕಳು ಆನ್ ಲೈನ್ ಶಿಕ್ಷಣದಿಂದ ವಂಚಿತರಾಗಿದ್ದಾರೆ ಎಂದು ಸಮೀಕ್ಷೆಯಿಂದ ತಿಳಿದು ಬಂದಿದೆ ಎಂದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ