ರಾಜ್ಯದಲ್ಲಿರುವ ಅಫ್ಘನ್ ಪ್ರಜೆಗಳ ಸುರಕ್ಷತೆಗೆ ಸರ್ಕಾರ ಬದ್ಧ: ಗೃಹ ಸಚಿವ ಆರಗ ಜ್ಞಾನೇಂದ್ರ 

ರಾಜ್ಯದಲ್ಲಿರುವ ಅಫ್ಘನ್ ಪ್ರಜೆಗಳ ಸುರಕ್ಷತೆಗೆ ಸರ್ಕಾರ ಕ್ರಮ ಕೈಗೊಳ್ಳಲಿದ್ದು ಅವರ ವೀಸಾ ಅವಧಿ ವಿಸ್ತರಣೆಗೆ ಕೇಂದ್ರ ಸರ್ಕಾರದೊಂದಿಗೆ ಮಾತನಾಡಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಕಾಬೂಲ್ ನಗರದಲ್ಲಿ ತಾಲಿಬಾನ್ ಹೋರಾಟಗಾರ ಕಾವಲು ಕಾಯುತ್ತಿರುವುದು
ಕಾಬೂಲ್ ನಗರದಲ್ಲಿ ತಾಲಿಬಾನ್ ಹೋರಾಟಗಾರ ಕಾವಲು ಕಾಯುತ್ತಿರುವುದು

ಬೆಂಗಳೂರು:ರಾಜ್ಯದಲ್ಲಿರುವ ಅಫ್ಘನ್ ಪ್ರಜೆಗಳ ಸುರಕ್ಷತೆಗೆ ಸರ್ಕಾರ ಕ್ರಮ ಕೈಗೊಳ್ಳಲಿದ್ದು ಅವರ ವೀಸಾ ಅವಧಿ ವಿಸ್ತರಣೆಗೆ ಕೇಂದ್ರ ಸರ್ಕಾರದೊಂದಿಗೆ ಮಾತನಾಡಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ನಿನ್ನೆ ಬೆಂಗಳೂರಿನಲ್ಲಿ ಕಾರ್ಯಕ್ರಮದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ 339 ಅಫ್ಘನ್ ಪ್ರಜೆಗಳಿದ್ದು ಅವರಲ್ಲಿ 192 ಮಂದಿ ವಿದ್ಯಾರ್ಥಿಗಳು. ಅವರಿಗೆ ಈಗ ತಮ್ಮ ಭವಿಷ್ಯದ ಬಗ್ಗೆ ಆತಂಕ ಶುರುವಾಗಿದೆ. ಮಾನವೀಯ ನೆಲೆಯಲ್ಲಿ ಅವರಿಗೆ ಸಾಧ್ಯವಾದ ಎಲ್ಲಾ ನೆರವನ್ನು ಸರ್ಕಾರ ಕಲ್ಪಿಸಲಿದೆ ಎಂದರು.

ತಮ್ಮ ವೀಸಾ ಅವಧಿ ಸದ್ಯದಲ್ಲಿಯೇ ಮುಗಿಯುವ ಬಗ್ಗೆ ಕೆಲವು ಅಫ್ಘನ್ನರು ಆತಂಕ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರ ಅವರ ವೀಸಾ ಅವಧಿಯನ್ನು ವಿಸ್ತರಿಸುವ ಕುರಿತು ತೀರ್ಮಾನಿಸಿದ್ದು ರಾಜ್ಯದಲ್ಲಿನ ಅಫ್ಘನ್ ಪ್ರಜೆಗಳ ವೀಸಾ ಬಗ್ಗೆ ಮುಖ್ಯಮಂತ್ರಿಗಳು ಮತ್ತು ಕೇಂದ್ರ ಸರ್ಕಾರದೊಂದಿಗೆ ಮಾತನಾಡಿ ಕ್ರಮ ಕೈಗೊಳ್ಳುತ್ತೇನೆ ಎಂದರು.

ಈ ಮಧ್ಯೆ ಅಫ್ಘಾನಿಸ್ತಾನದಲ್ಲಿರುವ ರಾಜ್ಯದ ಪ್ರಜೆಗಳನ್ನು ಸ್ಥಳಾಂತರಗೊಳಿಸಲು ವಿದೇಶಾಂಗ ಸಚಿವಾಲಯ ಜೊತೆ ಸಮನ್ವಯ ಸಾಧಿಸಲು ರಾಜ್ಯ ಸರ್ಕಾರ ಹಿರಿಯ ಐಪಿಎಸ್ ಅಧಿಕಾರಿಯನ್ನು ನೇಮಿಸಿದೆ.

ಅಫ್ಘನ್ನರ ಸ್ಥಳಾಂತರಕ್ಕೆ ನೋಡಲ್ ಅಧಿಕಾರಿಗಳು: ನಿನ್ನೆ ಸರ್ಕಾರ ಬಿಡುಗಡೆ ಮಾಡಿದ ಅಧಿಸೂಚನೆಯಲ್ಲಿ, ಎಡಿಜಿಪಿ-ಸಿಐಡಿ ಉಮೇಶ್ ಕುಮಾರ್ ಅವರನ್ನು ಅಫಘಾನಿಸ್ತಾನದಲ್ಲಿ ಸಿಲುಕಿರುವ ಕರ್ನಾಟಕದಿಂದ ಜನರನ್ನು ಸುರಕ್ಷಿತ ಸ್ಥಳಾಂತರಕ್ಕಾಗಿ ಕೇಂದ್ರದೊಂದಿಗೆ ಸಮನ್ವಯಗೊಳಿಸಲು ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದೆ ಎಂದು ಸರ್ಕಾರ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com