ಜನಾಶೀರ್ವಾದ ಯಾತ್ರೆಯಲ್ಲಿ ಕೋವಿಡ್ ನಿಯಮ ಉಲ್ಲಂಘನೆ: ತಪ್ಪೊಪ್ಪಿಕೊಂಡ ಕೇಂದ್ರ ಸಚಿವ ನಾರಾಯಣಸ್ವಾಮಿ

ಕೋವಿಡ್ ನೈಟ್ ಕರ್ಫ್ಯೂ ನಿಯಮ ಉಲ್ಲಂಘನೆ ಮಾಡಿದ್ದನ್ನು ಒಪ್ಪಿಕೊಳ್ಳುತ್ತೇನೆ ಎಂದು ಗದಗದಲ್ಲಿ ಕೇಂದ್ರ ಸಚಿವ ಎ ನಾರಾಯಣಸ್ವಾಮಿ ತಪ್ಪೊಪ್ಪಿಕೊಂಡಿದ್ದಾರೆ. 
ಚಿತ್ರದುರ್ಗದಲ್ಲಿ ನಡೆದ ಜನಾಶೀರ್ವಾದ ಯಾತ್ರೆಯಲ್ಲಿ ಕೇಂದ್ರ ಸಚಿವ ನಾರಾಯಣಸ್ವಾಮಿ
ಚಿತ್ರದುರ್ಗದಲ್ಲಿ ನಡೆದ ಜನಾಶೀರ್ವಾದ ಯಾತ್ರೆಯಲ್ಲಿ ಕೇಂದ್ರ ಸಚಿವ ನಾರಾಯಣಸ್ವಾಮಿ

ಚಿತ್ರದುರ್ಗ: ಕೋವಿಡ್ ನೈಟ್ ಕರ್ಫ್ಯೂ ನಿಯಮ ಉಲ್ಲಂಘನೆ ಮಾಡಿದ್ದನ್ನು ಒಪ್ಪಿಕೊಳ್ಳುತ್ತೇನೆ ಎಂದು ಗದಗದಲ್ಲಿ ಕೇಂದ್ರ ಸಚಿವ ಎ ನಾರಾಯಣಸ್ವಾಮಿ ತಪ್ಪೊಪ್ಪಿಕೊಂಡಿದ್ದಾರೆ. 

ಕೇಂದ್ರ ಸಚಿವರಾದ ಎ.ನಾರಾಯಣಸ್ವಾಮಿ, ಭಗವಂತ್ ಖೂಬಾ, ಶೋಭಾ ಕರಂದ್ಲಾಜೆ ಹಾಗೂ ರಾಜೀವ್ ಚಂದ್ರಶೇಖರ್ ನೇತೃತ್ವದಲ್ಲಿ ರಾಜ್ಯದಲ್ಲಿ ಜನಾಶೀರ್ವಾದ ಯಾತ್ರೆ ನಡೆಸಲಾಗಿದ್ದು, ಯಾತ್ರೆಯಲ್ಲಿ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಲಾಗಿದೆ ಎಂಬ ಮಾತುಗಳು ಕೇಳಿಬಂದಿವೆ. 

ಗದಗ ನಗರದ ವಿಠಲಾರೋಢ ಮಠ ಆವರಣದಲ್ಲಿ ರಾತ್ರಿ 10 ಗಂಟೆವರೆಗೂ ಜನಾಶೀರ್ವಾದ ಕಾರ್ಯಕ್ರಮ ನಡೆದಿತ್ತು. 

ಕಾರ್ಯಕ್ರಮದ ನಂತರ ಮಾತನಾಡಿದ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ನಿಯಮ ಉಲ್ಲಂಘನೆ ಬಗ್ಗೆ ತಪ್ಪೊಪ್ಪಿಗೆಯ ಮಾತನಾಡಿದರು. 

ಕೋವಿಡ್ ನೈಟ್ ಕರ್ಫ್ಯೂ ಜಾರಿಯಲ್ಲಿದ್ದರೂ ರಾತ್ರಿ 10 ಗಂಟೆಯವರೆಗೂ ಜನಾಶೀರ್ವಾದ ಯಾತ್ರೆ ನಡೆಸಿ, ಕೋವಿಡ್ ನಿಯಮ ಉಲ್ಲಂಘಿಸಿದ ಕುರಿತು ತಪ್ಪೊಪ್ಪಿಕೊಂಡರು.

ಎಲ್ಲರೂ ಕೊವಿಡ್ ನಿಯಮ ಪಾಲಿಸಬೇಕು. ಮಾಸ್ಕ್ ಹಾಕಿಕೊಳ್ಳಬೇಕು ಎಂಬುದು ನನ್ನ ಒತ್ತಾಯ. ಸದನದಲ್ಲಿ ಪರಿಚಯ ಮಾಡಿಕೊಳ್ಳಲು ಅವಕಾಶ ನೀಡದ ಕಾರಣ ಜನರ ಮಧ್ಯೆ ಬಂದಿದ್ದೇವೆ. ಸದನಕ್ಕಾದ ಗಧಾ ಪ್ರಹಾರದಿಂದಾಗಿ ಜನಾಶೀರ್ವಾದ ಯಾತ್ರೆ ಹಮ್ಮಿಕೊಂಡಿದ್ದೇವೆ ಎಂದ ಅವರು, ಕೋವಿಡ್ ನೈಟ್ ಕರ್ಫ್ಯೂ ಜಾರಿಯಲ್ಲಿದ್ದರೂ ಜನಾಶೀರ್ವಾದ ಯಾತ್ರೆಯನ್ನು ರಾತ್ರಿ 10 ಗಂಟೆಯವರೆಗೂ ನಡೆಸಿದ ತಪ್ಪನ್ನು ಬಹಿರಂಗವಾಗಿ ಒಪ್ಪಿಕೊಂಡರು.

ಕೋವಿಡ್ ನಿಯಮ ಕುರಿತು ದಾವಣಗೆರೆಯಲ್ಲಿ ಮಾತನಾಡಿರುವ ಅವರು, ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಜನರಿಗೆ ಮನವಿ ಮಾಡಿಕೊಂಡರು. ನಿರ್ಲಕ್ಷ್ಯ ಮಾಡಲು ಕೋವಿಡ್ ಬೇರೆ ರೀತಿಯಲ್ಲಿಲ್ಲ. ಅದರ ಪರಿಣಾಮವನ್ನು ನಾನು ಸ್ವಯಂ ಅನುಭವಿಸಿದ್ದೇನೆ. ನಮ್ಮ ಪ್ರಾಣಕ್ಕಿಂತಲೂ ಮಿಗಿಲಾದದ್ದು ಬೇರಾವುದೂ ಇಲ್ಲ ಎಂದು ಸಲಹೆ ನೀಡಿದರು. 

ಆದರೆ, ಸಚಿವರ ಮಾತು ಕೇಳುವ ಮನಸ್ಥಿತಿ ಸ್ಥಳದಲ್ಲಿ ನೆರೆದಿದ್ದ ಜನರಲ್ಲಿ ಕಂಡು ಬರಲಿಲ್ಲ. ತುಮಕೂರು, ಚಿತ್ರದುರ್ಗ, ದಾವಣಗೆರೆ, ಹಾವೇರಿಯ ಸ್ಥಳೀಯ ಆಡಳಿತ ಮಂಡಳಿಯ ಅಧಿಕಾರಿಗಳೂ ಕೂಡ ಮೂಕ ಪ್ರೇಕ್ಷಕರಂತೆ ನಿಂತಿರುವುದು ಕಂಡು ಬಂದಿತ್ತು. 

ಶುಕ್ರವಾರವೂ, ಚಿತ್ರದುರ್ಗದ ಮಠಗಳಿಗೆ ನಾರಾಯಣಸ್ವಾಮಿ ಭೇಟಿ ನೀಡಿದ ಸಂದರ್ಭದಲ್ಲಿ, ಜನರು ನಿಯಮಗಳನ್ನು ಉಲ್ಲಂಘಿಸುತ್ತಿರುವುದು ಕಂಡುಬಂದಿತ್ತು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಎಂಎಲ್‌ಸಿ ಎನ್ ರವಿಕುಮಾರ್ ಅವರು, ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವುದರ ಜೊತೆಗೆ ಜನಾಶೀರ್ವಾದ ಯಾತ್ರೆ ನಡೆಸುವಂತೆ ಪಕ್ಷ ಸೂಚನೆ ನೀಡಿದೆ. ಆದರೂ, ಅಪಾರ ಪ್ರಮಾಣದಲ್ಲಿ ಜನರು ಸೇರುತ್ತಿರುವುದು ದುರಾದೃಷ್ಟಕರ ಸಂಗತಿ ಎಂದು ತಿಳಿಸಿದ್ದಾರೆ. 

ಕೆಪಿಸಿಸಿ ವಕ್ತಾರ ಡಿ.ಬಸವರಾಜ್ ಅವರು ಮಾತನಾಡಿ, ಕೇಂದ್ರ ಸಚಿವರು ಹಾಗೂ ಜನಾಶೀರ್ವಾದ ಯಾತ್ರೆ ಆಯೋಜಕರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com