ಬೆಂಗಳೂರು:ಮೈಸೂರು ಚಾಮುಂಡೇಶ್ವರಿ ಬೆಟ್ಟದ ತಪ್ಪಲಿನಲ್ಲಿ ಎರಡು ದಿನಗಳ ಹಿಂದೆ ಕಾಲೇಜು ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ಈಗ ರಾಜಕೀಯ ತಿರುವು ಪಡೆದುಕೊಳ್ಳುತ್ತಿದೆ. ಆಡಳಿತ ಮತ್ತು ಪ್ರತಿಪಕ್ಷ ನಾಯಕರು ಇದರ ಬಗ್ಗೆ ರಾಜಕೀಯವಾಗಿ ಪರಸ್ಪರ ಕೆಸರೆರಚಾಟಕ್ಕೆ ಮುಂದಾಗಿದ್ದಾರೆ.
ಮೈಸೂರಿನಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗುತ್ತಿವೆ, ಗೃಹ ಸಚಿವರು, ಸರ್ಕಾರ ಮತ್ತು ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ಕಾಂಗ್ರೆಸ್ ನವರು ಈಗಾಗಲೇ ಆರೋಪಿಸಿದ್ದಾರೆ. ಈ ಬಗ್ಗೆ ಇಂದು ಮಾಧ್ಯಮದವರು ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಪ್ರತಿಕ್ರಿಯೆ ಕೇಳಿದಾಗ ಅವರು ಬೇಜವಾಬ್ದಾರಿ ರೀತಿಯ ಹೇಳಿಕೆ ನೀಡಿದ್ದಾರೆ.
ಮೈಸೂರು ನಗರದ ಹೊರವಲಯದಲ್ಲಿ ಅತ್ಯಾಚಾರವಾಗಿದ್ದು, ಕಾಂಗ್ರೆಸ್ ನವರು ನನ್ನನ್ನು ಗೃಹ ಸಚಿವರನ್ನು ಅತ್ಯಾಚಾರ ಮಾಡಲು ಪ್ರಯತ್ನಿಸುತ್ತಿದ್ದಾರೆ. ರಾಜಕೀಯ ಲಾಭ ಪಡೆಯಲು ನೋಡುತ್ತಿದ್ದಾರೆ. ಇದು ಅಮಾನುಷವಾದ ಕೆಲಸ, ಎಲ್ಲೋ ಈ ರೀತಿಯ ಪ್ರಕರಣಗಳು ನಡೆದಾಗ ನಾವೆಲ್ಲರೂ ಒಟ್ಟಾಗಿ ಮಾನವೀಯ ದೃಷ್ಟಿಯಿಂದ ನೋಡಿ ಪತ್ತೆಹಚ್ಚುವುದು ಬಿಟ್ಟು ರಾಜಕೀಯ ಲಾಭ ಮಾಡಿಕೊಳ್ಳಲು ನೋಡುತ್ತಿರುವುದು ಸರಿಯಲ್ಲ ಎಂದರು.
ಮೊನ್ನೆ ಮಂಗಳವಾರ ಸಾಯಂಕಾಲ 7-7.30 ಹೊತ್ತಿನಲ್ಲಿ ಯುವಕ-ಯುವತಿ ನಿರ್ಜನ ಪ್ರದೇಶಕ್ಕೆ ಹೋಗಿದ್ದಾರೆ. ಅಲ್ಲಿಗೆ ಅವರು ಹೋಗಬಾರದಾಗಿತ್ತು, ಯಾರನ್ನೂ ಹೋಗಬೇಡಿ ಎಂದು ಪೊಲೀಸರಿಗೆ ಪದೇ ಪದೇ ತಡೆಯಲು ಆಗುತ್ತದೆಯೇ, ನಾನು ಇಂದು ಮೈಸೂರಿಗೆ ಹೋಗಿ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಎಲ್ಲಿ ಕುಂದುಕೊರತೆಯಿದೆ ಎಂದು ನೋಡುತ್ತೇನೆ. ಮುಂದೆ ಈ ರೀತಿ ಆಗದಂತೆ ಎಚ್ಚರವಹಿಸುತ್ತೇವೆ ಎಂದರು,
Advertisement