ಜನಸಂಖ್ಯೆಯ ಆಧಾರದ ಮೇಲೆ ಬಿಬಿಎಂಪಿ ವಾರ್ಡ್‌ಗಳ ವಿಂಗಡಣೆ ಅವೈಜ್ಞಾನಿಕ: ರಾಮಲಿಂಗಾ ರೆಡ್ಡಿ

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ, ಅವೈಜ್ಞಾನಿಕವಾಗಿ ಬಿಬಿಎಂಪಿ ವಾರ್ಡ್ ಗಳ ವಿಂಗಡನೆ ಮಾಡುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಆರೋಪಿಸಿದ್ದಾರೆ.     
ರಾಮಲಿಂಗಾರೆಡ್ಡಿ
ರಾಮಲಿಂಗಾರೆಡ್ಡಿ
Updated on

ಬೆಂಗಳೂರು: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ, ಅವೈಜ್ಞಾನಿಕವಾಗಿ ಬಿಬಿಎಂಪಿ ವಾರ್ಡ್ ಗಳ ವಿಂಗಡನೆ ಮಾಡುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಆರೋಪಿಸಿದ್ದಾರೆ.     

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಒಂದಲ್ಲ ಒಂದು ಕಾರಣ ನೀಡಿ ಬಿಬಿಎಂಪಿ ಚುನಾವಣೆ ಮುಂದೂಡುತ್ತ ಬರುತ್ತಿರುವ ಧೋರಣೆಯಿಂದ ಜನ ಆಕ್ರೋಶಗೊಂಡಿದ್ದಾರೆ. ಚುನಾವಣೆ ನಡೆಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಈಗಾಗಲೇ ನಿರ್ದೇಶನ ನೀಡಿದೆ. ಆಡಳಿತ ಪಕ್ಷಕ್ಕೆ ಜನಾಭಿಪ್ರಾಯ ವಿರುದ್ಧವಾಗಿರುವುದರಿಂದ ಚುನಾವಣೆ ನಡೆಸದೆ ಕಾಲಹರಣ ಮಾಡಲಿಕ್ಕಾಗಿ ಸುಪ್ರೀಂಕೋರ್ಟ್‍ನಲ್ಲಿ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಿದೆ.

ಈ ಮಧ್ಯೆ ಬಿಬಿಎಂಪಿಗೆ ಪ್ರತ್ಯೇಕ ಕಾಯ್ದೆಯನ್ನು ರೂಪಿಸಿ ವಾರ್ಡ್‍ಗಳ ಗರಿಷ್ಠ ಮಿತಿಯನ್ನು 243ಕ್ಕೆ ಏರಿಸಿ ವಾರ್ಡ್‍ಗಳ ಪುನರ್ ವಿಂಗಡಣೆಗೆ ಆಯೋಗ ರಚಿಸಿದೆ. ಅಲ್ಲದೆ, ಈ ಪುನರ್ ವಿಂಗಡಣೆಯನ್ನು ಅವೈಜ್ಞಾನಿಕವಾಗಿ ಬಿಜೆಪಿ ಪಕ್ಷದ ಅನುಕೂಲಕ್ಕೆ ತಕ್ಕಂತೆ ಮಾಡಿಕೊಂಡಿದ್ದು, ನಗರದ ವಿವಿಧ ಕ್ಷೇತ್ರಗಳಲ್ಲಿನ ನಾಗರಿಕರು ಮತ್ತು ಸಂಘ-ಸಂಸ್ಥೆಗಳ ಆಕ್ಷೇಪಗಳನ್ನು ಕೂಡ ಪರಿಗಣಿಸಿಲ್ಲ ಎಂದು ಅವರು ಆರೋಪಿಸಿದರು.

ಪುಲಿಕೇಶಿನಗರ, ಶಿವಾಜಿನಗರ, ಸರ್ವಜ್ಞನಗರ, ಹೆಬ್ಬಾಳ, ಗಾಂಧಿನಗರ, ಚಾಮರಾಜಪೇಟೆ, ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ರಾಜಕೀಯ ಪಕ್ಷಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ವಾರ್ಡ್‍ಗಳನ್ನು ವಿಂಗಡಿಸಲಾಗಿದೆ ಎಂದು ಹೇಳಿದರು.

ಬಿಬಿಎಂಪಿ ವಾರ್ಡ್‍ಗಳ ವಿಂಗಡಣೆಗೆ ಎಲ್ಲ ಪಕ್ಷಗಳ ಪ್ರತಿನಿಗಳ ಸಮಾಲೋಚನಾ ಸಮಿತಿ ರಚಿಸಬೇಕೆಂದು ಆಗ್ರಹಿಸಿದರು. ಅನುದಾನದಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಬೆಂಗಳೂರಿನಲ್ಲಿ 28 ಕ್ಷೇತ್ರಗಳಿದ್ದರೂ ಯಲಹಂಕ ಕ್ಷೇತ್ರಕ್ಕೆ ಮಾತ್ರ ಹೆಚ್ಚು ಅನುದಾನ ನೀಡಲಾಗುತ್ತಿದೆ ಎಂದು ಆರೋಪಿಸಿದರು.

ಈ ಹಿಂದೆ ಬಿಜೆಪಿ ಸರಕಾರ ಇದ್ದಾಗ 110 ಹಳ್ಳಿಗಳನ್ನು ಬಿಬಿಎಂಪಿ ವ್ಯಾಪ್ತಿಗೆ ಸೇರಿಸಿದರು. ಸಿದ್ದರಾಮಯ್ಯ ಸರಕಾರ ಬಂದಮೇಲೆ ವಿಶೇಷ ಅನುದಾನ ನೀಡಿ ನೀರು ಸರಬರಾಜು, ಚರಂಡಿ ವ್ಯವಸ್ಥೆ ಮಾಡಲಾಯಿತು. ಬಿಜೆಪಿಯಿಂದ ನೀವು ಏನನ್ನೂ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಅವರು 14 ಕಟ್ಟಡ ಅಡವಿಟ್ಟು, 8 ಸಾವಿರ ಕೋಟಿ ರೂ.ಸಾಲ ಇಟ್ಟು ಹೋಗಿದ್ದರು ಎಂದು ರಾಮಲಿಂಗಾರೆಡ್ಡಿ ದೂರಿದರು.

ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ 12 ಕಾರಿಡಾರ್ ರಸ್ತೆಗಳನ್ನು ಅಭಿವೃದ್ಧಿ ಮಾಡಲು ಮಹಾನಗರ ಪಾಲಿಕೆಯಿಂದ ಅಂದಾಜು ತಯಾರು ಮಾಡಿದ್ದರು. ಅದರಲ್ಲಿ ಬಳ್ಳಾರಿ ರಸ್ತೆ, ಚಾಲುಕ್ಯ ರಸ್ತೆ, ಹಳೆ ಮದ್ರಾಸ್ ರಸ್ತೆ, ವಿಮಾನ ನಿಲ್ದಾಣ ರಸ್ತೆ, ಸರ್ಜಾಪುರ ರಸ್ತೆ, ಬನ್ನೇರುಘಟ್ಟ ರಸ್ತೆ, ಕನಕಪುರ ರಸ್ತೆ, ಮೈಸೂರು ರಸ್ತೆ ಸೇರಿದಂತೆ 12 ರಸ್ತೆ ಅಭಿವೃದ್ಧಿಗೆ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಲಾಯಿತು ಎಂದು ಅವರು ತಿಳಿಸಿದರು.

ಅವೈಜ್ಞಾನಿಕ, ಆಡಳಿತಾತ್ಮಕವಾಗಿ ಕಾರ್ಯಸಾಧುವಲ್ಲದ ವಾರ್ಡ್ ವಿಂಗಡಣೆ: ಬಿಬಿಎಂಪಿಯಲ್ಲಿ 198 ವಾರ್ಡ್‍ಗಳಿದ್ದು, ಬೆಂಗಳೂರಿಗೆ ವಿಶೇಷ ಕಾಯ್ದೆ ಬೇಕು ಎಂದು ಪಾಲಿಕೆ ಚುನಾವಣೆ ಮುಂದೂಡಿದರು. ಅದಕ್ಕೆ ನಾವು ಸಹಕರಿಸಿದೆವು. ನಂತರ 243 ವಾರ್ಡ್ ಮಾಡಲು ನಿರ್ಧರಿಸಿದರು. ಕಳೆದ ಸೆಪ್ಟೆಂಬರ್ ನಲ್ಲಿ ಚುನಾವಣೆ ನಡೆಯಬೇಕಿತ್ತು. ಆದರೆ ಈಗ ಒಂದು ವರ್ಷ ಮೂರು ತಿಂಗಳಾಗಿದೆ. ಈಗ ಡಿಲಿಮಿಟೇಶನ್ ಮಾಡುವುದಾಗಿ ಹೊರಟಿದ್ದಾರೆ ಎಂದು ಅವರು ತಿಳಿಸಿದರು.

ಬಿಜೆಪಿ ಶಾಸಕರಿರುವ ಕಡೆ ಅವರು ವಾರ್ಡ್ ಪುನರ್ ವಿಂಗಡನೆ ಕೆಲಸ ಮಾಡಲಾಗುತ್ತಿದೆ. ಉಳಿದ ಕಡೆ ಬಿಜೆಪಿ ಮುಖಂಡರು ಹೇಳಿದಂತೆ ಮನಸ್ಸಿಗೆ ಬಂದಂತೆ ಅವೈಜ್ಞಾನಿಕವಾಗಿ ಮಾಡುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದು ತೀರಾ ಬೇಸರ. 2011ರ ಜನಗಣತಿ ಆಧಾರದ ಮೇಲೆ ವಾರ್ಡ್ ಪುನರ್ ವಿಂಗಡನೆ ಮಾಡಬೇಕು. ಈಗ 2021ರ ಜನಗಣತಿ ನಮ್ಮ ಮುಂದಿಲ್ಲ. ಬಿಜೆಪಿ ವೈಯಕ್ತಿಕ ಲಾಭಕ್ಕೆ ಪ್ರೊಜೆಕ್ಟೆಡ್ ಪಾಪುಲೇಶನ್ ಎಸ್ಟಿಮೇಟ್ ಆಧಾರದ ಮೇಲೆ ಈ ರೀತಿ ಮಾಡಿಸುತ್ತಿದೆ. ಇದು ವೈಜ್ಞಾನಿಕ ಪ್ರಕ್ರಿಯೆ ಅಲ್ಲ ಎಂದು ಅವರು ತಿಳಿಸಿದರು.

ಹಿಂದೆ ಡೀಲಿಮಿಟೇಶನ್ ಸಮಿತಿ ಮಾಡಿದಾಗ ದೇವೇಗೌಡರು, ಅನಂತಕುಮಾರ್, ಮಲ್ಲಿಕಾರ್ಜುನ ಖರ್ಗೆ ಸೇರಿ ಎಲ್ಲ ಪಕ್ಷದ ನಾಯಕರನ್ನು ಒಳಗೊಂಡಿತ್ತು. ಈಗಲೂ ಅದೇ ರೀತಿ ಎಲ್ಲ ಪಕ್ಷದ ನಾಯಕರು, ಸಾರ್ವಜನಿಕರ ಅಭಿಪ್ರಾಯ ಪಡೆಯಬೇಕು. ಎಲ್ಲ ಪಕ್ಷದ ನಾಯಕರನ್ನು ಒಳಗೊಂಡ ಸಮಿತಿ ರಚಿಸಿ ತೀರ್ಮಾನ ಕೈಗೊಳ್ಳಬೇಕಾಗಿತ್ತು. ಆದರೆ ಏಕಪಕ್ಷೀಯವಾಗಿ ನಿರ್ಧಾರ ಕೈಗೊಳ್ಳುತ್ತಿದ್ದಾರೆ ಎಂದು ಅವರು ಕಿಡಿಗಾರಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com