ಬೆಂಗಳೂರು: ಕೋವಿಡ್ ಲಸಿಕೆಯ ಎರಡೂ ಡೋಸ್ ಪಡೆದುಕೊಂಡವರಿಗೆ ಬೂಸ್ಟರ್ ಲಸಿಕೆ ನೀಡುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದ್ದು ಇನ್ನೂ ನಿರ್ಧಾರ ತೆಗೆದುಕೊಳ್ಳದಿರುವ ಸಂದರ್ಭದಲ್ಲಿ ರಾಜ್ಯಾದ್ಯಂತ ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನಾ ಲಸಿಕೆಯ ಅವಧಿ ಮುಗಿಯುತ್ತಾ ಬಂದಿದೆ.
ಅವಧಿ ಮುಗಿದಿರುವ ಲಸಿಕೆಯ ಬಗ್ಗೆ ಏನು ಮಾಡಬೇಕೆಂದು ಕೇಂದ್ರ ಸರ್ಕಾರದಿಂದ ಇನ್ನೂ ಯಾವುದೇ ಸಲಹೆ, ಸೂಚನೆ ಆದೇಶ ಬಂದಿಲ್ಲ, ಖಾಸಗಿ ಆಸ್ಪತ್ರೆಗಳು ರಾಜ್ಯದಲ್ಲಿ ಹೊಸ ಸಂಗ್ರಹಗಳನ್ನು ಸಂಗ್ರಹಿಸುವುದನ್ನು ನಿಲ್ಲಿಸಿವೆ.
ಕರ್ನಾಟಕದಲ್ಲಿ ಲಸಿಕೆ ನೀಡಿಕೆ ಪ್ರಮಾಣ ಗಣನೀಯವಾಗಿ ಉತ್ತಮವಾಗಿದ್ದು ಇತ್ತೀಚೆಗೆ ಖಾಸಗಿ ಆಸ್ಪತ್ರೆಗಳಿಗೆ ಲಸಿಕೆ ಹಾಕಿಸಿಕೊಳ್ಳಲು ಹೆಚ್ಚು ಜನ ಬರುತ್ತಿಲ್ಲ. ನಾವು ಬಳಕೆಯಾಗದ ಲಸಿಕೆಗಳ ದಾಸ್ತಾನನ್ನು ಹೊಂದಿದ್ದೇವೆ. ಕಳೆದ ವಾರ, ಅದನ್ನು ನಮ್ಮಿಂದ ಹಿಂತೆಗೆದುಕೊಳ್ಳುವಂತೆ ನಾವು ಕೇಂದ್ರಕ್ಕೆ ಮನವಿ ಮಾಡಿದ್ದೇವೆ,ಎಂದು ಖಾಸಗಿ ಆಸ್ಪತ್ರೆಯ ಹಿರಿಯ ವೈದ್ಯರು ಹೇಳುತ್ತಾರೆ.
ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ಸ್ ಅಸೋಸಿಯೇಷನ್(PHANA) ಪ್ರತಿನಿಧಿಗಳು ಇತ್ತೀಚೆಗೆ ರಾಷ್ಟ್ರೀಯ ಆರೋಗ್ಯ ಮಿಷನ್ ನಿರ್ದೇಶಕರನ್ನು ಭೇಟಿ ಮಾಡಿ ಖಾಸಗಿ ಆಸ್ಪತ್ರೆಗಳಲ್ಲಿ ಬಾಕಿ ಸಂಗ್ರಹವಾಗಿರುವ ಲಸಿಕೆ ಡೋಸ್ ಗಳನ್ನು ತೆಗೆದುಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಬರೆದು ಲಸಿಕೆಗಳನ್ನು ಹಿಂತೆಗೆದುಕೊಳ್ಳುವಂತೆ ಅಥವಾ ಆಸ್ಪತ್ರೆಗಳಿಗೆ ಹಣ ನೀಡಿದರೆ ಲಸಿಕೆಯನ್ನು ಜನರಿಗೆ ಉಚಿತವಾಗಿ ನೀಡಬಹುದೆಂದು ಖಾಸಗಿ ಆಸ್ಪತ್ರೆಗಳ ಒಕ್ಕೂಟ ಕೇಳಿಕೊಂಡಿದೆ.
ಸರ್ಕಾರ ಮಧ್ಯಪ್ರವೇಶಿಸುವಂತೆ ಮನವಿ ಮಾಡಿದ್ದೇವೆ. ಸದ್ಯಕ್ಕೆ, ನಾವು ಸುಮಾರು ಎಂಟು ಲಕ್ಷ ಲಸಿಕೆ ಡೋಸ್ ಸಂಗ್ರಹವನ್ನು ಹೊಂದಿದ್ದೇವೆ. ಇದರಲ್ಲಿ ಶೇಕಡ 10ರಷ್ಟು, ಈ ತಿಂಗಳು ಮತ್ತು ಶೇ 15ರಷ್ಟು ಜನವರಿ ವೇಳೆಗೆ ಮುಕ್ತಾಯವಾಗಲಿದೆ. ಮಾರ್ಚ್ ವೇಳೆಗೆ, 90% ಲಸಿಕೆಗಳ ಅವಧಿ ಮುಗಿಯುತ್ತದೆ. ನಾಳೆಯೊಳಗೆ ಕೇಂದ್ರದಿಂದ ಆದೇಶ ಬರುವ ನಿರೀಕ್ಷೆಯಿದೆ ಎಂದು ಫಾನಾ ಅಧ್ಯಕ್ಷ ಪ್ರಸನ್ನ ಹೇಳುತ್ತಾರೆ.
ಭಾರತ್ ಬಯೋಟೆಕ್ ನ ಕೊವಾಕ್ಸಿನ್ ಲಸಿಕೆ ಸಂಗ್ರಹ ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚಾಗಿದೆ. ಬೂಸ್ಟರ್ ಡೋಸ್ ಗಳನ್ನು ನೀಡುವುದಕ್ಕೆ ಕೇಂದ್ರ ಸರ್ಕಾರಕ್ಕೆ ಅನುಮತಿ ನೀಡದಿದ್ದರೆ ಮೇ 2022 ಕ್ಕೆ ಲಸಿಕೆಗಳನ್ನು ಮರುಮೌಲ್ಯಮಾಪನ ಮಾಡುವುದು ಸಹ ಸಹಾಯ ಮಾಡುವುದಿಲ್ಲ ಎಂದು ಆಸ್ಪತ್ರೆಗಳು ಚಿಂತಿತವಾಗಿವೆ ಎಂದು ವೈದ್ಯರು ಹೇಳುತ್ತಾರೆ.
ಭಾರತದಲ್ಲಿ ಓಮಿಕ್ರಾನ್ನ ಸುಮಾರು 30 ಪ್ರಕರಣಗಳು ವರದಿಯಾಗಿದ್ದು, ರಾಜ್ಯದಲ್ಲಿ ವೈರಾಲಜಿಸ್ಟ್ಗಳು ಮತ್ತು ವೈದ್ಯಕೀಯ ತಜ್ಞರು ಬೂಸ್ಟರ್ ಡೋಸ್ಗಳಿಗೆ ಒತ್ತಾಯಿಸುತ್ತಿದ್ದಾರೆ. ಕರ್ನಾಟಕದ ತಾಂತ್ರಿಕ ಸಲಹಾ ಸಮಿತಿಯ ಹಿರಿಯ ವೈದ್ಯರೊಬ್ಬರು, “ಹಲವಾರು ದೇಶಗಳು ಬೂಸ್ಟರ್ ಡೋಸ್ಗೆ ಹೋಗಲು ನಿರ್ಧರಿಸಿದಾಗ, ಭಾರತವು ಇನ್ನೂ ಯಾಕೆ ಕಾಯುತ್ತಿದೆ ಎಂದು ಕೇಳುತ್ತಾರೆ.
Advertisement