ಬೆಂಗಳೂರು: ಟ್ವಿಟರ್ ನ ವ್ಯವಸ್ಥಾಪಕ ನಿರ್ದೇಶಕ ಮನೀಷ್ ಮಹೇಶ್ವರವರಿಗೆ ಖುದ್ದು ಹಾಜರಾಗುವಂತೆ ಸೂಚಿಸಿದ್ದ ಉತ್ತರ ಪ್ರದೇಶ ಪೊಲೀಸರ ಕ್ರಮವನ್ನು ಕರ್ನಾಟಕ ಹೈಕೋರ್ಟ್ ಖಂಡಿಸಿದೆ.
ಘಾಜಿಯಾಬಾದ್ ನಲ್ಲಿ ಮುಸ್ಲಿಂ ವ್ಯಕ್ತಿಗೆ ಥಳಿಸಿದ ಪ್ರಕರಣಕ್ಕೆ ಟ್ವಿಟರ್ ನಲ್ಲಿ ಕೋಮು ಬಣ್ಣ ನೀಡಿದ್ದ ಪ್ರಕರಣದಲ್ಲಿ ಮಹೇಶ್ವರಿ ಅವರನ್ನು ಉತ್ತರ ಪ್ರದೇಶದ ಪೊಲೀಸರು ಖುದ್ದು ಹಾಜರಾಗುವಂತೆ ಸೂಚಿಸಿದ್ದರು.
ಉತ್ತರ ಪ್ರದೇಶದ ಪೊಲೀಸರ ಕ್ರಮವನ್ನು ಪ್ರಶ್ನಿಸಿ ಮನೀಷ್ ಮಹೇಶ್ವರಿ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿರುವ ನ್ಯಾ. ಜಿ ನರೇಂದ್ರ ಅವರಿದ್ದ ಹೈಕೋರ್ಟ್ ಪೀಠ, " ಲೋನಿ ಗಡಿ ಭಾಗದ ಪೊಲೀಸರು ದಾಖಲಿಸಿರುವ ಪ್ರಕರಣದಲ್ಲಿ ಮಹೇಶ್ವರಿ ಅವರ ಪಾತ್ರ (ಸಂಬಂಧ)ವನ್ನು ದೃಢಪಡಿಸದೇ ಅವರನ್ನು ವಿಚಾರಣೆಗೆ ಹಾಜರಾಗುವಂತೆ ಸೂಚಿಸುತ್ತಿರುವುದು ಸೂಕ್ತವಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ.
"ಒಂದು ವೇಳೆ ಐಪಿಸಿ ಸೆಕ್ಷನ್ 376 ರ ಅಡಿಯಲ್ಲಿ ಆರೋಪ (ರೇಪ್ ಗೆ ಶಿಕ್ಷೆ) ಮಾಡಿದ್ದರೆ ಸಾಮರ್ಥ್ಯ ಮುಖ್ಯವಾಗುತ್ತದೆ. ಸಾಮರ್ಥ್ಯ ಇಲ್ಲದವನ ವಿರುದ್ಧ ಆರೋಪ ಮಾಡಲು ಸಾಧ್ಯವಿಲ್ಲ. ಹಾಗೆಯೇ ಅಪ್ ಲೋಡ್ ಆಗಿದ್ದ ತಿರುಚಿದ ವಿಡಿಯೋಗಳನ್ನು ನಿಯಂತ್ರಿಸಲು ಟ್ವಿಟರ್ ಗೆ ಸಾಮರ್ಥ್ಯವಿದೆ ಎಂದು ನೀವು ತೀರ್ಮಾನಿಸಿದ್ದೀರೋ?" ಎಂದು ಹೈಕೋರ್ಟ್ ಉತ್ತರ ಪ್ರದೇಶ ಪೊಲೀಸರನ್ನು ಪ್ರಶ್ನಿಸಿದೆ.
ಉತ್ತರ ಪ್ರದೇಶದ ಪೊಲೀಸರಿಗೆ ಹೈಕೋರ್ಟ್ ಕೇಳಿದ ಸರಣಿ ಪ್ರಶ್ನೆಗಳಲ್ಲಿ ಇದು ಪ್ರಮುಖವಾಗಿತ್ತು. ಅರ್ಜಿ ವಿಚಾರಣೆ ನಡೆಸಿದ ಪೀಠ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವಿಟರ್ ಇಂಡಿಯಾದ ವಿರುದ್ಧ ಇರುವ ಆರೋಪಗಳೇನು? ಎಂದು ಉತ್ತರ ಪ್ರದೇಶ ಪೊಲೀಸರ ಪರ ವಾದಿಸಿದ ವಕೀಲರನ್ನು ಪ್ರಶ್ನಿಸಿದೆ.
"ಈ ಅಪರಾಧ ಪ್ರಕರಣಕ್ಕೂ ಟ್ವಿಟರ್ ಇಂಡಿಯಾಗೂ ದೂರುದಾರರು ಹೇಗೆ ಸಂಬಂಧಪಡುತ್ತಾರೆ? ದೂರು ದಾಖಲಿಸುವುದಕ್ಕೂ ಕೆಲವು ಆರೋಪ, ಆಧಾರಗಳು ಇರಬೇಕಾಗುತದೆ. ಇಲ್ಲಿ ಸಂಬಂಧಪಡದ ಐಟಿ ನಿಯಮಗಳನ್ನು ತರಬೇಡಿ" ಎಂದು ಕೋರ್ಟ್ ಹೇಳಿದೆ
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಉತ್ತರ ಪ್ರದೇಶದ ಪೊಲೀಸ್ ಪರ ವಾದಿಸಿದ ವಕೀಲ ಪ್ರಸನ್ನ ಪಿ. ವಿಷಯ ತನಿಖಾ ಹಂತದಲ್ಲಿದೆ. ಆದ್ದರಿಂದಲೇ ಮನೀಷ್ ಮಹೇಶ್ವರಿ ಅವರಿಗೆ ಉತ್ತರ ಪ್ರದೇಶ ಪೊಲೀಸರ ಎದುರು ಹಾಜರಾಗುವಂತೆ ನೊಟೀಸ್ ಜಾರಿಗೊಳಿಸಲಾಗಿತ್ತು.
"ಐಟಿ ನಿಯಮಗಳ ಪ್ರಕಾರ, ಹೊಣೆಗಾರಿಕೆಯನ್ನು ನಿಭಾಯಿಸುವ ಪ್ರತಿನಿಧಿಯನ್ನು ಸಂಸ್ಥೆ ನೇಮಕ ಮಾಡಬೇಕು, ಮಹೇಶ್ವರಿ ಅವರು ಪೊಲೀಸರೆದುರು ಹಾಜರಾದರೆ ಬಂಧನಕ್ಕೊಳಗಾಗುವ ಆತಂಕ ಹೊಂದಿದ್ದಾರೆ. ಆದರೆ ಎಲ್ಲಾ ಪ್ರಕರಣಗಳಲ್ಲಿಯೂ ಬಂಧನದ ಅವಶ್ಯಕತೆ ಇರುವುದಿಲ್ಲ, ಆದರೆ ಪೊಲೀಸರ ಪ್ರಶ್ನೆಗಳಿಗೆ ಸಂಸ್ಥೆಯ ಪ್ರತಿನಿಧಿಯಾಗಿ, ಅವರು ಉತ್ತರ ನೀಡಬೇಕಿದೆ" ಎಂದು ಪ್ರಸನ್ನ ವಾದಿಸಿದ್ದಾರೆ.
ಟ್ವಿಟರ್ ಇಂಡಿಯಾ ತನ್ನ ವೇದಿಕೆಯಲ್ಲಿ ಪ್ರಕಟವಾಗುವ ಕಂಟೆಂಟ್ ಗಳ ಮೇಲೆ ಜವಾಬ್ದಾರಿ ಹೊಂದಿರಬೇಕಾಗುತ್ತದೆ. ಲಕ್ಷಾಂತರ ಮಂದಿಯ ಖಾತೆದಾರರು ನಿಯಂತ್ರಣವಿಲ್ಲದೇ ಇರಲು ಸಾಧ್ಯವಿಲ್ಲ ಎಂದು, ಟ್ವಿಟರ್ ಪೊಲೀಸರ ಪ್ರಶ್ನೆಗಳಿಗೆ ಉತ್ತರಿಸಲು ಪ್ರತಿನಿಧಿಯೊಬ್ಬರನ್ನು ನೇಮಕ ಮಾಡಲೇಬೇಕಿದೆ ಎಂದು ಪ್ರಸನ್ನ ವಾದಿಸಿದ್ದಾರೆ.
ಅಷ್ಟೇ ಅಲ್ಲದೇ ನೊಟೀಸ್ ನೀಡಿರುವುದು ಉತ್ತರ ಪ್ರದೇಶದ ಪೊಲೀಸರಾಗಿದ್ದು ದೂರುದಾರರ ವಾಸಸ್ಥಾನ ಕರ್ನಾಟಕ ಹೈಕೋರ್ಟ್ ಗೆ ಮೊರೆ ಹೋಗುವುದಕ್ಕೆ ಇರುವ ಮಾನದಂಡವಲ್ಲ ಎಂದೂ ಪ್ರಸನ್ನ ಹೇಳಿದ್ದಾರೆ.
ಮಹೇಶ್ವರಿ ಪರ ಹಿರಿಯ ಅಡ್ವೊಕೇಟ್ ಸಿವಿ ನಾಗೇಶ್ ವಾದ ಮಂಡಿಸಿದ್ದು, ಮಹೇಶ್ವರಿ ಟ್ವಿಟರ್ ನ ಉದ್ಯೋಗಿಯಾಗಿದ್ದು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಆದ್ದರಿಂದ ಕರ್ನಾಟಕ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಟಿಸಿಐಪಿಎಲ್ ಗೆ ಟ್ವಿಟರ್ ನೀಡುವ ಸೇವೆಗಳ ಮೇಲೆ ನಿಯಂತ್ರಣವಿರುವುದಿಲ್ಲ, ಅರ್ಜಿದಾರರಿಗೆ ಪ್ರಕರಣದೊಂದಿಗೆ ಸಂಬಂಧವಿಲ್ಲ ಅಥವಾ ಆ ಬಗ್ಗೆ ಮಾಹಿತಿಯೂ ಇಲ್ಲ" ಎಂದು ಹೇಳಿದ್ದು, ಬಂಧನದಿಂದ ವಿನಾಯಿತಿ ನೀಡುವುದಾಗಿ ಭರವಸೆ ನೀಡಿದಲ್ಲಿ ಮಾತ್ರ ಮಹೇಶ್ವರಿ ಪೊಲೀಸರೆದುರು ಹಾಜರಾಗಲಿದ್ದಾರೆ" ಎಂದು ಹೇಳಿದ್ದಾರೆ.
Advertisement