ಚಪ್ಪಲಿ ಬಿಟ್ಟು ಶೂ ಧರಿಸಿ: ಶಿಸ್ತು ಮರೆತ ನ್ಯಾಯಾಧೀಶರ ಭದ್ರತಾ ಸಿಬ್ಬಂದಿಗಳಿಗೆ ಕಠಿಣ ಎಚ್ಚರಿಕೆ
ಬೆಂಗಳೂರು: ಕರ್ತವ್ಯದ ಸಮಯದಲ್ಲಿ ಮೊಬೈಲ್'ಗಳಲ್ಲಿ ಕಾಲಹರಣ ಮಾಡುತ್ತಾ, ಸಮವಸ್ತ್ರ, ಧರಿಸದೆ ಶಿಸ್ತು ನಿಯಮ ಪಾಲಿಸದ ನ್ಯಾಯಾಧೀಶರ ಭದ್ರತಾ ಸಿಬ್ಬಂದಿಗಳಿಗೆ ರಾಜ್ಯ ಸರ್ಕಾರ ಕಠಿಣ ಎಚ್ಚರಿಕೆ ನೀಡಿದೆ.
ರಾಜ್ಯದ ಹೈಕೋರ್ಟ್ ನ್ಯಾಯಾಧೀಶರ ಭದ್ರತಾ ಸಿಬ್ಬಂದಿಗಳ ಕುರಿತು ರಾಜ್ಯದ ಉಪ ಪೊಲೀಸ್ ಆಯುಕ್ತರು ಸುತ್ತೋಲೆಯೊಂದನ್ನು ಹೊರಡಿಸಿದ್ದು, ಶಿಸ್ತು ನಿಯಮಗಳ ಪಾಲಿಸುವಂತೆ ಸೂಚನೆ ನೀಡಿದ್ದಾರೆ.
ನ್ಯಾಯಾಧೀಶರಿಗೆ ಭದ್ರತೆಗೆ ನಿಯೋಜನೆಗೊಂಡಿರುವ ಸಿಬ್ಬಂದಿಗಳು ಸದಾಕಾಲ ಚುರುಕು ಹಾಗೂ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು. ಕರ್ತವ್ಯದ ವೇಳೆ ಭದ್ರತಾ ಸಿಬ್ಬಂದಿಗಳು ಚಪ್ಪಲಿಗಳನ್ನು ಧರಿಸುತ್ತಿರುವುದು, ಮೊಬೈಲ್ ಗಳಲ್ಲಿ ಕಾಲಹರಣ ಮಾಡುತ್ತಿರುವ ಕುರಿತು ಹಲವಾರು ದೂರುಗಳು ಬರುತ್ತಿವೆ. ಸಿಬ್ಬಂದಿಗಳು ಶಿಸ್ತು ಪಾಲನೆ ಮಾಡುವುದು ಕಡ್ಡಾಯವಾಗಿದೆ. ಕರ್ತವ್ಯದ ಸಮಯದಲ್ಲಿ ಸ್ವಚ್ಛವಾದ ಸಮವಸ್ತ್ರ, ಪಾಲಿಷ್ ಮಾಡಿದ ಶೂಗಳನ್ನು ಧರಿಸಬೇಕು. ಯಾವುದೇ ಸಂದರ್ಭವಾದರೂ ಚಪ್ಪಲಿಗಳ ಧರಿಸಬಾರದು. ಕರ್ತವ್ಯದ ಸಮಯದಲ್ಲಿ ಮೊಬೈಲ್ ಬಳಕೆ ಮಾಡಬಾರದು.
ಭದ್ರತೆಗಾಗಿ ನೀಡಲಾಗಿರುವ ಶಸ್ತ್ರಾಸ್ತ್ರಗಳನ್ನು ಆಗಾಗ ಪರಿಶೀಲಿಸಬೇಕು. ತಿಂಗಳಿಗೆ ಒಮ್ಮೆಯಾದರೂ ಪರಿಶೀಲಿಸಬೇಕು. ಯಾವುದೇ ಸಿಬ್ಬಂದಿಗೆ ರಜೆಯ ಅಗತ್ಯಬಿದ್ದರೆ, ಸಂಬಂಧಪಟ್ಟಂತಹ ಅಧಿಕಾರಿಗಳ ಅನುಮತಿ ಪಡೆಯಬೇಕು. ನ್ಯಾಯಾಧೀಶರ ನಿವಾಸದ ಬಳಿ ಓಡಾಡುತ್ತಿರುವ ವ್ಯಕ್ತಿಗಳ ಮೇಲೆ ಕಣ್ಗಾವಲಿರಿಸಬೇಕು. ಅನುಮಾನ ವ್ಯಕ್ತವಾಗುತ್ತಿದ್ದಂತೆಯೇ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ