ಇದೇ ಮೊದಲು: ಮಠದ ಪೀಠಾಧಿಕಾರಿಯಾಗಿ ಕಲಬುರಗಿಯ 5 ವರ್ಷದ ಬಾಲಕನ ನೇಮಕ!
ಕಲಬುರಗಿ: ಇದೇ ಮೊದಲ ಬಾರಿಗೆ ಕಲಬುರಗಿಯ ಐದು ವರ್ಷದ ಬಾಲಕನೊಬ್ಬ ಮಠದ ಪೀಠಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದಾನೆ.
ಕಾಳಗಿ ಸಂಸ್ಥಾನದ ಹಿರೇಮಠದ ಪೀಠಾಧಿಪತಿ ಶಿವಬಸವ ಶಿವಾಚಾರ್ಯ ಶ್ರೀಗಳು ಸೋಮವಾರ ಹೃದಯಾಘಾತದ ಕಾರಣ ಲಿಂಗೈಕ್ಯರಾಗಿದ್ದರು. ಅವರ ಪೀಠಕ್ಕೆ ನೂತನ ಪೀಠಾಧಿಪತಿಯಾಗಿ ಐದು ವರ್ಷದ ಬಾಲಕನನ್ನು ನೇಮಕ ಮಾಡಲಾಗಿದೆ.
ಬಾಲಕನು ಲಿಂಗೈಕ್ಯರಾದ ಶ್ರೀಗಳ ಪೂರ್ವಾಶ್ರಮದ ಸೋದರ ಗುರುನಂಜಯ್ಯ ಹಿರೇಮಠ ಅವರ ಪುತ್ರ ನೀಲಕಂಠನಾಗಿದ್ದು ಅವನಿಗೆ ಶಾಸ್ತ್ರೋಕ್ತವಾಗಿ ಪೀಠಾಧಿಕಾರ ನೀಡಿ ಚಿಕ್ಕ ನೀಲಕಂಠ ಸ್ವಾಮಿಗಳೆಂದು ನೇಮಕ ಮಾಡಲಾಗಿದೆ.
ಸಂಸ್ಥಾನದ ಉತ್ತರಾಧಿಕಾರಿ ಸ್ಥಾನವನ್ನು ಖಾಲಿ ಬಿಡುವಂತಿಲ್ಲವಾದ ಕಾರಣ ಬಾಲಕನನ್ನು ಪೀಠಾಧಿಪತಿಯಾಗಿಸಲಾಗಿದೆ ಎಂದು ಮೂಲಗಳು ಹೇಳಿದೆ. ಹಿರಿಯ ಶ್ರೀಗಳ ತಲೆಯ ಮೇಲಿದ್ದ ಹಸಿರು ಶಾಲು, ಕೈನಲ್ಲಿನ ಬೆತ್ತವನ್ನು ಉತ್ತರಾಧಿಕಾರಿಗೆ ಹಸ್ತಾಂತರಿಸುವ ಮೂಲಕ ಉತ್ತರಾಧಿಕಾರಿಯ ಪೀಠಾರೋಘಣ ಪ್ರಕ್ರಿಯೆ ಅನೇಕ ಸ್ವಾಮೀಜಿಗಳ ಸಮ್ಮುಖದಲ್ಲಿ ನಡೆದಿದೆ.
ಇದೇ ವೇಳೆ ಲಿಂಗೈಕ್ಯರಾದ ಶಿವಬಸವ ಶಿವಾಚಾರ್ಯ ಶ್ರೀಗಳ ಅಂತ್ಯಕ್ರಿಯೆಯು ಪಂಚಾಚಾರ್ಯರ ತತ್ವದಂತೆ ಮಠದ ಆವರಣದಲ್ಲಿ ನಡೆದಿದೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ