ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಡ್ ಬುಕ್ಕಿಂಗ್ ಹಗರಣ ಬಯಲಿಗೆ ಬಂದದ್ದು ಹೇಗೆ, ಕೋಮುವಾದಕ್ಕೆ ತಿರುಗಲು ಕಾರಣವೇನು, ಬಿಬಿಎಂಪಿ ಅಧಿಕಾರಿಗಳು ಹೇಳುವುದೇನು?

ರಾಜಕೀಯ ನಾಯಕರು ತಮ್ಮ ಕ್ಷೇತ್ರದ ಜನರಿಗೆ ಆಸ್ಪತ್ರೆಗಳಲ್ಲಿ ಬೆಡ್ ಕೇಳಿದಾಗ ಸಿಗದಿದ್ದುದು ಬೆಡ್ ಹಂಚಿಕೆ ಹಗರಣ ಬೆಳಕಿಗೆ ಬರಲು ಕಾರಣ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಮೂಲಕವೇ ಹಗರಣವನ್ನು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಮತ್ತು ಶಾಸಕ ಸತೀಶ್ ರೆಡ್ಡಿ ಬಯಲಿಗೆಳೆದಿದ್ದಾರೆ ಎಂದು ಹೇಳಲಾಗುತ್ತಿದೆ.
Published on

ಬೆಂಗಳೂರು: ರಾಜಕೀಯ ನಾಯಕರು ತಮ್ಮ ಕ್ಷೇತ್ರದ ಜನರಿಗೆ ಆಸ್ಪತ್ರೆಗಳಲ್ಲಿ ಬೆಡ್ ಕೇಳಿದಾಗ ಸಿಗದಿದ್ದುದು ಬೆಡ್ ಹಂಚಿಕೆ ಹಗರಣ ಬೆಳಕಿಗೆ ಬರಲು ಕಾರಣ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಮೂಲಕವೇ ಹಗರಣವನ್ನು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಮತ್ತು ಶಾಸಕ ಸತೀಶ್ ರೆಡ್ಡಿ ಬಯಲಿಗೆಳೆದಿದ್ದಾರೆ ಎಂದು ಹೇಳಲಾಗುತ್ತಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮತ್ತು ಕೋವಿಡ್-19 ವಾರ್ ರೂಂನ ಉನ್ನತ ಮಟ್ಟದ ಅಧಿಕಾರಿಗಳು ಬೆಡ್ ಹಂಚಿಕೆಯಲ್ಲಿ ಅಕ್ರಮ ನಡೆದಿರಬಹುದು ಎಂಬುದನ್ನು ಒಪ್ಪಿಕೊಳ್ಳುತ್ತಾರೆ. ಅದನ್ನು ತನಿಖೆ ನಡೆಸಲಾಗುತ್ತಿದೆ. ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಹೆಸರು ಹೇಳಲಿಚ್ಛಿಸದ ಉನ್ನತ ಮಟ್ಟದ ಅಧಿಕಾರಿಗಳು, ಬೆಡ್ ಹಂಚಿಕೆ ದಂಧೆಯ ನಂತರ ಅದು ತೆಗೆದುಕೊಂಡ ಕೋಮುವಾದಿ ತಿರುವುಗಳ ಬಗ್ಗೆ ಹೇಳುತ್ತಾ ಆಘಾತಕಾರಿ ಮಾಹಿತಿಯನ್ನು ಹೊರಹಾಕಿದ್ದಾರೆ.

ನಗರದಲ್ಲಿ ನಡೆದ ಘಟನೆಯೊಂದು ಬೆಡ್ ಹಗರಣವನ್ನು ಬೆಳಕಿಗೆ ತರಲು ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ. ಮೇಲ್ವರ್ಗದ ಸಮುದಾಯದ ವ್ಯಕ್ತಿಗೆ ಬೆಡ್ ಸಿಗದೆ ಅದು ಕೆಳವರ್ಗದ ಸಮುದಾಯದ ತೀವ್ರ ಅನಾರೋಗ್ಯದಲ್ಲಿದ್ದ ವ್ಯಕ್ತಿಗೆ ಆಸ್ಪತ್ರೆಯಲ್ಲಿ ಬೆಡ್ ನೀಡಿದ್ದು ಮೇಲ್ವರ್ಗದವರನ್ನು ಕೆರಳಿಸಿತು ಎನ್ನಲಾಗುತ್ತಿದೆ. ಕೆಳ ವರ್ಗದ ಸಮುದಾಯದ ರೋಗಿಯ ಸಂಬಂಧಿ ಆಪರೇಟರ್ ಬಿಬಿಎಂಪಿ ವಾರ್ ರೂಂನಲ್ಲಿದ್ದು ಆತನ ಮೂಲಕ ಬೆಡ್ ಸಿಕ್ಕಿದ್ದು ಮೇಲ್ವರ್ಗದವರನ್ನು ಕೆರಳಿಸಿತ್ತು ಎನ್ನಲಾಗುತ್ತಿದೆ. ಬಿಬಿಎಂಪಿ ವಾರ್ ರೂಂಗೆ ಅನಗತ್ಯವಾಗಿ ರಾಜಕೀಯ ನಾಯಕರು ಬಂದು ಅಲ್ಲಿ ಕೆಲಸ ಮಾಡುವವರಿಗೆ ಬೆಡ್ ಬುಕ್ಕಿಂಗ್ ವಿಚಾರದಲ್ಲಿ ಕಿರಿಕಿರಿ ಮಾಡುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಹೇಳುತ್ತಾರೆ.

ಇದು ಬೊಮ್ಮನಹಳ್ಳಿ ಮತ್ತು ಬೆಂಗಳೂರು ದಕ್ಷಿಣ ವಲಯ ಕ್ಷೇತ್ರದ ಶಾಸಕರು, ಸಂಸದರಿಂದ ಹೆಚ್ಚಿನ ಮಟ್ಟಿನ ಒತ್ತಡ ಬರುತ್ತಿತ್ತು ಎನ್ನುತ್ತಾರೆ. ವಾರ್ ರೂಂ ಮತ್ತು ನೋಡಲ್ ಅಧಿಕಾರಿಗಳ ಕಚೇರಿಗೆ ಬಂದು ಪ್ರತಿದಿನ  5ರಿಂದ 10ರಷ್ಟು ಬೆಡ್ ಗಳನ್ನು ಸಂಸದರು, ಶಾಸಕರು ಮತ್ತು ಸಚಿವರುಗಳ ಕೋಟಾಕ್ಕೆಂದು ಮೀಸಲಿಡಬೇಕೆಂದು ಒತ್ತಡ ಹೇರುತ್ತಾರೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಕಳೆದ ಶನಿವಾರ, ಸಂಸದ ತೇಜಸ್ವಿ ಸೂರ್ಯ ಮತ್ತು ಅವರ ತಂಡ ಬಿಬಿಎಂಪಿಯನ್ನು ಸಂಪರ್ಕಿಸಿ ಹಲವರು ಬೆಡ್ ಗಳಿಗೆ ಬೇಡಿಕೆಯಿಡುತ್ತಿದ್ದಾರೆ, ನಮಗೆ ಒತ್ತಡ ಹಾಕುತ್ತಾರೆ, ಆದರೆ ಸಿಗುವುದಿಲ್ಲ ಎಂದು ಆರೋಪಿಸುತ್ತಾರೆ ಎಂದಿದ್ದರು. ಬೆಡ್ ಹಂಚಿಕೆ ಪೋರ್ಟಲ್ ನಲ್ಲಿ ನ್ಯೂನತೆಯಿದೆ, ಅದು ಹೇಗೆ ಕೆಲಸ ಮಾಡುತ್ತದೆ ಎಂದು ನೋಡಬೇಕು ಎಂದು ಹೇಳಿದ್ದರು. ನಾವು ಲೋಪದೋಷವನ್ನು ಒಪ್ಪಿಕೊಂಡು ಮಾಹಿತಿಯನ್ನು ಹಂಚಿಕೊಂಡೆವು. ತೇಜಸ್ವಿ ಸೂರ್ಯ ಅವರ ತಂಡ ದಕ್ಷಿಣ ವಲಯ ವಾರ್ ರೂಂನ್ನು ಸಂಪರ್ಕಿಸಿ ನಾವು ಅಲ್ಲಿಗೆ ಬಂದು ಬೆಡ್ ಹಂಚಿಕೆ ವ್ಯವಸ್ಥೆ ಬಗ್ಗೆ ನೋಡಬೇಕು ಎಂದಿದ್ದರು. ಆದರೆ ವಾರ್ ರೂಂಗೆ ಹೋಗಲು ಅವರಿಗೆ ಬಿಡಲಿಲ್ಲ. ದಕ್ಷಿಣ ವಲಯ ರಾಜಕೀಯವಾಗಿ ಬಲಿಷ್ಠವಾಗಿದ್ದು ಒಬ್ಬ ರಾಜಕೀಯ ವ್ಯಕ್ತಿಯ ತಂಡವನ್ನು ಬಿಟ್ಟರೆ ಬೇರೆಯವರು ಕೂಡ ಅನುಸರಿಸುತ್ತಾರೆ, ಆಪರೇಟರ್ ಗಳು ಹೊರಗುತ್ತಿಗೆ ಆಧಾರದಲ್ಲಿ ಇರುವುದರಿಂದ ಮತ್ತು ತರಬೇತುದಾರರಾಗಿರುವುದರಿಂದ ಬಿಡುವುದಿಲ್ಲ ಎಂದಿದ್ದೆವು ಎಂದು ಅಧಿಕಾರಿಯೊಬ್ಬರು ಹೇಳುತ್ತಾರೆ.

ಆದರೆ ನಾಲ್ವರು ರಾಜಕೀಯ ವ್ಯಕ್ತಿಗಳಾದ ತೇಜಸ್ವಿ ಸೂರ್ಯ, ಶಾಸಕರಾದ ಉದಯ್ ಗರುಡಾಚಾರ್, ಸತೀಶ್ ರೆಡ್ಡಿ ಮತ್ತು ರವಿ ಸುಬ್ರಹ್ಮಣ್ಯ ವಾರ್ ರೂಂಗೆ ಹೋಗಿ ಬೆಡ್ ನಿರಾಕರಿಸುತ್ತೀರಿ, ವ್ಯವಸ್ಥೆಯಲ್ಲಿ ಲೋಪದೋಷವಿದೆ ಎಂದು ಹೇಳಿದರು. ಇದು ಕೋಮುವಾದಕ್ಕೆ ತಿರುಗಲು ಕಾರಣ ಶಾಸಕರು, ಸಂಸದರು ತಮ್ಮ ಜನರಿಗೆ ಬೆಡ್ ಗಳನ್ನು ಕೇಳಿರುವುದು, ವಾರ್ ರೂಂನಲ್ಲಿರುವ ಆಪರೇಟರ್ ಗಳು ತಮ್ಮ ಸಮುದಾಯಗಳ ಜನರಿಗೆ ಬೆಡ್ ನೀಡುತ್ತಿದ್ದುದು, ಶಾಸಕರು ಕೇಳಿದವರಿಗೆ ಬೆಡ್ ಹಂಚಿಕೆ ಮಾಡದಿರುವುದು ಕಾರಣವಾಗಿದೆ ಎಂದು ಅಧಿಕಾರಿಗಳು ಆರೋಪಿಸುತ್ತಾರೆ.

ತೇಜಸ್ವಿ ಸೂರ್ಯ ಮತ್ತು ಅವರ ತಂಡ ಅಂದು ವಾರ್ ರೂಂಗೆ ಹೋದಾಗ ಅಲ್ಲಿ 50 ರಿಂದ 55 ಸಿಬ್ಬಂದಿ ಮಾತ್ರ ಕರ್ತವ್ಯದಲ್ಲಿದ್ದರು. ಅವರ ಹೆಸರುಗಳನ್ನೆಲ್ಲಾ ತೆಗೆದುಕೊಂಡು ಬಹುತೇಕರ ಹೆಸರನ್ನು ಬಿಟ್ಟು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ 16 ಮಂದಿ ಆಪರೇಟರ್ ಗಳ ಹೆಸರುಗಳನ್ನು ಮಾತ್ರ ಬಿಟ್ಟಿದ್ದಾರೆ. ಇಂದು ಸಿಸಿಬಿ ವಿಚಾರಣೆ ಎದುರಿಸುತ್ತಿರುವ ಡಾ ರೆಹಾನ್ ಅವರಿಗೆ ನಿಕಟವಾಗಿ ಕೆಲಸ ಮಾಡುತ್ತಿರುವವರಾಗಿದ್ದಾರೆ. ಈ ಆಪರೇಟರ್ ಗಳು ಬೆಡ್ ಹಂಚಿಕೆಯ ಕೋಟಾವನ್ನು ನಿರಾಕರಿಸಿದವರಾಗಿದ್ದರು ಎಂದರು.

ಕಳೆದ ವರ್ಷ ಸಾಫ್ಟ್ ವೇರ್ ನ್ನು ತರಾತುರಿಯಿಂದ ತಯಾರಿಸಿದ್ದರಿಂದ ಸಾಫ್ಟ್ ವೇರ್ ನಲ್ಲಿ ಕೆಲವು ಸಮಸ್ಯೆಗಳಿದ್ದವು. ದಿನನಿತ್ಯ ಮಾದರಿಯಲ್ಲಿ ಅದನ್ನು ಅಪ್ ಗ್ರೇಡ್ ಮಾಡಲಾಗುತ್ತದೆ. ಹಾಗೆಂದು ಇಡೀ ವ್ಯವಸ್ಥೆ ಸರಿಯಿಲ್ಲವೆಂದು ಹೇಳುವುದು ತಪ್ಪಾಗುತ್ತದೆ, ತಾಂತ್ರಿಕ ತಜ್ಞರನ್ನು ವ್ಯವಸ್ಥೆಗೆ ತೆಗೆದುಕೊಳ್ಳಬೇಕಾಗುತ್ತದೆ ಎಂದು ವಾರ್ ರೂಂನ ಹಿರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ.

ಬೆಡ್ ಹಂಚಿಕೆ ಹಗರಣ, ನಂತರ ಅದು ಕೋಮುವಾದಕ್ಕೆ ತಿರುಗಿರುವ ಬಗ್ಗೆ ಬಿಜೆಪಿ ಶಾಸಕರೊಬ್ಬರೇ ಹೇಳುವುದು ಹೀಗೆ, ಸಹಾಯ ಮಾಡಲು ನಿಮಗೆ ಮನಸ್ಸಿದ್ದರೆ ಅಲ್ಲಿ ಮಾರ್ಗ ಇರುತ್ತದೆ, ತೇಜಸ್ವಿ ಸೂರ್ಯ ಅವರು ದಂಧೆಯನ್ನು ಬಯಲಿಗೆಳೆದು ಸಮಸ್ಯೆಯನ್ನು ಬಗೆಹರಿಸುವುದರ ಬದಲಿಗೆ ಇನ್ನಷ್ಟು ಸಮಸ್ಯೆ ತಂದಿಟ್ಟಿದ್ದಾರೆ. ಈ ಸಮಯದಲ್ಲಿ ಮೊದಲೇ ಜನರು ಸರ್ಕಾರ ವಿರುದ್ಧ ರೊಚ್ಚಿಗೆದ್ದಿದ್ದಾರೆ, ಇಂತಹ ಸಮಯದಲ್ಲಿ ತೇಜಸ್ವಿ ಸೂರ್ಯ ಮತ್ತು ಅವರ ಮಾವ ಶಾಸಕ ರವಿ ಸುಬ್ರಹ್ಮಣ್ಯ ಅವರ ಕೆಲಸ ಹೇಳಿಕೆಗೆ ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ಆಗಿದೆ ಎಂದರು.

ಈ ಮಧ್ಯೆ, ಸಂಸದ ತೇಜಸ್ವಿ ಸೂರ್ಯ ಅವರು ಈ ವಿಚಾರದಲ್ಲಿ ಕೇಳಿ ಬರುತ್ತಿರುವ ಆರೋಪಗಳನ್ನೆಲ್ಲಾ ತಮ್ಮ ಆಪ್ತ ಸಹಾಯಕನ ಮೂಲಕ ಅಲ್ಲಗಳೆದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com