ಮೈಸೂರು ಹಾಗೂ ನೆರೆಹೊರೆಯ ಜಿಲ್ಲೆಗಳಿಗೆ ಸರ್ಕಾರದಿಂದಲೇ ಆಕ್ಸಿಜನ್ ಹಂಚಿಕೆ: ಸಚಿವ ಎಸ್.ಟಿ. ಸೋಮಶೇಖರ್

ಆಕ್ಸಿಜನ್ ಸಮಸ್ಯೆ ನಿವಾರಣೆಗೆ ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು ಜಿಲ್ಲೆಗೆ ಅಗತ್ಯಕ್ಕೆ ಅನುಗುಣವಾಗಿ ಆಕ್ಸಿಜನ್ ಹಂಚಿಕೆ ಮಾಡಲು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರೊಂದಿಗೆ ಮಾತನಾಡಿದ್ದೇನೆ ಎಂದು ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸುತ್ತೂರು ಮಠದ ಸ್ವಾಮೀಜಿ ಮತ್ತು ಸಚಿವ ಎಸ್ ಟಿ ಸೋಮಶೇಖರ್
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸುತ್ತೂರು ಮಠದ ಸ್ವಾಮೀಜಿ ಮತ್ತು ಸಚಿವ ಎಸ್ ಟಿ ಸೋಮಶೇಖರ್
Updated on

ಮೈಸೂರು: ಆಕ್ಸಿಜನ್ ಸಮಸ್ಯೆ ನಿವಾರಣೆಗೆ ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು ಜಿಲ್ಲೆಗೆ ಅಗತ್ಯಕ್ಕೆ ಅನುಗುಣವಾಗಿ ಆಕ್ಸಿಜನ್ ಹಂಚಿಕೆ ಮಾಡಲು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರೊಂದಿಗೆ ಮಾತನಾಡಿದ್ದೇನೆ ಎಂದು ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.

ಅವರು ಇಂದು ಮೈಸೂರಿನ ಜೆ.ಎಸ್.ಎಸ್ ಆಸ್ಪತ್ರೆಯಲ್ಲಿ  ಆಮ್ಲಜನಕ ಸಹಿತ ಹಾಸಿಗೆ ಹೆಚ್ಚಳ ಮಾಡಲು ಸುತ್ತೂರು ಶ್ರೀಗಳೊಂದಿಗೆ ಸಭೆ ಮಾಡಿದ ನಂತರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು.

ಜೆ.ಎಸ್.ಎಸ್ ಆಸ್ಪತ್ರೆಯಲ್ಲಿ 417 ಹಾಸಿಗೆಗಳನ್ನು ಕೊಟ್ಟಿದ್ದಾರೆ. ಇದರಲ್ಲಿ 100 ಆಮ್ಲಜನಕ ಸಹಿತ ಹಾಸಿಗೆಗಳು ಇವೆ. ಈ ಆಕ್ಸಿಜನರೇಟೆಡ್ ಹಾಸಿಗೆಗಳ ಪ್ರಮಾಣವನ್ನು ಹಂತ ಹಂತವಾಗಿ ಹೆಚ್ಚಿಸುವಂತೆ ಕಳೆದ ವಾರ ಶ್ರೀಗಳನ್ನು ಭೇಟಿಯಾಗಿದ್ದಾಗ ಕೇಳಿದ್ದೆವು. ಶ್ರೀಗಳು ಅದಕ್ಕೆ ಸ್ಪಂದಿಸಿದ್ದಾರೆ ಎಂದರು.

ಆಕ್ಸಿಜನರೇಟೆಡ್ ಹಾಸಿಗೆ ಹೆಚ್ಚಿಸಿದರೆ ಆಕ್ಸಿಜನ್ ಪೂರೈಕೆಯನ್ನು ಹೆಚ್ಚಿಸುವಂತೆ ಕೇಳಿದ್ದಾರೆ. ಇದರ ಉಸ್ತುವಾರಿ ನೋಡಿಕೊಳ್ಳುವ ಪ್ರತಾಪ್ ಸಿಂಹ ಅವರು ಅದರಂತೆ ಕ್ರಮವಹಿಸುವರು ಎಂದರು.

ಆಕ್ಸಿಜನ್ ಕೊರತೆ ನೀಗಿಸಲು ಜೆಎಸ್‌ಎಸ್‌ ಆಸ್ಪತ್ರೆಯಲ್ಲಿ ಲಿಕ್ವಿಡ್ ಆಕ್ಸಿಜನ್ ಘಟಕ ಹೆಚ್ಚಿಸಲು ಗುಜರಾತ್‌ನ ಕಂಪನಿಯೊಂದಿಗೆ ಜೆ‌‌ಎಸ್‌ಎಸ್ ಒಡಂಬಡಿಕೆ ಮಾಡಿಕೊಂಡಿದೆ. ಘಟಕ ಗುಜರಾತ್ ನಿಂದ ಬರಲು ಉಂಟಾಗಿರುವ ಸಮಸ್ಯೆಯನ್ನು ನಿವಾರಿಸಲು ಕ್ರಮವಹಿಸಲಾಗುವುದು ಎಂದರು. 

ಕೋವಿಡ್ ವಿಚಾರದಲ್ಲಿ ಉದಾಸೀನ ಬೇಡ: ಕೋವಿಡ್-19 ವಿಚಾರದಲ್ಲಿ ಜನರು ಉದಾಸೀನ ಮಾಡಬಾರದು.ಸರ್ಕಾರದ ಸೂಚನೆಯನ್ನು ಪಾಲನೆ ಮಾಡಬೇಕು ಎಂದು ಸುತ್ತೂರು ಮಠದ ಜಗದ್ಗುರು ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿಯವರು ಇದೇ ಸಂದರ್ಭದಲ್ಲಿ ಮನವಿ ಮಾಡಿಕೊಂಡರು.

ನಿಯಂತ್ರಣ ಕ್ರಮಗಳನ್ನು ಮೀರಿ ಕೊರೊನಾ ವ್ಯಾಪಕವಾಗಿ ಹರಡುತ್ತಿದೆ. ಹೇಗೆ ನಿಯಂತ್ರಿಸುವುದು ಎಂಬುದು ದೇಶಕ್ಕೆ ದೊಡ್ಡ ಸವಾಲಾಗಿದೆ. ಜೆ.ಎಸ್.ಎಸ್. ಆಸ್ಪತ್ರೆಯಲ್ಲಿ ಜಿಲ್ಲಾಡಳಿತದ ಮಾರ್ಗದರ್ಶನದಂತೆ ಎಲ್ಲಾ ಸೌಲಭ್ಯ ಕೊಡಲಾಗಿದೆ. 400 ಕ್ಕೂ ಹೆಚ್ಚು ಹಾಸಿಗೆ ನೀಡಲಾಗಿದೆ. ಈ ಪೈಕಿ ಸುಮಾರು 100 ಆಕ್ಸಿಜನೇಟೆಡ್ ಹಾಸಿಗೆಗಳಿವೆ. ಒಂದೆರೆಡು ದಿನದಲ್ಲಿ ಇನ್ನೂ ನೂರು ಹೆಚ್ಚಿಸಲಾಗುವುದು, ಒಂದು ವಾರದಲ್ಲಿ ಆಕ್ಸಿಜನೇಟೆಡ್ ಹಾಸಿಗೆಗಳ ಸಂಖ್ಯೆಯನ್ನು 300ಕ್ಕೆ ಹೆಚ್ಚಿಸಲಾಗುವುದು ಎಂದರು.

ಲಿಕ್ವಿಡ್ ಆಕ್ಸಿಜನ್ ಘಟಕವನ್ನು ದ್ವಿಗುಣಗೊಳಿಸಲು ಏಜೆನ್ಸಿ ಸಂಪರ್ಕಿಸಿದ್ದೇವೆ. ಅದು ಸ್ಥಾಪನೆಯಾದರೆ ಕೇಂದ್ರದಿಂದ ನೇರವಾಗಿ ಆಕ್ಸಿಜನ್ ಪೂರೈಕೆ ಯಾಗುತ್ತದೆ ಎಂದರು. 

ಅಗತ್ಯವಸ್ತುಗಳ ಖರೀದಿಗೆ ಅವಕಾಶ ಮಾಡಿದ ಅವಧಿಯಲ್ಲಿ ಜನರು ಮುಗಿಬೀಳುತ್ತಿದ್ದಾರೆ ಎಂಬ ವರದಿ ಬರುತ್ತಿದೆ. ಹಾಗಾಗಬಾರದು, ಗ್ರಾಮೀಣ ಮತ್ತು ನಗರ ಭಾಗದ ಜನರು ಕಳಕಳಿಯಿಂದ ವರ್ತಿಸುವ ಮೂಲಕ ಈ ಸೋಂಕು ನಿವಾರಣೆಗೆ ಸಹಕರಿಸಬೇಕು ಎಂದು ಹೇಳಿದರು. 

ಸಭೆಯಲ್ಲಿ ಸಂಸದ ಪ್ರತಾಪ್ ಸಿಂಹ, ಶಾಸಕ ಎಲ್. ನಾಗೇಂದ್ರ, ಮುಡಾ ಅಧ್ಯಕ್ಷರಾದ ಹೆಚ್.ವಿ.ರಾಜೀವ್, ಅಪರ ಜಿಲ್ಲಾಧಿಕಾರಿ ಡಾ. ಬಿ.ಎಸ್.ಮಂಜುನಾಥಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com