ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಪ್ರಕರಣ ಇಳಿಮುಖವಾಗುತ್ತಿದೆ ಎಂದು ರಾಜ್ಯ ಸರ್ಕಾರ ಜನರಲ್ಲಿ ಸುಳ್ಳು ಆಶ್ವಾಸನೆಗಳನ್ನು ತುಂಬುತ್ತಿದೆ. ಕೊರೋನಾ ಪರೀಕ್ಷೆಗಳು ಇಳಿದ ಕಾರಣವೇ ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖವಾಗಿದೆ ಎಂದು ತೋರಿಸುತ್ತಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ರಾಜ್ಯದಲ್ಲಿ ಕೊರೋನಾ ಸಂಖ್ಯೆ ಇಳಿಮುಖವಾಗಿದೆ ಎಂದು ರಾಜ್ಯ ಸರ್ಕಾರ ಜನತೆಯ ಮನಸ್ಸಿನಲ್ಲಿ ಸುಳ್ಳು ಆಶ್ವಾಸನೆಗಳನ್ನು ತುಂಬುತ್ತಿದೆ. ವಾಸ್ತವವಾಗಿ ಪರೀಕ್ಷೆ ಪ್ರಮಾಣ ಕಡಿಮೆಯಾದುದರಿಂದ ಹೀಗೆ ಆಗಿದೆ. ರಾಷ್ಟ್ರೀಯ ಆರೋಗ್ಯ ಮಿಷನ್ ನಿರ್ದೇಶಕರ ಆದೇಶ ಸರ್ಕಾರದ ಸುಳ್ಳನ್ನು ಬಹಿರಂಗಗೊಳಿಸಿದೆ ಎಂದರು.
ಕಳೆದ ಏಪ್ರಿಲ್ 25ರ ಸರ್ಕಾರಿ ಆದೇಶವನ್ನು ಉಲ್ಲೇಖಿಸಿರುವ ಸಿದ್ದರಾಮಯ್ಯ ಅವರು, ಅತಿ ಗಮನ ಕೇಂದ್ರಿತ ಪರೀಕ್ಷೆಗಳನ್ನು ಹೆಚ್ಚಿಸಿ ಕೊರೋನಾ ಸೋಂಕು ಲಕ್ಷಣ ರಹಿತ ಜನರ ಮೇಲೆ ಪರೀಕ್ಷೆಯನ್ನು ಕಡಿಮೆ ಮಾಡುವಂತೆ ಸರ್ಕಾರ ಆದೇಶ ನೀಡಿದೆ. ರೋಗ ಲಕ್ಷಣ ಹೊಂದಿಲ್ಲದಿರುವವರ ಪರೀಕ್ಷೆ ಮಾಡಬೇಡಿ ಎಂದು ಸರ್ಕಾರ ಹೇಳಿದೆ. ಇದರಿಂದಾಗಿಯೇ ಈಗ ಕೊರೋನಾ ಸೋಂಕಿತರ ಸಂಖ್ಯೆ ಕಡಿಮೆಯಾಗಿ ತೋರಿಸುತ್ತಿದೆ. ಇಂತಹ ಆದೇಶದಿಂದ ಏನು ತೊಂದರೆಯಾಗುತ್ತದೆ ಎಂದು ಸರ್ಕಾರದ ಅರಿವಿದೆಯೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಕೊರೋನಾ ಸೋಂಕು ಲಕ್ಷಣ ರಹಿತ ವ್ಯಕ್ತಿಯನ್ನು ಪರೀಕ್ಷೆ ಮಾಡದಿದ್ದರೆ ಮತ್ತೊಬ್ಬರಿಗೆ ಸೋಂಕು ಹರಡಬಹುದು. ಇದರಿಂದ ಹಲವರ ಜೀವನ ಅಪಾಯಕ್ಕೆ ಹೋಗುತ್ತದೆ. ಲಾಕ್ ಡೌನ್ ಸಮಯದಲ್ಲಿಯೂ ಕೊರೋನಾ ಪ್ರಕರಣಗಳು ಹೆಚ್ಚಾಗಲು ಇದುವೇ ಕಾರಣ ಎಂದು ಅವರು ವಿಶ್ಲೇಷಿಸಿದ್ದಾರೆ.
ಮೇ ಮೊದಲ ವಾರದಲ್ಲಿ ರಾಜ್ಯದಲ್ಲಿ ಪ್ರತಿದಿನ ಸುಮಾರು 49 ಸಾವಿರ ಕೊರೋನಾ ಪ್ರಕರಣಗಳು ವರದಿಯಾಗುತ್ತಿದ್ದವು, ಲಾಕ್ ಡೌನ್ ಹೇರಿಕೆಯಾದ ಕೆಲವೇ ದಿನಗಳಲ್ಲಿ ಅದು ದಿನಂಪ್ರತಿ ಕೊರೋನಾ ಪ್ರಕರಣಗಳು 38 ಸಾವಿರಕ್ಕೆ ಇಳಿಕೆಯಾಗಿದೆ. ಕೆಲವೇ ದಿನಗಳಲ್ಲಿ ಇಷ್ಟು ಇಳಿಕೆಯಾಗಲು ಹೇಗೆ ಸಾಧ್ಯ, ಏಪ್ರಿಲ್ 1ರಂದು 1 ಲಕ್ಷದ 77 ಸಾವಿರದ 560 ಕೊರೋನಾ ಪರೀಕ್ಷೆ ಮಾಡಿದ್ದ ಸರ್ಕಾರ ಮೇ 17ಕ್ಕೆ 97 ಸಾವಿರಕ್ಕೆ ಹೇಗೆ ಇಳಿಕೆಯಾಯಿತು ಎಂದು ಕೂಡ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
Advertisement