ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಗಣನೀಯವಾಗಿ ತಗ್ಗಿರುವ ಹಿನ್ನೆಲೆಯಲ್ಲಿ ತಜ್ಞರ ಸಮಿತಿ ಸಲಹೆ ಅನುಸಾರ ಮತ್ತಷ್ಟು ಚಟುವಟಿಕೆಗಳಿಗೆ ಅನುಮತಿ ನೀಡಲು ರಾಜ್ಯ ಸರಕಾರ ನಿರ್ಧರಿಸಿದೆ.
ರಾಜ್ಯದಲ್ಲಿನ ಕೋವಿಡ್ ಪರಿಸ್ಥಿತಿ ಅವಲೋಕಿಸಿ, ಅಧ್ಯಯನ ಮಾಡಿ ಕಾಲಕಾಲಕ್ಕೆ ಸಲಹೆ ನೀಡಲು ಕೋವಿಡ್ - 19 ವೈದ್ಯಕೀಯ ತಾಂತ್ರಿಕ ಸಲಹಾ ಸಮಿತಿ ಈ ಹಿಂದೆಯೇ ರಚಿತವಾಗಿದೆ. ಈ ಸಮಿತಿ ಅಕ್ಟೋಬರ್ 17 ರಂದು ಸಭೆ ಸೇರಿ ಕೋವಿಡ್ ಅಂಕಿ ಅಂಶಗಳನ್ನು ಪರಿಶೀಲಿಸಿದೆ.
ಸೋಂಕು ಪ್ರಕರಣ ತಗ್ಗಿರುವ ಹಿನ್ನೆಲೆಯಲ್ಲಿ ಮತ್ತಷ್ಟೂ ಚಟುವಟಿಕೆಗಳಿಗೆ ಅನುಮತಿ ನೀಡಬಹುದು ಎಂದು ರಾಜ್ಯ ಸರಕಾರಕ್ಕೆ ಸಲಹೆ ನೀಡಿದೆ. ಈ ಹಿನ್ನೆಲೆಯಲ್ಲಿ ಹಾಲಿ ಇರುವ ನಿಬಂಧನೆ ಸಡಿಲಿಸಿ ಮತ್ತಷ್ಟು ಚಟುವಟಿಕೆಗಳಿಗೆ ಅನುಮತಿ ನೀಡಲು ನಿರ್ಧರಿಸಲಾಗಿದೆ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹೇಳಿದ್ದಾರೆ.
ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಅಂತರಾಷ್ಟ್ರೀಯ ಆಗಮನ ದ್ವಾರದಲ್ಲಿ ಹಾಲಿ ಇರುವ ಪರೀಕ್ಷೆಗಳನ್ನು ಸಡಿಸಲಾಗುತ್ತಿದೆ. ಆದರೆ ಜ್ವರ, ಕೆಮ್ಮು, ಕಫ, ಉಸಿರಾಡಲು ತೊಂದರೆ ಆಗುತ್ತಿರುವ ಲಕ್ಷಣಗಳು ಕಂಡು ಬಂದರೆ ಕಡ್ಡಾಯವಾಗಿ ಅಗತ್ಯವಿರುವ ಎಲ್ಲ ವೈದ್ಯಕೀಯ ಪರೀಕ್ಷೆ ನಡೆಸಲು ಸೂಚಿಸಲಾಗಿದೆ.
ಕೇಂದ್ರ ಸರ್ಕಾರ ಗುರುತಿಸಿರುವ ಕೋವಿಡ್- 19 ಪಟ್ಟಿಯಲ್ಲಿರುವ ರಾಷ್ಟ್ರಗಳಿಂದ ಬರುವ ಪ್ರಯಾಣಿಕರನ್ನು ಹೊರತುಪಡಿಸಿ ಉಳಿದವರಿಗೆ ಆರ್.ಟಿ. ಪಿಸಿಆರ್ ನಿಂದ ವಿನಾಯತಿ ನೀಡಲಾಗಿದೆ. ಕೇಂದ್ರ ಸೂಚಿಸಿರುವ ಪಟ್ಟಿಯಲ್ಲಿನ ರಾಷ್ಟ್ರಗಳಿಂದ ಬರುವ ಪ್ರಯಾಣಿಕರು ವಿಮಾನ ಏರುವ ಮುನ್ನ ಅವರ ಆರ್ ಟಿ ಪಿಸಿಆರ್ ಅನ್ನು ಸುವಿಧಾ ಪೋರ್ಟಲಿಗೆ ಅಪ್ ಲೋಡ್ ಮಾಡಿರಬೇಕು. ಇವರಿಗೆ ಕೋವಿಡ್ ಸೋಂಕಿನ ಲಕ್ಷಣಗಳು ಇಲ್ಲವೆಂದು ಸಂಬಂಧಿತ ವಿಮಾನಯಾನ ಸಿಬ್ಬಂದಿ ಖಾತರಿಪಡಿಸಿಕೊಳ್ಳಬೇಕು ಎಂದು ಹೇಳಲಾಗಿದೆ.
ಪ್ರಯಾಣಿಕರನ್ನು ಸ್ವಯಂಚಾಲಿತ ಥರ್ಮಲ್ ಪರೀಕ್ಷಾ ಕ್ಯಾಮೆರಾಗಳ ಮುಖಾಂತರ ತಪಾಸಣೆಗೊಳಪಡಿಸುವುದು ಅಗತ್ಯ ಎಂದು ಸೂಚಿಸಲಾಗಿದೆ. ಇಂಗ್ಲೆಡ್ ನಿಂದ ಬರುವ ಪ್ರಯಾಣಿಕರಿಗೆ ಕ್ವಾರಂಟೈನ್ ಅನ್ವಯಿಸುವ ಕುರಿತು ಕೇಂದ್ರ ಸರ್ಕಾರ ಸೂಚಿಸಿರುವ ಮಾರ್ಗಸೂಚಿ ಅನುಸರಣೆ ಮುಂದುವರಿಯುತ್ತದೆ. ಇದರ ಬಗ್ಗೆ ಹೆಚ್ಚಿನ ಸ್ಪಷ್ಟೀಕರಣವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡುತ್ತದೆ ಎಂದು ಹೇಳಲಾಗಿದೆ.
ಈಜುಕೊಳ ಪುನರಾರಂಭಕ್ಕೆ ಒಪ್ಪಿಗೆ
ಇದುವರೆಗೂ ಸ್ಥಗಿತವಾಗಿದ್ದ ರಾಜ್ಯದ ಸಾರ್ವಜನಿಕ ಈಜುಕೊಳಗಳನ್ನು ಪುನಃ ತೆರೆಯಲು ಅನುಮತಿ ನೀಡಲಾಗಿದೆ. ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಸೋಂಕು ನಿರೋಧಕ ದ್ರಾವಣ ಬಳಸಬೇಕು. ಈಜುಕೊಳದ ಸಾಮರ್ಥ್ಯಕ್ಕಿಂತ ಶೇಕಡ 50ರಷ್ಟು ಮಂದಿಗೆ ಮಾತ್ರ ಪ್ರವೇಶ ನೀಡಬೇಕು. ಪ್ರವೇಶದ್ವಾರದಲ್ಲಿಯೇ ಸಾಧನಗಳ ಮೂಲಕ ಕೋವಿಡ್ ಸೋಂಕಿನ ಲಕ್ಷಣಗಳು ಇಲ್ಲದಿರುವುದನ್ನು ಖಾತರಿ ಪಡಿಸಿಕೊಳ್ಳಬೇಕು ಎಂದು ಹೇಳಲಾಗಿದೆ.
Advertisement