ಹಾಲು-ತುಪ್ಪ ಕಾರ್ಯ ನೆರವೇರುವವರೆಗೂ ಅಭಿಮಾನಿಗಳಿಗೆ ಕಂಠೀರವ ಸ್ಟುಡಿಯೋ ಪ್ರವೇಶವಿಲ್ಲ: ಶಿವರಾಜ್ ಕುಮಾರ್
ಬೆಂಗಳೂರು: ಹಾಲು-ತುಪ್ಪ ಕಾರ್ಯ ನೆರವೇರುವವರೆಗೂ ಅಭಿಮಾನಿಗಳಿಗೆ ಕಂಠೀರವ ಸ್ಟುಡಿಯೋ ಪ್ರವೇಶ ನೀಡಲಾಗುವುದಿಲ್ಲ. ಕಾರ್ಯ ಮುಗಿದ ಕೂಡಲೇ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ ಅವಕಾಶ ನೀಡಲಾಗುತ್ತದೆ ಎಂದು ನಟ ಶಿವರಾಜ್ ಕುಮಾರ್ ಅವರು ಹೇಳಿದ್ದಾರೆ.
ಪುನೀತ್ ರಾಜ್ ಕುಮಾರ್ ಅವರ ಅಂತ್ಯಸಂಸ್ಕಾರದ ಕಾರ್ಯ ಪೂರ್ಣಗೊಳಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಅಪ್ಪು ಇನ್ನಿಲ್ಲ ಎಂದು ಹೇಳಲು ಕಷ್ಟವಾಗುತ್ತಿದೆ. ಸಣ್ಣ ವಯಸ್ಸಿನಲ್ಲೇ ಅಪ್ಪು ನಮ್ಮನ್ನು ಅಗಲಿದ್ದಾನೆ. ಅವರ ಕುಟುಂಬದೊಂದಿಗೆ ನಾವಿದ್ದೇವೆ. ಸದಾಕಾಲ ಇರುತ್ತೇವೆ. ಎಂದಿಗೂ ಕೈಬಿಡುವುದಿಲ್ಲ. ಅಪ್ಪು ಕೊನೆಯ ಆಸೆಗಳನ್ನು ಪೂರ್ಣಗೊಳಿಸುವ ಕೆಲಸ ಮಾಡುತ್ತೇವೆಂದು ಹೇಳಿದ್ದಾರೆ.
ಸರ್ಕಾರ ಉತ್ತಮವಾದ ಸಹಕಾರ ನೀಡಿದ್ದಕ್ಕೆ ಧನ್ಯವಾದಗಳು. ಅಚ್ಚುಕಟ್ಟಾದ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಹಾಲು-ತುಪ್ಪ ಕಾರ್ಯ ಮುಗಿಯುವವರೆಗೆ ಸಾರ್ವಜನಿಕರಿಗೆ ಕಂಠೀರವ ಸ್ಟುಡಿಯೋಗೆ ಪ್ರವೇಶವಿಲ್ಲ. ಆದಷ್ಟು ಬೇಗ ಸಾರ್ವಜನಿಕರಿಗೆ ಅವಕಾಶ ನೀಡುತ್ತೇವೆ. ಅಪ್ಪು ನೋಡುವುದಕ್ಕೆ ಅವಕಾಶ ಮಾಡಿಕೊಡುತ್ತೇವೆ. ಅಪ್ಪು ಎಲ್ಲರ ಮನದಲ್ಲಿಯೂ ಇರುತ್ತಾನೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಅಭಿಮಾನಿಗಳು ಆತ್ಮಹತ್ಯೆಗೆ ಶರಣಾಗದಂತೆ ಮನವಿ ಮಾಡಿಕೊಂಡಿದ್ದಾರೆ. ಯಾವುದೇ ಅಭಿಮಾನಿಗಳು ಆತ್ಮಹತ್ಯೆಗೆ ಶರಣಾಗಬಾರದು. ನಿಮಗೂ ಕುಟುಂಬ ಇದೆ. ನಿಮ್ಮ ಕುಟುಂಬವನ್ನು ನೋಡಿಕೊಳ್ಳಿ. ನಿಮ್ಮ ಅಗತ್ಯತೆ ನಿಮ್ಮ ಕುಟುಂಬಕ್ಕೆ ಬೇಕಿಡೆ. ನೋವು ನುಂದಿ ಜೀವನ ಸಾಗಿಸಬೇಕು. ನೋವು ನುಂಗಿಕೊಂಡು ನಾವು ಇದ್ದೇವೆ. ಹಾಗೆಯೇ ಅಭಿಮಾನಿಗಳೂ ಕೂಡ ಇರಬೇಕೆಂದಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ