ಬೆಂಗಳೂರು: ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಅಧಿಕಾರ ಹಿಡಿಯಲು ಜೆಡಿಎಸ್ ಜೊತೆ ಮೈತ್ರಿಗೆ ಕೈಚಾಚಿರುವ ಬಿಜೆಪಿ ಕಲಬುರಗಿಯ ಪಕ್ಷೇತರ ಕಾರ್ಪೊರೇಟರ್ ಒಬ್ಬರನ್ನು ಕಮಲದತ್ತ ಸೆಳೆದಿದೆ. ಕಲಬುರಗಿಯ 36ನೇ ವಾರ್ಡಿನಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಡಾ. ಶಂಭುಲಿಂಗ ಬಳಬಟ್ಟಿ ಶಾಸಕ ದತ್ತಾತ್ರೇಯ ಪಾಟೀಲ್ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಯಾದರು.
ಪಕ್ಷದ ಜಗನ್ನಾಥ ಭವನದಲ್ಲಿ ಪಾಲಿಕೆಗಳ ಚುನಾವಣೆಯ ಉಸ್ತುವಾರಿಯನ್ನು ಹೊತ್ತಿದ್ದ ಪಕ್ಷದ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ ಅವರು ಡಾ.ಶಂಭುಲಿಂಗ ಬಳಬಟ್ಟಿ ಅವರನ್ನು ಬಿಜೆಪಿ ಬರಮಾಡಿಕೊಂಡರು. ಶಂಭುಲಿಂಗ ಬಳಬಟ್ಟಿ ಬಿಜೆಪಿ ಸೇರ್ಪಡೆಯಾದ್ದರಿಂದ ಕಲಬುರಗಿಯಲ್ಲಿ ಬಿಜೆಪಿ ಸ್ಥಾನ 23 ರಿಂದ 24 ಕ್ಕೆ ಏರಿದೆ.
ಶಾಸಕ ದತ್ತಾತ್ರೇಯ ಪಾಟೀಲ್ ಮಾತನಾಡಿ, ಕಲಬುರಗಿ ಪಾಲಿಕೆಗೆ ಮೇಯರ್ ಬಿಜೆಪಿಯವರೇ ಆಗುತ್ತಾರೆ. ಈಗಾಗಲೇ ಜೆಡಿಎಸ್ ಜೊತೆ ನಮ್ಮ ನಾಯಕರು ಮಾತನಾಡಿದ್ದಾರೆ. ನಮ್ಮ ಮುಂದೆ ಜೆಡಿಎಸ್ ಯಾವುದೇ ಬೇಡಿಕೆ ಇಟ್ಟಿಲ್ಲ. ಮೇಯರ್ ಹುದ್ದೆ ಜೆಡಿಎಸ್ ಕೇಳಿಲ್ಲ. ನಮ್ಮ ನಾಯಕರು ಕುಮಾರಸ್ವಾಮಿ ಜೊತೆ ಮಾತುಕತೆ ಮಾಡಿದ್ದಾರೆ. ಕಲಬುರಗಿಯಲ್ಲಿ ಇಷ್ಟು ವರ್ಷ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಈಗ ಕಾಂಗ್ರೆಸ್ ಸನ್ನು ಬೇರು ಸಹಿತ ಕಿತ್ತು ಹಾಕ್ತೇವೆ. ಬಿಜೆಪಿ ಮೇಯರ್ ಆಗುವುದಂತೂ ನಿಶ್ವಿತ ಎಂದರು.
ಬಿಜೆಪಿ ಸೇರ್ಪಡೆ ಬಳಿಕ ಶಂಭುಲಿಂಗ ಪಾಟೀಲ್ ಮಾತನಾಡಿ, ನನಗೆ ಬೇರೆ ಪಕ್ಷಕ್ಕೆ ಸೇರಲು ಆಗುವುದಿಲ್ಲ. ಈ ಮೊದಲು ಬಿಜೆಪಿಯಲ್ಲೇ ಇದ್ದೇ. ಕಾರಣಾಂತರಗಳಿಂದ ಟಿಕೇಟ್ ತಪ್ಪಿತ್ತು. ಬಳಿಕ ಸ್ವತಂತ್ರವಾಗಿ ನಿಂತು ಗೆದ್ದಿದ್ದೆ. ಈಗ ಮತ್ತೆ ಬಿಜೆಪಿಗೆ ಬಂದಿದ್ದೇನೆ. ನನಗೆ ಬಿಜೆಪಿ ಅನಿವಾರ್ಯವೆಂದರು.
Advertisement