ಬೆಳೆ ಬೆಳೆಯುವ ಸಮಯದಲ್ಲಿಯೇ ಮುಖ್ಯ ರಸಗೊಬ್ಬರದ ಕೊರತೆ, ಸಂಕಷ್ಟದಲ್ಲಿ ರೈತರು

ರೈತರಿಗೆ ಸಾಕಷ್ಟು ರಸಗೊಬ್ಬರ ಪೂರೈಕೆಯಾಗಬೇಕಾದ ಸಮಯದಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಗೊಬ್ಬರಕ್ಕೆ ಕೊರತೆಯುಂಟಾಗಿದೆ ಎಂದು ವರದಿಯಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರೈತರಿಗೆ ಸಾಕಷ್ಟು ರಸಗೊಬ್ಬರ ಪೂರೈಕೆಯಾಗಬೇಕಾದ ಸಮಯದಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಗೊಬ್ಬರಕ್ಕೆ ಕೊರತೆಯುಂಟಾಗಿದೆ ಎಂದು ವರದಿಯಾಗಿದೆ. ಡಯಮೊನಿಯಮ್ ಫಾಸ್ಫೇಟ್(ಡಿಎಪಿ)ಗೆ ಮುಖ್ಯವಾಗಿ ಕೊರತೆಯುಂಟಾಗಿದ್ದು ಇದರಲ್ಲಿ ನೈಟ್ರೊಜನ್ ಮತ್ತು ಫಾಸ್ಪರಸ್ ಇರುವುದರಿಂದ ಬೆಳೆಗಳಿಗೆ ಅತ್ಯುತ್ತಮ ಮತ್ತು ಅಗತ್ಯವಾದ ಗೊಬ್ಬರವಾಗಿದೆ.

ಸಹಕಾರಿ ಸೊಸೈಟಿಗಳು ಮತ್ತು ಡೀಲರ್ ಗಳ ಬಳಿ ಡಿಎಪಿ ಕೊರತೆ ಬಹಳಷ್ಟಿದೆ ಎಂದು ರೈತರು ಮತ್ತು ಅಧಿಕಾರಿಗಳು ಹೇಳುತ್ತಾರೆ. ಆದರೆ ಕೃಷಿ ಸಚಿವ ಬಿ ಸಿ ಪಾಟೀಲ್ ಹೇಳುವುದೇ ಬೇರೆ. ರಾಜ್ಯದಲ್ಲಿ ರಸಗೊಬ್ಬರ ಕೊರತೆಯಿಲ್ಲ, ಸಾಗಾಣಿಕೆಯಿಂದಾಗಿ ಪೂರೈಕೆ ಒಂದೆರಡು ದಿನ ತಡವಾಗಬಹುದು. ಯಾರಾದರು ಬೇಕೆಂದೇ ಗೊಬ್ಬರಕ್ಕೆ ಕೊರತೆ ಸೃಷ್ಟಿಸಿದರೆ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎನ್ನುತ್ತಾರೆ.

ಈ ಬಗ್ಗೆ ಮಾತನಾಡಿರುವ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ರಸಗೊಬ್ಬರ ಕೊರತೆಯಿದೆ, ಸಿಗುತ್ತಿಲ್ಲ ಎಂದು ಹಲವು ಭಾಗಗಳಿಂದ ರೈತರು ಹತಾಶರಾಗಿ ನನಗೆ ಕರೆ ಮಾಡುತ್ತಿದ್ದಾರೆ. ಸರ್ಕಾರದ ಬಳಿ ಸಂಗ್ರಹ ಇರಬಹುದು. ಆದರೆ ರೈತರಿಗೆ ಬೇಕಾಗಿರುವುದು ಸಿಗುತ್ತಿಲ್ಲ. ಈ ವಿಷಯವನ್ನು ಸರ್ಕಾರದ ಗಮನಕ್ಕೆ ತರುತ್ತೇನೆ ಎಂದಿದ್ದಾರೆ.

ಕೊಡಗು ಜಿಲ್ಲೆಗೆ ಸುಮಾರು 4,500 ರಿಂದ 5,000 ಟನ್‌ಗಳಷ್ಟು ಡಿಎಪಿ, ಪೊಟ್ಯಾಷ್ ಮತ್ತು ಯೂರಿಯಾ ಅಗತ್ಯವಿದೆ. ಆದರೆ ಕಳೆದ ಎರಡು ತಿಂಗಳಿನಿಂದ ತೀವ್ರ ಕೊರತೆಯಿದೆ, ಇಲ್ಲಿಯವರೆಗೆ ಕೇವಲ 200 ಟನ್‌ಗಳಷ್ಟು ಮಾತ್ರ ಸರಬರಾಜು ಮಾಡಲಾಗಿದೆ ಎಂದು ಜಿಲ್ಲೆಯ ಪ್ರಮುಖ ರಸಗೊಬ್ಬರ ಡೀಲರ್ ಮತ್ತು ವಿತರಕ ಶ್ರೀನಿವಾಸ್ ಎಸ್‌ಜಿ ಹೇಳುತ್ತಾರೆ. ಕೊರತೆಯನ್ನು ನೀಗಿಸಲು, ಅವರು ರೈತರಿಗೆ ಇತರ ರಸಗೊಬ್ಬರಗಳನ್ನು ಪೂರೈಸಿದ್ದಾರೆ ಎಂದು ತಿಳಿಸಿದರು.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಕೆಲವು ಭಾಗಗಳಲ್ಲಿ ರೈತರಿಗೆ ಭತ್ತ ಮತ್ತು ಕಬ್ಬು ಬೆಳೆಗಳಿಗೆ ಸಮರ್ಪಕ ಪ್ರಮಾಣದಲ್ಲಿ ಡಿಎಪಿ ಮತ್ತು ಯೂರಿಯಾ ಸಿಗುತ್ತಿಲ್ಲ. "ಕಳೆದ ಕೆಲವು ವಾರಗಳಿಂದ ಕೊರತೆ ಇದೆ" ಎಂದು ಶ್ರೀರಂಗಪಟ್ಟಣ ಸಮೀಪದ ರಾಂಪುರದ ರೈತ ಸೋಮಶೇಖರ ರಾ ಹೇಳುತ್ತಾರೆ.

ಬೆಳಗಾವಿಯಲ್ಲಿ ರೈತರಿಗೆ 6 ತಿಂಗಳಿಂದ ರಸಗೊಬ್ಬರ ಕೊರತೆ: ಬೆಳಗಾವಿ ಜಿಲ್ಲೆಯಲ್ಲಿ ಕಳೆದ ಆರು ತಿಂಗಳಿನಿಂದ ರೈತರು ರಸಗೊಬ್ಬರ ಕೊರತೆಯನ್ನು ಎದುರಿಸುತ್ತಿದ್ದು, ಖಾಸಗಿ ಕಂಪನಿಗಳಿಂದಲೂ ಸರಬರಾಜು ಕಡಿಮೆಯಾಗಿದೆ. ಸಿದ್ದಗೌಡ ಮೋದಗಿ ಎಂಬ ರೈತ, ಅನೇಕ ಪ್ರದೇಶಗಳಲ್ಲಿ ಮಾರಾಟದ ಹಂತದಲ್ಲಿ ಅಧಿಕಾರಿಗಳು ಲಭ್ಯವಿರುವ ದಾಸ್ತಾನುಗಳ ಬಗ್ಗೆ ಸರಿಯಾದ ಮಾಹಿತಿಯನ್ನು ನೀಡುವುದಿಲ್ಲ. ಪ್ರಮಾಣದ ರಸಗೊಬ್ಬರಗಳನ್ನು ಪಡೆಯಲು ರೈತರು ಕಷ್ಟಪಡುತ್ತಾರೆ ಎಂದು ಹೇಳಿದರು.

ಅವರು ಪರ್ಯಾಯ ಮೂಲಗಳಿಂದ ರಸಗೊಬ್ಬರಗಳನ್ನು ಪಡೆಯಲು ಪ್ರಯತ್ನಿಸುತ್ತಿದ್ದಾರೆ, ಆದರೆ ಹೆಚ್ಚಿನ ಬೆಲೆಗಳನ್ನು ಪಾವತಿಸಬೇಕಾಗುತ್ತದೆ. ಕರ್ನಾಟಕ ಪ್ರಾಂತ ರೈತ ಸಂಘದ ಕಲಬುರ್ಗಿ ಜಿಲ್ಲಾ ಘಟಕದ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, ಹಲವಾರು ತಾಲೂಕುಗಳಲ್ಲಿ ರೈತರು ಡಿಎಪಿ ಕೊರತೆಯನ್ನು ಎದುರಿಸುತ್ತಿದ್ದಾರೆ.ರಬಿ ಋತು ಕೆಲವೇ ದಿನಗಳಲ್ಲಿ ಆರಂಭವಾಗಲಿದ್ದು, ರೈತರು ಹೆಸರು ಕಾಳು, ಜೋಳ, ಸೂರ್ಯಕಾಂತಿ ಮತ್ತು ನೆಲಗಡಲೆಯನ್ನು ಬೆಳೆಯುತ್ತಾರೆ, ರಸಗೊಬ್ಬರ ಬೇಕಾಗುತ್ತದೆ ಎಂದು ಹೇಳುತ್ತಾರೆ.

ಆದರೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರತೇಂದ್ರನಾಥ ಸುಗೂರ್ ಮಾತನಾಡಿ, ಜಿಲ್ಲೆಯಲ್ಲಿ ಈಗ ಸಾಕಷ್ಟು ಡಿಎಪಿ ಮತ್ತು ಯೂರಿಯಾ ದಾಸ್ತಾನು ಇದೆ. ಆದಾಗ್ಯೂ, ಖಾರಿಫ್ ಋತುವಿನಲ್ಲಿ ಜೂನ್-ಜುಲೈನಲ್ಲಿ ಕೊರತೆಯಿತ್ತು ಎಂದು ಒಪ್ಪಿಕೊಳ್ಳುತ್ತಾರೆ. 
ಉಡುಪಿಯೂ ಕೆಲವು ವಾರಗಳ ಹಿಂದೆ ಕೊರತೆಯನ್ನು ಎದುರಿಸುತ್ತಿತ್ತು, ಆದರೆ ಈಗ ಸಮಸ್ಯೆಯನ್ನು ಪರಿಹರಿಸಲಾಗಿದೆ. ಹಾಸನದಲ್ಲಿ, ಪೊಟ್ಯಾಷ್‌ನ ಸ್ವಲ್ಪ ಕೊರತೆಯನ್ನು ಹೊರತುಪಡಿಸಿ, ಯಾವುದೇ ಪ್ರಮುಖ ಸಮಸ್ಯೆ ಇಲ್ಲ ಮತ್ತು ಇಲಾಖೆಯು ವ್ಯವಸ್ಥೆಯನ್ನು ಸುಗಮಗೊಳಿಸಿದೆ. ಕೃಷಿ ಇಲಾಖೆಯು ಸರಾಸರಿ 1.41 ಲಕ್ಷ ಟನ್‌ಗಳ ಬೇಡಿಕೆಯಲ್ಲಿ 1.54 ಲಕ್ಷ ಟನ್ ರಸಗೊಬ್ಬರಗಳನ್ನು ವಿತರಿಸಿದೆ.

ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯಲ್ಲಿ ರೈತರು ಡಿಎಪಿ ಮತ್ತು ಯೂರಿಯಾವನ್ನು ತೊಗರಿಬೇಳೆ, ಕಡಲೆ, ಗೋಧಿ, ಜೋಳ ಮತ್ತು ಕಬ್ಬು ಬೆಳೆಗಳಿಗೆ ಬಳಸುತ್ತಾರೆ. ಅಧಿಕಾರಿಗಳು ಕೂಡ ಕೊರತೆ ಇದೆ ಎಂದು ಒಪ್ಪಿಕೊಂಡಿದ್ದಾರೆ. ಬಾಗಲಕೋಟೆಯ ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಚೇತನಾ ಪಾಟೀಲ್, ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ ಜೊತೆ ಮಾತನಾಡಿ, "ಪ್ರಸ್ತುತ ನಮ್ಮಲ್ಲಿ ಡಿಎಪಿ ಕೊರತೆಯಿದೆ, ಸಾಕಷ್ಟು ಯೂರಿಯಾ ದಾಸ್ತಾನು ಇದೆ ಎನ್ನುತ್ತಾರೆ.

ತಾಂತ್ರಿಕ ಸಮಸ್ಯೆಗಳಿಂದಾಗಿ ವಿತರಕರು ಮಾರಾಟದ ಸ್ಥಳದಲ್ಲಿ ಬೇಡಿಕೆಗಳನ್ನು ಪೂರೈಸಲು ವಿಫಲರಾಗುತ್ತಿರುವುದರಿಂದ ನಮಗೆ ಸಂಗ್ರಹ ಪಡೆಯಲು ಸಾಧ್ಯವಾಗಲಿಲ್ಲ. ಒಂದು ಅಥವಾ ಎರಡು ವಾರಗಳಲ್ಲಿ ಸಾಕಷ್ಟು ರಸಗೊಬ್ಬರ ಸಂಗ್ರಹ ಬರುವ ಸಾಧ್ಯತೆಯಿದೆ. ರಸಗೊಬ್ಬರಗಳನ್ನು ಮುಖ್ಯವಾಗಿ ರಬಿ ಋತುವಿನಲ್ಲಿ ಬಳಸಲಾಗುತ್ತದೆ. ವಿಜಯಪುರ ಜಿಲ್ಲೆಯು ಇನ್ನೂ ಡಿಎಪಿಯ ಹೊಸ ದಾಸ್ತಾನುಗಾಗಿ ಕಾಯುತ್ತಿದೆ, ಅಕ್ಟೋಬರ್ ಮೊದಲ ವಾರದಿಂದ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತೊಗರಿಬೇಳೆ ಬಿತ್ತನೆಯಾದಾಗ ಬೇಡಿಕೆ ಹೆಚ್ಚಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com