ಕೋಲಾರ ಬಳಿ ಮೊಬೈಲ್ ಸಾಗಿಸುತ್ತಿದ್ದ ಲಾರಿ ದರೋಡೆ; 6 ಕೋಟಿ ಮೌಲ್ಯದ ಫೋನ್​ಗಳ ಕಳ್ಳತನ

ತಮಿಳುನಾಡಿನಿಂದ ಗುರುವಾರ ರಾತ್ರಿ ಜಿಲ್ಲೆಯ ಮಾರ್ಗವಾಗಿ ಬೆಂಗಳೂರಿಗೆ ಮೊಬೈಲ್‌ ಸಾಗಿಸುತ್ತಿದ್ದ ಕಂಟೈನರ್‌ ಅಡ್ಡಗಟ್ಟಿದ ದರೋಡೆಕೋರರು  6.39 ಕೋಟಿ ರು. ಮೌಲ್ಯದ ಮೊಬೈಲ್‌ಗಳನ್ನು ದೋಚಿ ಪರಾರಿಯಾಗಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೋಲಾರ: ತಮಿಳುನಾಡಿನಿಂದ ಗುರುವಾರ ರಾತ್ರಿ ಜಿಲ್ಲೆಯ ಮಾರ್ಗವಾಗಿ ಬೆಂಗಳೂರಿಗೆ ಮೊಬೈಲ್‌ ಸಾಗಿಸುತ್ತಿದ್ದ ಕಂಟೈನರ್‌ ಅಡ್ಡಗಟ್ಟಿದ ದರೋಡೆಕೋರರು  6.39 ಕೋಟಿ ರು. ಮೌಲ್ಯದ ಮೊಬೈಲ್‌ಗಳನ್ನು ದೋಚಿ ಪರಾರಿಯಾಗಿದ್ದಾರೆ. 

ಖಾಲಿ ಕಂಟೈನರ್ ಅನ್ನು ಕೋಲಾರ ತಾಲ್ಲೂಕಿನ ನೆರ್ನಹಳ್ಳಿ ಬಳಿ ನಿಲ್ಲಿಸಿ ಮೊಬೈಲ್‌  ಸರಕಿನೊಂದಿಗೆ ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ನಿರ್ಜನ ಪ್ರದೇಶದಲ್ಲಿ ಕೈ ಕಾಲು ಕಟ್ಟಿದ ಸ್ಥಿತಿಯಲ್ಲಿದ್ದ ಸುರೇಶ್‌ರನ್ನು ನೋಡಿದ ದಾರಿಹೋಕರು ಬಳಿ ಹೋಗಿ ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಸುರೇಶ್‌ ಮುಳಬಾಗಿಲು ಗ್ರಾಮಾಂತರ ಠಾಣೆಗೆ ತೆರಳಿ ದರೋಡೆ ಪ್ರಕರಣ ದಾಖಲಿಸಿದ್ದಾರೆ. ಚೆನ್ನೈನಲ್ಲಿರುವ ಎಂ.ಐ ಕಂಪನಿಯ ಮೊಬೈಲ್‌ ಉತ್ಪಾದನಾ ಘಟಕದಿಂದ ಹೊಸಕೋಟೆ ಬಳಿಯ ಕಂಪನಿ ಗೋದಾಮಿಗೆ ಮೊಬೈಲ್‌ ಸಾಗಿಸಲಾಗುತ್ತಿತ್ತು.

‘ಇದೊಂದು ಪೂರ್ವಯೋಜಿತ ಕೃತ್ಯವೆಂದು ತನಿಖೆಯಿಂದ ಗೊತ್ತಾಗಿದೆ. ಚಾಲಕ ಸುರೇಶ್‌ ಮೂತ್ರ ವಿಸರ್ಜನೆಗಾಗಿ ಜಿಲ್ಲೆಯ ನಂಗಲಿ ಟೋಲ್‌ ಬಳಿ ರಾತ್ರಿ ವಾಹನ ನಿಲ್ಲಿಸಿದ್ದರು. ದರೋಡೆಕೋರರು ಅಲ್ಲಿಂದ ಹಿಂಬಾಲಿಸಿ ಬಂದು ಕೃತ್ಯ ಎಸಗಿರುವ ಶಂಕೆಯಿದೆ’ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಆರೋಪಿಗಳ ಪತ್ತೆಗೆ ಮುಳಬಾಗಿಲು ಡಿವೈಎಸ್ಪಿ ನೇತೃತ್ವದಲ್ಲಿ 2 ವಿಶೇಷ ತಂಡ ರಚಿಸಲಾಗಿದೆ. ಆರೋಪಿಗಳ ಬಗ್ಗೆ ಮಹತ್ವದ ಸುಳಿವು ಸಿಕ್ಕಿದ್ದು, ಸದ್ಯದಲ್ಲೇ ಬಂಧಿಸುತ್ತೇವೆ ಎಂದು ಎಸ್ ಪಿ ಸುರೇಶ್ ಬಾಬು ತಿಳಿಸಿದ್ದಾರೆ.

ಚಾಲಕ ಸುರೇಶ್ ರಾತ್ರಿಯಿಡಿ ಕೈಕಾಲು ಕಟ್ಟಿದ ಸ್ಥಿತಿಯಲ್ಲಿಯೇ ಇದ್ದ. ಉರುಳಾಡಿಕೊಂಡು  ಹೇಗೋ ಹೆದ್ದಾರಿ ತಲುಪಿದ್ದ. ದಾರಿ ಹೋಕರು ಆತನನ್ನು ಗಮನಿಸಿ ಆತನ ಕೈ ಕಾಲು ಕಟ್ಟಿದ್ದ ಹಗ್ಗ ಬಿಚ್ಚಿದ್ದಾರೆ. ಇನ್ನೂ ಲಾರಿಯಲ್ಲಿದ್ದ ಎಲ್ಲಾ ಮೊಬೈಲ್ ಫೋನ್ ಗಳನ್ನು ಮತ್ತೊಂದು ವಾಹನಕ್ಕೆ ತುಂಬಿಸಿಕೊಂಡು ಹೋಗಿದ್ದಾರೆಂದು ಎಸ್ ಪಿ ಸುರೇಶ್ ಬಾಬು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com