ಬೆಂಗಳೂರು: ಅಪಾರ್ಟ್ ಮೆಂಟ್ ಗಳಲ್ಲಿ ವಿದ್ಯುತ್ ಹಾಗೂ ನೀರು ಮುಂತಾದ ಪೂರೈಕೆಗಳಿಗೆ ಅಗತ್ಯ ಅನುಮತಿಗಳನ್ನು ಪಡೆಯುವುದಕ್ಕೆ ಈಗ ಅಧಿಭೋಗ ಪ್ರಮಾಣ ಪತ್ರ (ಒ.ಸಿ)ಯ ಕಡ್ಡಾಯ ನಿಯಮವನ್ನು ಮರುಪರಿಶೀಲಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ಕಟ್ಟಡ ಯೋಜನೆಯ ಭಾಗವಾಗಿ ಒ.ಸಿಯನ್ನು ಕಡ್ಡಾಯಗೊಳಿಸಲಾಗಿದ್ದು, ಇದನ್ನು ಮುಂದುವರೆಸಬೇಕೆ ಅಥವಾ ಬೇಡವೇ ಎಂಬ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ- ಇತರ ಸಚಿವರು ಹಿರಿಯ ಅಧಿಕಾರಿಗಳ ನಡುವೆ ಆ.09 ರಂದು ಸಂಜೆ ನಡೆದ ಮಾತುಕತೆಯಲ್ಲಿ ಚರ್ಚಿಸಲಾಗಿದೆ.
ನಗರಾಭಿವೃದ್ಧಿ ಯೋಜನೆಯ ಬಗ್ಗೆ ಚರ್ಚೆ ನಡೆಸುತ್ತಿದ್ದಾಗ, ಸಚಿವರೊಬ್ಬರು ಅಪಾರ್ಟ್ ಮೆಂಟ್ ಗಳಲ್ಲಿ ಅಗತ್ಯ ಪೂರೈಕೆಗಳಿಗಾಗಿ ಅನುಮತಿ ಪಡೆಯುವುದಕ್ಕೆ ಅಧಿಭೋಗ ಪ್ರಮಾಣಪತ್ರ ಕಡ್ಡಾಯಗೊಳಿಸಲಾಗಿರುವುದರ ವಿಷಯವನ್ನು ಪ್ರಸ್ತಾಪಿಸಿದರು. ಹಲವು ಅಪಾರ್ಟ್ಮೆಂಟ್ ಗಳಿಗೆ ಹಾಗೂ ವಾಣಿಜ್ಯ ಸಂಕೀರ್ಣಗಳಿಗೆ ಒ.ಸಿ ಇಲ್ಲ. ಆದರೂ ವಿದ್ಯುತ್ ಸಂಪರ್ಕವನ್ನು ತಾತ್ಕಾಲಿಕವಾಗಿ ನೀಡಲಾಗಿದೆ.
ಈ ಹಿನ್ನೆಲೆಯಲ್ಲಿ ಅಂತಹ ಪ್ರದೇಶಗಳಿಗೆ ವಿದ್ಯುತ್ ಸಂಪರ್ಕ ರದ್ದುಗೊಳಿಸಬೇಕೇ ಅಥವಾ ಅದನ್ನು ಕಾನೂನುಬದ್ಧಗೊಳಿಸಬೇಕೇ? ಎಂದು ಸಚಿವರು ಪ್ರಶ್ನಿಸಿದ್ದು ಅಧಿಭೋಗ ಪ್ರಮಾಣಪತ್ರ ಕಡ್ಡಾಯ ನಿಯಮವನ್ನು ಮರುಪರಿಶೀಲನೆ ಮಾಡಲು ನಿರ್ಧರಿಸಲಾಗಿದೆ. ಅಧಿಕೃತವಾಗಿ ಯಾವುದೂ ತೀರ್ಮಾನವಾಗಿಲ್ಲವಾದರೂ ಅಧಿಕಾರಿಗಳಿಗೆ ಈ ನಿಟ್ಟಿನಲ್ಲಿ ಗಮನ ಹರಿಸುವಂತೆ ಸೂಚಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಪ್ರಸ್ತುತ ಕರ್ನಾಟಕ ಟೌನ್ ಹಾಗೂ ದೇಶ ಯೋಜನೆ ಕಾಯ್ದೆ ಹಾಗೂ ಬಿಬಿಎಂಪಿ ಕಾಯ್ದೆಯಡಿ, ಒಸಿಯನ್ನು ಕಡ್ಡಾಯಗೊಳಿಸಲಾಗಿದ್ದು ನಿಯಮ ಉಲ್ಲಂಘನೆಯಾಗಿದೆಯೇ? ಎಂಬುದನ್ನು ವಿವರವಾಗಿ ಪರಿಶೀಲಿಸಲಾಗುತ್ತದೆ.
ಇದೇ ಸಭೆಯಲ್ಲಿ 860 ಕಿ.ಮೀ ಆರ್ಟಿರಿಯಲ್-ಸಬ್ ಆರ್ಟಿರಿಯಲ್ ರಸ್ತೆಗಳ ನಿರ್ವಹಣೆಗೆ ಪ್ರತ್ಯೇಕ ಪ್ರಾಧಿಕಾರ ರಚನೆ ಬಗ್ಗೆಯೂ ಚರ್ಚೆ ನಡೆಸಲಾಗಿದೆ.
Advertisement