ಮಂಗಳೂರು: ನಗರದ ಹೊರವಲಯದ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಲ್ಯ ಎಂಬಲ್ಲಿ ಜಮೀನಿಗೆ ನುಗ್ಗಿದ ಎಮ್ಮೆಯನ್ನು ಬರ್ಬರವಾಗಿ ಕೊಂದು ಹಾಕಿದ ಘಟನೆಗೆ ಸಂಬಂಧಿಸಿದಂತೆ ಒಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಿನ್ನೆ ಭಾನುವಾರ ಸಾಯಂಕಾಲ ಹೊಲಕ್ಕೆ ನುಗ್ಗಿದ್ದ ಎಮ್ಮೆಯನ್ನು ಹಿಡಿದು ಕೊಂದು ಹಾಕಲಾಗಿತ್ತು. ಎಮ್ಮೆಯ ಗಂಟಲನ್ನು ಆರೋಪಿಗಳು ಸೀಳಿ ಹಾಕಿದ್ದರು. ಸತ್ತು ಹೋದ ಎಮ್ಮೆಯನ್ನು ಕಂಡು ಸ್ಥಳೀಯರು ಹಿಂದೂಪರ ಸಂಘಟನೆಗಳಿಗೆ ಮಾಹಿತಿ ನೀಡಿದ್ದರು.
ಹಿಂದೂಪರ ಕಾರ್ಯಕರ್ತರು ಕೂಡಲೇ ಸ್ಥಳಕ್ಕೆ ಬಂದು ಜಮೀನಿನ ಮಾಲಿಕ ಜಯರಾಮ್ ಶೆಟ್ಟಿ ಇತರರ ಸಹಾಯದಿಂದ ಎಮ್ಮೆಯನ್ನು ಕೊಂದುಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಸ್ಥಳದಲ್ಲಿ ದ್ವಿಚಕ್ರ ವಾಹನವೊಂದನ್ನು ಬಿಟ್ಟು ಪರಾರಿಯಾಗಿದ್ದು ಎಮ್ಮೆಯನ್ನು ಕೊಂದು ಆರೋಪಿಗಳು ಪರಾರಿಯಾಗಿದ್ದಾರೆ ಎಂದು ಕಾರ್ಯಕರ್ತರು ಆರೋಪಿಸಿದ್ದಾರೆ.
ಪೊಲೀಸರಿಗೆ ವಿಷಯ ತಲುಪಿದಾಗ ಸ್ಥಳಕ್ಕೆ ಉಳ್ಳಾಲ ಇನ್ಸ್ ಪೆಕ್ಟರ್ ಸಂದೀಪ್ ಭೇಟಿ ನೀಡಿದರು. ಜಯರಾಮ್ ಶೆಟ್ಟಿಯವರನ್ನು ವಿಚಾರಣೆ ನಡೆಸಿ ತಮ್ಮ ಕಸ್ಟಡಿಗೆ ತೆಗೆದುಕೊಂಡು ಹೋದರು. ಉಳ್ಳಾಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಎಮ್ಮೆಯ ಮರಣೋತ್ತರ ಪರೀಕ್ಷೆ ಮುಗಿದ ಮೇಲೆ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.
Advertisement