ಗ್ರಾಮೀಣ ಜನರ ಆರೋಗ್ಯ ಯೋಜನೆ ಅಭಿಯಾನಕ್ಕೆ ಸಚಿವ ಈಶ್ವರಪ್ಪ ಚಾಲನೆ

ಆರೋಗ್ಯವೇ ಅಮೃತ ಎನ್ನುವ ಮಾದರಿಯಲ್ಲಿ ಸರಕಾರದ ನೂತನ ಆರೋಗ್ಯ ಅಮೃತ ಅಭಿಯಾನವನ್ನು ಅನುಷ್ಠಾನಗೊಳಿಸಬೇಕಿದೆ.
ಆರೋಗ್ಯ ಕಿಟ್ ವಿತರಿಸಿದ ಈಶ್ವರಪ್ಪ
ಆರೋಗ್ಯ ಕಿಟ್ ವಿತರಿಸಿದ ಈಶ್ವರಪ್ಪ

ಬೆಳಗಾವಿ: ಪ್ರಪಂಚವನ್ನೆ ಗಾಬರಿಗೊಳಿಸಿದ ಕೋವಿಡನ್ನು ಎದುರಿಸುವಲ್ಲಿ ಭಾರತ ಮೊದಲ ಸ್ಥಾನದಲ್ಲಿದ್ದರೆ ದೇಶದಲ್ಲಿ ಕರ್ನಾಟಕ ಮೊದಲ ಸ್ಥಾನ ಪಡೆದುಕೊಂಡಿರುವುದು ನಮ್ಮೆಲ್ಲರ ಹೆಮ್ಮೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು. 

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಸೋಮವಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತ್ ರಾಜ್ ಇಲಾಖೆ, ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ರಾಜ್ಯದ ಎಲ್ಲ ಜಿಲ್ಲಾ ಪಂಚಾಯಿತಿಗಳ‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ತರಬೇತಿ ಕಾರ್ಯಾಗರ ಮತ್ತು ಗ್ರಾಮ ಪಂಚಾಯಿತ್ 'ಆರೋಗ್ಯ ಅಮೃತ ಅಭಿಯಾನ' ಕ್ಕೆ ಚಾಲನೆ ನೀಡಿ ಅವರು  ಮಾತನಾಡಿದರು.

ಆರೋಗ್ಯವೇ ಅಮೃತ ಎನ್ನುವ ಮಾದರಿಯಲ್ಲಿ ಸರಕಾರದ ನೂತನ ಆರೋಗ್ಯ ಅಮೃತ ಅಭಿಯಾನವನ್ನು ಅನುಷ್ಠಾನಗೊಳಿಸಬೇಕಿದೆ. ತಲಾ 25 ಲಕ್ಷ ರೂ.ಅನುದಾನದಲ್ಲಿ ರಾಜ್ಯದ 750 ಗ್ರಾಪಂ ಗಳನ್ನು ಅಮೃತ ಗ್ರಾಮಗಳನ್ನಾಗಿಸೋಣ. ಆರಂಭದಲ್ಲಿ ಲಸಿಕೆ ಕುರಿತು ಗೊಂದಲ ಮೂಡಿದ್ದರಿಂದ ಅನಾನುಕೂಲ ಎದುರಾಗಿದ್ದರೂ ಇಂದು ಜನರು ಲಸಿಕೆಗಾಗಿ ಕ್ಯೂ ನಿಲ್ಲುತ್ತಿದ್ದಾರೆ. ಇದರ ಎಲ್ಲ ಶ್ರೇಯಸ್ಸು ಅಧಿಕಾರಿಗಳಿಗೆ ಸಲ್ಲುತ್ತದೆ ಎಂದರು.

ಕರ್ನಾಟಕ ಆರೋಗ್ಯ ಪ್ರಚಾರ ಟ್ರಸ್ಟ್ (ಕೆಎಚ್‌ಪಿಟಿ), ಆರ್‌ಡಿಪಿಆರ್ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳ ಸಹಭಾಗಿತ್ವದಲ್ಲಿ ಇಂತಹ ಯೋಜನೆಯನ್ನು ದೇಶದಲ್ಲಿಯೇ ಮೊದಲ ಬಾರಿಗೆ ಜಾರಿಗೆ ತರಲಾಗುತ್ತಿದೆ ಎಂದು ಅವರು ತಿಳಿಸಿದರು. ಬಾಗಲಕೋಟೆ, ಬಳ್ಳಾರಿ, ವಿಜಯನಗರ, ಬೆಳಗಾವಿ, ಗದಗ, ಚಾಮರಾಜನಗರ, ದಾವಣಗೆರೆ, ಕಲಬುರಗಿ, ಕೊಪ್ಪಳ, ಮಂಡ್ಯ, ಮೈಸೂರು, ರಾಯಚೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳ 14 ಜಿಲ್ಲೆಗಳ 110 ತಾಲ್ಲೂಕುಗಳಲ್ಲಿ 2,816 ಗ್ರಾಮ ಪಂಚಾಯಿತಿಗಳಲ್ಲಿ ಈ ಕಾರ್ಯಕ್ರಮವನ್ನು ಜಾರಿಗೊಳಿಸಲಾಗುವುದು. 25,000 ಮೌಲ್ಯದ ಆರೋಗ್ಯ ಕಿಟ್ ಅನ್ನು ಪ್ರತಿ ಗ್ರಾಮ ಪಂಚಾಯಿತಿಗೆ ನೀಡಲಾಗುವುದು ಎಂದು ಅವರು ಹೇಳಿದರು.

ಬೆಂಗಳೂರು, ಮೈಸೂರು ಮತ್ತು ಧಾರವಾಡ ಜಿಲ್ಲೆಗಳಲ್ಲಿ ಸಂಕಷ್ಟದಲ್ಲಿರುವ ಮಹಿಳೆಯರಿಗಾಗಿ ಸರ್ಕಾರ ‘ಸಹಿತ’ ಸಮಾಲೋಚನಾ ಕೇಂದ್ರಗಳನ್ನು ಸ್ಥಾಪಿಸಿದೆ. ಕೋವಿಡ್-19  ನಿಂದ ಸದಸ್ಯರನ್ನು ಕಳೆದುಕೊಂಡ ಕುಟುಂಬಗಳಿಗೂ ಈ ಸಹಾಯವಾಣಿ ಸಹಾಯ ಮಾಡುತ್ತದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com