ಎಂಎಲ್ ಎ ವಿಶ್ವನಾಥ್ ಹತ್ಯೆಗೆ ನಡೆದಿತ್ತಾ ತಂತ್ರ? ಶಾಸಕರೇ ಮಾಡಿಸಿದ್ರಾ ವಿಡಿಯೋ? ತನಿಖೆ ಸಿಸಿಬಿ ಹೆಗಲಿಗೆ
ಯಲಹಂಕ ಶಾಸಕ ವಿಶ್ವನಾಥ್ ಅವರ ಹತ್ಯೆಗೆ ಯೋಜನೆ ರೂಪಿಸಲಾಗಿತ್ತು ಎನ್ನುವ ಸುದ್ದಿ ಹೊರಬಿದ್ದಿದೆ. ಈ ಕುರಿತಾದ ವಿಡಿಯೋವೊಂದು ಹೊರಬಂದಿದ್ದು, ಈ ಬಗ್ಗೆ ಸಿಸಿಬಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ
Published: 01st December 2021 01:37 PM | Last Updated: 01st December 2021 01:53 PM | A+A A-

ವಿಶ್ವನಾಥ್
ಬೆಂಗಳೂರು: ಯಲಹಂಕ ಶಾಸಕ ವಿಶ್ವನಾಥ್ ಅವರ ಹತ್ಯೆಗೆ ಯೋಜನೆ ರೂಪಿಸಲಾಗಿತ್ತು ಎನ್ನುವ ಸುದ್ದಿ ಹೊರಬಿದ್ದಿದೆ. ಈ ಕುರಿತಾದ ವಿಡಿಯೋವೊಂದು ಹೊರಬಂದಿದ್ದು, ಈ ಬಗ್ಗೆ ಸಿಸಿಬಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
ಯಲಹಂಕ ಶಾಸಕ ವಿಶ್ವಾನಾಥ್ ಕೊಲೆ ಮಾಡುವ ಬಗ್ಗೆ ಕಾಂಗ್ರೆಸ್ ಮುಖಂಡ ಎಂ ಎನ್ ಗೋಪಾಲಕೃಷ್ಣ ಮಾತುಕತೆ ನಡೆಸಿದ್ದರು ಎನ್ನುವ ಆರೋಪ ಕೇಳಿಬಂದಿದೆ. ಈ ಬಗ್ಗೆ ಚರ್ಚೆ ಮಾಡಿರುವ ವಿಡಿಯೋ ಸಿಸಿಬಿ ತಂಡಕ್ಕೆ ಸಿಕ್ಕಿದೆ. ಈ ವಿಡಿಯೋ ಆಧಾರದ ಮೇಲೆ ತಡರಾತ್ರಿವರೆಗೂ ಸಿಸಿಬಿಯಿಂದ ಗೋಪಾಲಕೃಷ್ಣ ಅವರನ್ನು ವಿಚಾರಣೆ ಮಾಡಲಾಗಿದೆ.
ಈ ತನಿಖೆ ವೇಳೆ, ಹೊಸ ವಿಷಯವೊಂದು ಹೊರ ಬಂದಿದ್ದು, ಅದರಲ್ಲಿ ಗೋಪಾಲಕೃಷ್ಣ ಅವರನ್ನು ಬಿಟ್ಟು ವಿಡಿಯೋ ಮಾಡಿರುವ ವಿಚಾರ ಪೊಲೀಸರ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ವಿಡಿಯೋ ರೆಕಾರ್ಡ್ ಮಾಡಿದ್ದ ಯಲಹಂಕದ ವಿಶ್ವನಾಥ್ ಬೆಂಬಲಿಗ ದೇವರಾಜ್ ಅಲಿಯಾಸ್ ಕುಳ್ಳದೇವರಾಜ್ ಎಂಬಾತನನ್ನು ಸಿಸಿಬಿ ವಶಕ್ಕೆ ಪಡೆದಿದೆ.
ಇದನ್ನೂ ಓದಿ: ಮುಂದಿನ ಸಿಎಂ ಆಗುತ್ತೇವೆ ಎಂದು ಹೊಸ ಬಟ್ಟೆ ಹೊಲಿಸಿದ್ದರೆ ಅದರ ಆಸೆ ಬಿಡಲಿ: ಎಸ್.ಆರ್. ವಿಶ್ವನಾಥ್
ವಿಶ್ವನಾಥ್ ಅವರಿಗೆ ಹತ್ತಿರವಾಗಲೂ ಗೋಪಾಲಕೃಷ್ಣ ಬಳಿ ಹೋಗಿ ವಿಶ್ವನಾಥ್ ಮುಗಿಸುವ ಪ್ಲಾನ್ ಕೊಟ್ಟು ಮಾತುಕತೆ ನಡೆಸಿದ್ರಾ ಅನ್ನೋ ಆರೋಪ ಈಗ ಕುಳ್ಳ ದೇವರಾಜ್ ಮೇಲೆ ಬಂದಿದೆ. ಈ ಕುರಿತು ಕುಳ್ಳ ದೇವರಾಜ್ ನನ್ನು ಪ್ರಶ್ನೆ ಮೇಲೆ ಪ್ರಶ್ನೆ ಕೇಳಿದ ಸಿಸಿಬಿ ಅಧಿಕಾರಿಗಳು, ಗೋಪಾಲಕೃಷ್ಣರನ್ನು ಪ್ರಚೋದಿಸಿ ವಿಡಿಯೋ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಇದೇ ಕಾರಣಕ್ಕಾಗಿ ಕುಳ್ಳ ದೇವರಾಜ್ ನನ್ನು ವಶಕ್ಕೆ ಪಡೆದುಕೊಂಡ ಸಿಸಿಬಿ ತಂಡ ಗೋಪಾಲಕೃಷ್ಣರನ್ನ ಬಿಟ್ಟು ಮನೆಗೆ ಕಳುಹಿಸಿದೆ.
ಇನ್ನು ತನಿಖೆ ವೇಳೆ ಹಲವು ವಿಷಯಗಳು ಗೊಂದಲಕ್ಕೆ ಕಾರಣವಾಗಿದ್ದು, ರಾಜಕೀಯವಾಗಿ ಗೋಪಾಲಕೃಷ್ಣರನ್ನ ಮುಗಿಸಲು ವಿಶ್ವನಾಥ್ ಈ ಪ್ಲಾನ್ ಮಾಡಿದ್ರಾ? ಇಲ್ಲಾ ವಿಶ್ವನಾಥ್ ಸ್ನೇಹ ಸಂಪಾದಿಸಲು ಕುಳ್ಳ ದೇವರಾಜ್ ಈ ಪ್ಲಾನ್ ಮಾಡಿದ್ನಾ ಅನ್ನೋದು ಕುತೂಹಲ ಕೆರಳಿಸಿದೆ.
ಇನ್ನೊಂದು ಕೋನದಲ್ಲಿ ಈ ಪ್ರಕರಣವನ್ನು ನೋಡೋದಾದ್ರೆ, ಶಾಸಕ ವಿಶ್ವನಾಥ್ ಅವರೇ ಕುಳ್ಳದೇವರಾಜ್ ಅವರನ್ನು ಬಿಟ್ಟು ಈ ವಿಡಿಯೋ ಮಾಡಿಸಿದ್ರಾ ಅನ್ನೋದು ಜನರ ಸಂದೇಹಕ್ಕೆ ಕಾರಣವಾಗಿದೆ. ಏಕೆಂದರೆ ಸಿಸಿಬಿ ವಶದಲ್ಲಿರುವ ಕುಳ್ಳದೇವರಾಜ್, ವಿಶ್ವನಾಥ್ ಬೆಂಬಲಿಗರಾಗಿದ್ದವರು. ಈ ಹಿನ್ನೆಲೆಯಲ್ಲಿ ಈ ಪ್ರಕರಣ ಮುಂದಿನ ದಿನಗಳಲ್ಲಿ ಮತ್ತಷ್ಟು ತಿರುವು ಪಡೆಯುವ ಸಾಧ್ಯತೆ ಇದೆ.
ಈ ಎಲ್ಲದರ ಮಧ್ಯೆ ಈ ಪ್ರಕರಣದ ಬಗ್ಗೆ ಮಾಹಿತಿ ತಿಳಿದು ನಿನ್ನೆ ರಾತ್ರಿ ಖುದ್ದು ಕಮಿಷನರ್ ಘಟನೆ ಕುರಿತು ಮಾಹಿತಿ ಕಲೆ ಹಾಕಿದ್ದಾರೆ. ಪ್ರಕರಣಕ್ಕೆ ಮುಖ್ಯ ಆಧಾರವಾಗಿರುವ ವಿಡಿಯೋ ನೋಡಿ, ಇದು ಉದ್ದೇಶಪೂರ್ವಕವಾಗಿ ಮಾಡಿರುವ ವಿಡಿಯೋ. ಹೀಗಾಗಿ, ವಿಡಿಯೋ ಮಾಡಿದವರ ಮೇಲೆ ಕ್ರಮಜರುಗಿಸಿ ಎಂದು ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.