ಬೆಂಗಳೂರು: ತಮಿಳು ನಾಡಿನ ಕೂನ್ನೂರು ಬಳಿ ಡಿಸೆಂಬರ್ 8ರಂದು ಮಿ-17 ವಿ5 ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಲ್ಯಾನ್ಸ್ ನಾಯಕ್ ಬೊಗ್ಗಲ ಸಾಯಿ ತೇಜ ಅವರ ಕಳೇಬರವನ್ನು ಸೂಲೂರು ವಾಯುನೆಲೆಯಿಂದ ಯಲಹಂಕ ವಾಯುನೆಲೆ ಕೇಂದ್ರಕ್ಕೆ ತರಲಾಗಿತ್ತು.
ಅಲ್ಲಿ ಭಾರತೀಯ ವಾಯುಪಡೆ ಮತ್ತು ಅರೆ ಸೇನಾಪಡೆ ಅಧಿಕಾರಿಗಳು ಅಂತಿಮ ನಮನ ಸಲ್ಲಿಸಿದರು. ನಂತರ ಹಳೆ ವಿಮಾನ ನಿಲ್ದಾಣ ರಸ್ತೆಯ ಬಳಿಯಿರುವ ಏರ್ ಫೋರ್ಸ್ ಕಮಾಂಡ್ ಆಸ್ಪತ್ರೆಗೆ ಪಾರ್ಥಿವ ಶರೀರವನ್ನು ಒಯ್ಯಲಾಯಿತು. ಇವರ ಕಳೇಬರವನ್ನು ನಿನ್ನೆ ಮಧ್ಯಾಹ್ನ 12.30ರ ಸುಮಾರಿಗೆ ವಿಶೇಷ ವಿಮಾನದಲ್ಲಿ ತರಲಾಗಿತ್ತು. ಧೀರ ಯೋಧನಿಗೆ ಹಿರಿಯ ಅಧಿಕಾರಿಗಳು ಸಕಲ ಮಿಲಿಟರಿ ಗೌರವಗಳೊಂದಿಗೆ ಅಂತಿಮ ನಮನ ಸಲ್ಲಿಸಿದರು.
ಇಂದು ಆಂಧ್ರ ಪ್ರದೇಶದಲ್ಲಿರುವ ಅವರ ಕುಟುಂಬಸ್ಥರಿಗೆ ಮೃತದೇಹವನ್ನು ಹಸ್ತಾಂತರಿಸಲಾಗುತ್ತದೆ. ಆಂಧ್ರ ಪ್ರದೇಶದ ಮಡನಪಲ್ಲೆಯಲ್ಲಿರುವ ಅವರ ಹುಟ್ಟೂರಿಗೆ ವಿಶೇಷ ಆಂಬ್ಯುಲೆನ್ಸ್ ನಲ್ಲಿ ರಸ್ತೆಯ ಮೂಲಕ ಮೃತದೇಹವನ್ನು ಒಯ್ಯಲಾಗುತ್ತದೆ.
ಲ್ಯಾನ್ಸ್ ನಾಯಕ್ ಸಾಯಿ ತೇಜ ಅವರು ಪತ್ನಿ ಶ್ಯಾಮಲ ಮತ್ತು ಇಬ್ಬರು ಸಣ್ಣ ಮಕ್ಕಳಾದ ಮೋಕ್ಷಗ್ನ(5ವ) ಹಾಗೂ ಪುತ್ರಿ ದರ್ಶಿನಿ(2ವ) ಹಾಗೂ ಪೋಷಕರನ್ನು ಅಗಲಿದ್ದಾರೆ. 2012ರಲ್ಲಿ ಗುಂಟೂರಿನಲ್ಲಿ ನಡೆದಿದ್ದ ನೇಮಕಾತಿ ಪ್ರಕ್ರಿಯೆಯಲ್ಲಿ ಸೇನೆಗೆ ಸೇರ್ಪಡೆಯಾಗಿದ್ದರು. ಈ ವರ್ಷದ ಆರಂಭದಲ್ಲಿ ಜ.ರಾವತ್ ಅವರಿಗೆ ಖಾಸಗಿ ಭದ್ರತಾ ಅಧಿಕಾರಿಯಾಗಿ ನೇಮಕಗೊಂಡಿದ್ದರು. ಈ ಮಧ್ಯೆ ಮೃತ ಸೈನಿಕನ ಕುಟುಂಬಕ್ಕೆ ಆಂಧ್ರ ಪ್ರದೇಶ ಸರ್ಕಾರ 50 ಲಕ್ಷ ರೂಪಾಯಿ ಘೋಷಿಸಿದೆ.
ಇನ್ನು ಹೆಲಿಕಾಪ್ಟರ್ ದುರಂತದಲ್ಲಿ ಬದುಕುಳಿದಿರುವ ಏಕೈಕ ಪೈಲಟ್ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಸ್ಥಿರವಾಗಿದೆ.
Advertisement