ಸದನದಲ್ಲಿ ಇಂದು ಬೇಷರತ್ ಕ್ಷಮೆಯಾಚಿಸಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಏನೆಂದರು?: ಇದಕ್ಕೆ ಸ್ಪೀಕರ್ ಪ್ರತಿಕ್ರಿಯೆ ಏನು?

ಆಡಬಾರದ ಮಾತುಗಳನ್ನು ಸದನದಲ್ಲಿ ಆಡಿ ಅದು ದೇಶ ಮಟ್ಟದಲ್ಲಿ ತೀವ್ರ ವಿವಾದವೆದ್ದ ಬಳಿಕ ಮಾಜಿ ಸ್ಪೀಕರ್, ಕಾಂಗ್ರೆಸ್ ನಾಯಕ ಕೆ ಆರ್ ರಮೇಶ್ ಕುಮಾರ್ ಬೇಷರತ್ ಕ್ಷಮೆಯಾಚಿಸಿದ್ದಾರೆ. ಇಂದು ಬೆಳಗ್ಗೆ ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನದ ಕಲಾಪ ಆರಂಭವಾಗುತ್ತಿದ್ದಂತೆ ಕಲಾಪ ಆರಂಭದಲ್ಲಿಯೇ ಕ್ಷಮೆಯಾಚಿಸಿ ವಿವಾದಕ್ಕೆ ಅಂತ್ಯಹಾಡುವ ಪ್ರಯತ್ನ ಮಾಡಿದರು.
ಸದನದಲ್ಲಿ ಕ್ಷಮೆಯಾಚಿಸಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್
ಸದನದಲ್ಲಿ ಕ್ಷಮೆಯಾಚಿಸಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್

ಬೆಳಗಾವಿ (ಸುವರ್ಣಸೌಧ): ಆಡಬಾರದ ಮಾತುಗಳನ್ನು ಸದನದಲ್ಲಿ ಆಡಿ ಅದು ದೇಶ ಮಟ್ಟದಲ್ಲಿ ತೀವ್ರ ವಿವಾದವೆದ್ದ ಬಳಿಕ ಮಾಜಿ ಸ್ಪೀಕರ್, ಕಾಂಗ್ರೆಸ್ ನಾಯಕ ಕೆ ಆರ್ ರಮೇಶ್ ಕುಮಾರ್(Ex speaker Ramesh Kumar) ಬೇಷರತ್ ಕ್ಷಮೆಯಾಚಿಸಿದ್ದಾರೆ. ಇಂದು ಬೆಳಗ್ಗೆ ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನದ ಕಲಾಪ ಆರಂಭವಾಗುತ್ತಿದ್ದಂತೆ ಕಲಾಪ ಆರಂಭದಲ್ಲಿಯೇ ಕ್ಷಮೆಯಾಚಿಸಿ ವಿವಾದಕ್ಕೆ ಅಂತ್ಯಹಾಡುವ ಪ್ರಯತ್ನ ಮಾಡಿದರು.

ನಿನ್ನೆ ಅಪರಾಹ್ನ ಸದನದಲ್ಲಿ ಬೆಳೆವಿಮೆ ಚರ್ಚೆ ಸಂದರ್ಭದಲ್ಲಿ ಎಲ್ಲರಿಗೂ ಮಾತನಾಡಲು ಅವಕಾಶ ಕೊಟ್ಟ ಸ್ಪೀಕರ್‌ ನಡೆ ಬಗ್ಗೆ ಮಾತನಾಡುವಾಗ ಅವರು ಆಡಿದ ಮಾತುಗಳು ರಾಷ್ಟ್ರಾದ್ಯಂತ ಆಕ್ರೋಶ ಉಂಟು ಮಾಡಿತ್ತು. ಸದನದಲ್ಲಿ ಎಲ್ಲರೂ ಮಾತನಾಡಲು ಆರಂಭಿಸಿದರೆ ಏನು ಮಾಡುವುದು, ಲೆಟ್ ಅಸ್ ಎಂಜಾಯ್ ದ ಸಿಚುವೇಷನ್ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಹೇಳಿದಾಗ ಎದ್ದು ನಿಂತ ಮಾಜಿ ಸ್ಪೀಕರ್ ರಮೇಶ್ ಕುಮಾರ್ 'there is a saying, When rape is inevitable, lie down and enjoy it'(ಅತ್ಯಾಚಾರ ತಡೆಯಲು ಸಾಧ್ಯವಿಲ್ಲವೆಂದರೆ ಮಲಗಿ ಆನಂದಿಸಿ ) ಎಂದರು. ಅದಕ್ಕೆ ವಿಶ್ವೇಶ್ವರ ಹೆಗಡೆ ಕಾಗೇರಿಯವರು ನಕ್ಕರು. ರಮೇಶ್ ಕುಮಾರ್ ಅವರ ಹೇಳಿಕೆ ಹೊರಬರುತ್ತಿದ್ದಂತೆ ರಾಷ್ಟ್ರಮಟ್ಟದಲ್ಲಿ ಮಹಿಳೆಯರಿಂದ, ಚಿಂತಕರಿಂದ ತೀವ್ರ ವಿವಾದವುಂಟಾಯಿತು. 

ಇಂದು ಸದನದಲ್ಲಿ ರಮೇಶ್ ಕುಮಾರ್ ಹೇಳಿದ್ದೇನು?: “ನಾನು ನಿನ್ನೆ ಕಲಾಪ ನಡೆಯುವ ವೇಳೆ ಭಾಷಣಾಕಾರರ ಪಟ್ಟಿ ಜಾಸ್ತಿ ಆಗುತ್ತಿದೆ. ಸಭಾಧ್ಯಕ್ಷರ ಅನುಭವಿಸುತ್ತಿರುವ ಸಮಯ ಹೊಂದಾಣಿಕೆ ಸಮಸ್ಯೆ ಬಗ್ಗೆ ನಾನು ಕೂಡ ಇದನ್ನು ಅನುಭವಿಸುತ್ತಿದ್ದೇನೆ ಎಂಬ ನೋವನ್ನು ಸಭಾಧ್ಯಕ್ಷ ಕಾಗೇರಿಯವರಿಗೆ ಹೇಳಿಕೊಂಡೆ. ನಾನು ಇಂಗ್ಲಿಷ್ ಭಾಷೆಯ ಒಂದು ಮಾತನ್ನು ಉಲ್ಲೇಖ ಮಾಡಿದೆ. ಹೆಣ್ಣಿಗೆ ಅಪಮಾನ ಮಾಡುವುದು, ಸದದನ ಗೌರವ ಕಡಿಮೆ ಮಾಡುವುದು, ಲಘುವಾಗಿ ವರ್ತಿಸಬೇಕೆಂದು ಯಾವ ದುರುದ್ದೇಶ ಇರಲಿಲ್ಲ. ಯಾವ ಸನ್ನಿವೇಶದಲ್ಲಿ ಏನು ಹೇಳಿದೆ ಅನ್ನೋದು ಹೊರಟು ಹೋಗುತ್ತೆ. ನಾನು ನನ್ನನ್ನು ರಕ್ಷಣೆ ಮಾಡಿಕೊಳ್ಳುತ್ತಿಲ್ಲ. ಕಲಾಪ ನಡೆಯುವ ಸಂದರ್ಭದಲ್ಲಿ ನಾನು ಉಲ್ಲೇಖ ಮಾಡಿರುವ ಮಾತುಗಳು ಯಾರಿಗೆ ಎಲ್ಲೇ ನೋವಾಗಿದ್ದರೆ ಕ್ಷಮೆ ಕೋರುತ್ತೇನೆ” ಎಂದು ಹೇಳಿದರು.

“ನನಗೆ ಯಾವ ಪ್ರತಿಷ್ಠೆ  ಇಲ್ಲ. ಸಾಮಾನ್ಯ ಹಿನ್ನೆಲೆಯಿಂದ ಬಂದವ್ನು. ಸದ ಕಾಲ ಗೌರವವಾಗಿ ನಡೆದುಕೊಳ್ಳಬೇಕೆಂದುವನು. ಯಾರಿಗೇನು ಸವಾಲು ಮಾಡಬೇಕಂತಿಲ್ಲ. ನನಗೆ ಯಾವ ಪ್ರತಿಷ್ಠೆ ಇಲ್ಲ. ನಾನು ಹೇಳುತ್ತಿದ್ದಾಗ ನೀವು (ಕಾಗೇರಿ) ನಗ್ತಾ ಇದ್ದೀರಿ ತಮ್ಮನ್ನು ಅಪರಾಧಿ ಮಾಡಿದ್ದಾರೆ. ತಮ್ಮದು ಆ ಉದ್ದೇಶ ಇರಲಿಕ್ಕಿಲ್ಲ. ನಾನು ಆ ಸಂದರ್ಭದಲ್ಲಿ ಉಲ್ಲೇಖ ಮಾಡಿರುವ ಮಾತುಗಳಿಂದ ಮಹಿಳೆಯರಿಗೆ ಒಂದು ವೇಳೆ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ. ನನ್ನಿಂದ ಅಪರಾಧ ಆಗಿದೆಯೆಂದು ಈಗಾಗಲೇ ತೀರ್ಪು ಕೊಟ್ಟು ಬಿಟ್ಟಿದ್ದಾರೆ. ಆದ್ದರಿಂದ ನಾನು ಕ್ಷಮೆ ಕೋರುತ್ತೇನೆ. ಈ ಘಟನೆಗೆ ಇಲ್ಲಿಗೆ ಸುಖಾಂತ್ಯ ಹಾಡಿ ಕಲಾಪ ನಡೆಸಿಕೊಂಡು ಹೋಗೋಣ. ವಿಶೇಷವಾಗಿ ಹೆಣ್ಣು ಕುಲಕ್ಕೆ ನೋವಾಗಿದ್ದರೆ, ನನಗೆ ಯಾವ ಪ್ರತಿಷ್ಠೆ ಇಲ್ಲದೆ, ಪ್ರಾಮಾಣಿಕವಾಗಿ ಶುದ್ಧ ಹೃದಯದಿಂದ ವಿಷಾದ ವ್ಯಕ್ತಪಡಿಸುತ್ತೇನೆ” ಎಂದರು.

ಹೆಸರಾಂತ ಚೀನಾ ಚಿಂತಕ ಕನ್ಫೂಶಿಯಸ್ ಒಂದು ಮಾತನ್ನು ಹೇಳಿದ್ದಾರೆ, A man who has committed a mistake and doesn't correct it, is committing another mistake, If you make a mistake, do not be afraid to correct it' ಎಂದು. ನನ್ನಿಂದ ಅಪರಾಧವಾಗಿದೆ ಎಂದು ಈಗಾಗಲೇ ತೀರ್ಪು ಕೊಟ್ಟಿದ್ದಾರೆಯಾದ್ದರಿಂದ ನಾನು ಕ್ಷಮೆ ಕೇಳುತ್ತೇನೆ, ಇದಕ್ಕೇ ಇಲ್ಲೇ ಸುಖಾಂತ್ಯ ಹಾಡೋಣ ಎಂದರು.

ಇದಕ್ಕೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ (Vishweshwara Hegade Kageri), ಈ ವಿಚಾರವನ್ನು ಬೆಳಸೋದು ಬೇಡ. ನಾವೆಲ್ಲರೂ ಒಂದು ಕುಟುಂಬದಲ್ಲಿರುವಂತಹವರು. ನಮಗೂ ಸಂಸಾರಿಕ ಭಾವನಾತ್ಮಕ ಸಂಬಂಧ ಇದ್ದೆ ಇದೆ. ನಿನ್ನೆ ನಡೆದ ಘಟನೆಯಿಂದ ರಮೇಶ್ ಕುಮಾರ್ ಅವರ ಮಾತು ವಿವಾದ ಸ್ವರೂಪ ಪಡೆದುಕೊಂಡಿದೆ. ನಮ್ಮ ಸದನದಲ್ಲಿ ನಾವೆಲ್ಲರೂ ಮಹಿಳೆಯರ ಬಗ್ಗೆ ಯಾವ ಗೌರವದ ಸ್ಥಾನ ಇದೆಯೋ ಆ ಸ್ಥಾನವನ್ನು ನಾವೆಲ್ಲರೂ ಇಟ್ಟುಕೊಂಡವರೇ. ಅದನ್ನು ಕಾಪಾಡುವುದನ್ನು ಹಾಗೂ ಹೆಚ್ಚಿಸುವುದಕ್ಕೆ ಬದ್ಧರಾಗಿರುತ್ತೇವೆ. ಇಲ್ಲಿ ನಡೆದ ಘಟನೆಯನ್ನು ಬೆಳೆಸುವುದು ಬೇಡ ಎಂದು ವಿವಾದಕ್ಕೆ ತೆರೆ ಎಳೆದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com