ಮೈಸೂರು: ಪ್ರೀತಿಸಿ ಮದುವೆಯಾದ ಮಗಳ ತಾಳಿ ಕಿತ್ತ ತಂದೆ, ಸಾರ್ವಜನಿಕರೆದುರೆ ಜುಟ್ಟು ಹಿಡಿದು ಎಳೆದಾಡಿ ರಂಪಾಟ!

ಸಿನಿಮಾ ಕಥೆಯ ಮಾದರಿ ಪ್ರೀತಿಸಿ ಮದುವೆಯಾದ ಮಗಳ ತಾಳಿ ಕಿತ್ತು ಹಾಕಿ, ಜುಟ್ಟು ಹಿಡಿದು ಎಳೆದೊಯ್ಯಲು ತಂದೆ ಯತ್ನಿಸಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮೈಸೂರು: ಸಿನಿಮಾ ಕಥೆಯ ಮಾದರಿ ಪ್ರೀತಿಸಿ ಮದುವೆಯಾದ ಮಗಳ ತಾಳಿ ಕಿತ್ತು ಹಾಕಿ, ಜುಟ್ಟು ಹಿಡಿದು ಎಳೆದೊಯ್ಯಲು ತಂದೆ ಯತ್ನಿಸಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ನಡೆದಿದೆ.

ನಂಜನಗೂಡು ತಾಲೂಕು ಹರಳೆ ಗ್ರಾಮದ ಯುವತಿ ಚೈತ್ರಾ ಅದೇ ಗ್ರಾಮದ ಮಹೇಂದ್ರ ಎಂಬವರನ್ನು ಕಳೆದ ಒಂದೂವರೆ ವರ್ಷದಿಂದ ಪ್ರೀತಿಸಿದ್ದರು. ಆತ ಬೇರೆ ಜಾತಿಯವನಾದ್ದರಿಂದ ಚೈತ್ರಾ ಪೋಷಕರು ವಿವಾಹಕ್ಕೆ ವಿರೋಧಿಸಿದ್ದರು. ಇದರ ನಡುವೆಯೇ  ಡಿಸೆಂಬರ್ 8 ರಂದು ಇಬ್ಬರು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಮದುವೆಯಾಗಿದ್ದಾರೆ.

ಸೋಮವಾರ ಮದುವೆ ಪ್ರಮಾಣ ಪತ್ರ ಪಡೆದುಕೊಳ್ಳಲು ಚೈತ್ರಾ ಮತ್ತು ಮಹೇಂದ್ರ ನಂಜನಗೂಡಿನ  ಮಿನಿ ವಿಧಾನಸೌಧಕ್ಕೆ ಆಗಮಿಸಿದ್ದರು.  ಪ್ರಕ್ರಿಯೆ ಮುಗಿಸಿ ಕಚೇರಿಯಿಂದ ಹೊರ ಬರುತ್ತಿದ್ದಂತೆಯೇ ಯುವತಿ ತಂದೆ ಬಸವರಾಜ ನಾಯ್ಕ್ ಪ್ರತ್ಯಕ್ಷವಾಗಿಸ ಸರ್ಕಾರಿ ಕಚೇರಿಯಲ್ಲಿಯೇ ಎಲ್ಲರ ಎದುರೇ ಮಗಳ ಕತ್ತಿನಲ್ಲಿದ್ದ ಮಾಂಗಲ್ಯ ಸರವನ್ನು ಕಿತ್ತುಹಾಕಿ ಜುಟ್ಟು ಹಿಡಿದು ಮನೆಗೆ ಕರೆದುಕೊಂಡು ಹೋಗಲು ಯತ್ನಿಸಿದ್ದಾರೆ.

ಕೂಡಲೇ ಆಕೆ ಸಹಾಯಕ್ಕಾಗಿ ಎಲ್ಲರನ್ನು ಕೂಗಿಕೊಂಡಿದ್ದಾಳೆ, ಕಚೇರಿಯಲ್ಲಿದ್ದವರ ನೆರವಿನಿಂದ ಆಕೆ ತಂದೆಯಿಂದ ಬಚಾವಾಗಿ ಹೊರ ಬಂದಿದ್ದಾಳೆ.  ಯುವತಿ ಚೈತ್ರಾ ತನ್ನ ತಂದೆಯಿಂದಲೇ ತನಗೆ ರಕ್ಷಣೆ ಬೇಕೆಂದು ನಂಜನಗೂಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.  ಚೈತ್ರಾ ತಂದೆ ಆಕೆಯ ಜುಟ್ಟು ಹಿಡಿದು ಎಳೆದಾಡುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com