ಕಾಂಗ್ರೆಸ್ ಪ್ರತಿಭಟನೆಯಿಂದ ಸದನದ ಕಲಾಪಕ್ಕೆ ಹೊಡೆತ: ಸಿಎಂ ಬೊಮ್ಮಾಯಿ

ಸುವರ್ಣ ವಿಧಾನಸೌಧದಲ್ಲಿ 10 ದಿನಗಳ ಕಾಲ ನಡೆದ ಚಳಿಗಾಲದ ವಿಧಾನಮಂಡಲ ಅಧಿವೇಶನ ಪರಿಣಾಮಕಾರಿಯ ಮತ್ತು ಫಲಪ್ರದವಾಗಿತ್ತು ಎಂದು ಹೇಳಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಸದನದಲ್ಲಿ ಆಡಳಿತ ಪಕ್ಷವು ಪ್ರಮುಖ ವಿಚಾರಗಳ ಬಗ್ಗೆ ಚರ್ಚೆಗೆ ಮುಂದಾದಾಗಲೆಲ್ಲ ಕಾಂಗ್ರೆಸ್ ದ್ವಿಮುಖ ನೀತಿ ಅನುಸರಿಸುತ್ತಿತ್ತು ಎಂದು ಆರೋಪಿಸಿದ್ದಾರೆ.
ಸಿಎಂ ಬೊಮ್ಮಾಯಿ
ಸಿಎಂ ಬೊಮ್ಮಾಯಿ

ಬೆಳಗಾವಿ: ಸುವರ್ಣ ವಿಧಾನಸೌಧದಲ್ಲಿ 10 ದಿನಗಳ ಕಾಲ ನಡೆದ ಚಳಿಗಾಲದ ವಿಧಾನಮಂಡಲ ಅಧಿವೇಶನ ಪರಿಣಾಮಕಾರಿಯ ಮತ್ತು ಫಲಪ್ರದವಾಗಿತ್ತು ಎಂದು ಹೇಳಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಸದನದಲ್ಲಿ ಆಡಳಿತ ಪಕ್ಷವು ಪ್ರಮುಖ ವಿಚಾರಗಳ ಬಗ್ಗೆ ಚರ್ಚೆಗೆ ಮುಂದಾದಾಗಲೆಲ್ಲ ಕಾಂಗ್ರೆಸ್ ದ್ವಿಮುಖ ನೀತಿ ಅನುಸರಿಸುತ್ತಿತ್ತು ಎಂದು ಆರೋಪಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಉತ್ತರ ಕರ್ನಾಟಕಕ್ಕೆ ಸಂಬಂಧಿಸಿದಂತೆ ಉಭಯ ಸದನಗಳ ಸದಸ್ಯರು ಎತ್ತಿದ ಎಲ್ಲ ಪ್ರಮುಖ ವಿಚಾರಗಳ ಬಗ್ಗೆ ನಮ್ಮ ಸಚಿವರು ಉತ್ತರಿಸಿದರು ಎಂದು ಹೇಳಿದರು. ಅಲ್ಲದೆ, ಅಧಿವೇಶನದ ವೇಳೆ ಪದೇ ಪದೇ ಪ್ರತಿಭಟನೆ ನಡೆಸುತ್ತಿದ್ದ ಕಾಂಗ್ರೆಸ್ ವಿರುದ್ಧವೂ ವಾಗ್ದಾಳಿ ನಡೆಸಿದರು.

''ನೀರಾವರಿ ಕ್ಷೇತ್ರದ ಕುರಿತು ಎರಡು ದಿನಗಳ ಕಾಲ ಚರ್ಚೆಗಳು ನಡೆದವು. ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಉತ್ತರ ನೀಡಲು ಮುಂದಾದಾಗ  ಪ್ರತಿಪಕ್ಷಗಳು ವಿಧಾನಸಭೆಯಲ್ಲಿ ಧರಣಿ ನಡೆಸಿದವು, ಉತ್ತರ ಕರ್ನಾಟಕದ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.

ಕೆಲವು ದಿನಗಳ ಹಿಂದೆ ಸಚಿವ ಸಂಪುಟದಲ್ಲಿ ಹಲವು ಮಹತ್ವದ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಹೆಸ್ಕಾಂನ ಆರ್ಥಿಕ ಸ್ಥಿತಿಯನ್ನು ಸ್ಥಿರಗೊಳಿಸಲು ಪ್ರಯತ್ನಿಸಲಾಗಿದೆ ಮತ್ತು ಉತ್ತರ ಕರ್ನಾಟಕದ ರೈಲ್ವೆ ಮತ್ತು ನೀರಾವರಿ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಮತಾಂತರ ವಿರೋಧಿ ವಿಧೇಯಕ ಮಂಡನೆ ವೇಳೆ ಕಾಂಗ್ರೆಸ್ ದ್ವಿಮುಖ ಧೋರಣೆಯನ್ನು ಅನುಸರಿಸುತ್ತಿದೆ. ವಿರೋಧ ಪಕ್ಷದವರು ಮತಾಂತರ ನಿಷೇಧ ಕಾಯ್ದೆಯ ಬಗ್ಗೆ ಮಾತನಾಡದೇ ಕೇವಲ ರಾಜಕೀಯ ಭಾಷಣ ಮಾಡಿದ್ದಾರೆ. ಕಾನೂನು ಸಚಿವರ ಪರಿಶೀಲನೆಯ ನಂತರ ಸಚಿವ ಸಂಪುಟದಲ್ಲಿ ಕಾಯ್ದೆಯನ್ನು ಮಂಡಿಸಲು ಸ್ವತಃ ಸಿದ್ದರಾಮಯ್ಯನವರೇ ಒಪ್ಪಿಗೆ ನೀಡಿದ್ದರು. ಸಚಿವ ಸಂಪುಟದಲ್ಲಿ ಮಂಡಿಸಲು ಒಪ್ಪಿಗೆ ನೀಡುವುದೆಂದರೆ ಕಾಯ್ದೆಯನ್ನು ಒಪ್ಪಿದಂತೆಯೇ ಅಲ್ಲವೇ?... ನಂತರ ವಿಧಾನಮಂಡಲದಲ್ಲಿ ಅದೇ ಕಾಯ್ದೆಗೆ ಅವರು ವಿರೋಧ ವ್ಯಕ್ತಪಡಿಸಿದರು. ಇದು ಕಾಂಗ್ರೆಸ್ ನ ದ್ವಿಮುಖ ನೀತಿಯನ್ನು ತೋರುತ್ತದೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com