ಬೆಂಗಳೂರು: ಪೆಗಾಸಸ್ ವಿವಾದದಲ್ಲಿ ವಿದೇಶಿ ಮಾಧ್ಯಮಗಳ ಕೈವಾಡವಿದ್ದು, ಇವುಗಳು ಭಾರತದ ವಿರುದ್ಧ ತಪ್ಪು ಮಾಹಿತಿಗಳು ರವಾನಿಸುತ್ತಿವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿಯವರು ಬುಧವಾರ ಹೇಳಿದ್ದಾರೆ.
ಪೆಗಾಸಸ್ ವಿವಾದ ಸಂಬಂಧ ಪ್ರತಿಕ್ರಿಯೆ ನೀಡಿರುವ ಅವರು, ವಿದೇಶಿ ಮಾಧ್ಯಮಗಳ ಕೈವಾಡವಿದ್ದು, ಇವುಗಳು ಭಾರತದ ವಿರುದ್ಧ ತಪ್ಪು ಮಾಹಿತಿಗಳ ಅಭಿಯಾನ ಆರಂಭಿಸಿವೆ. ಈ ಹಿಂದೆ ಕೂಡ ಸ್ವಿಸ್ ಬ್ಯಾಂಕ್ ಖಾತೆ ಕುರಿತಂತೆಯೂ ಇದೇ ರೀತಿ ಆಗಿತ್ತು ಎಂದು ಹೇಳಿದ್ದಾರೆ.
ಇದೇ ವೇಳೆ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ಕುರಿತು ಮಾತನಾಡಿರುವ ಅವರು, ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಅವರೇ ಮುಂದುವರೆಯಲಿದ್ದಾರೆ. ಈ ಬಗ್ಗೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರೇ ಸ್ಪಷ್ಟನೆ ನೀಡಿದ್ದಾರೆ. ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ಉಂಟು ಮಾಡುವ ಸಲುವಾಗಿ ಈ ರೀತಿಯ ವದಂತಿ ಹಾಗೂ ಊಹಾಪೋಹಗಳನ್ನು ಸೃಷ್ಟಿಸಲಾಗುತ್ತಿದೆ. ರಾಜ್ಯದಲ್ಲಿರುವ ಮುಖ್ಯಮಂತ್ರಿಗಳು ಬಲಶಾಲಿಯಾಗಿದ್ದು, ಅವರೇ ನಮ್ಮ ನಾಯಕರಾಗಿದ್ದಾರೆ ಎಂದು ತಿಳಿಸಿದ್ದಾರೆ.
Advertisement