ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಸಿಡಿ ಹಗರಣದ ತನಿಖೆಯನ್ನು ವಿಶೇಷ ತನಿಖಾದಳ (ಎಸ್ ಐಟಿ) ಮುಖ್ಯಸ್ಥ ಸೌಮೇಂದು ಮುಖರ್ಜಿ ಅವರ ಅನುಪಸ್ಥಿತಿಯಲ್ಲಿ ಮುಂದುವರೆಸುವ ವಿಚಾರವಾಗಿ ಹೈಕೋರ್ಟ್ ಸರ್ಕಾರದಿಂದ ವಿವರಣೆಯನ್ನು ಕೇಳಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ನ ಅನುಮತಿ ಇಲ್ಲದೇ ಯಾವುದೆ ತನಿಖೆ ಮುಂದುವರೆಯುವುದಕ್ಕೆ ಹಾಗೂ ಅಂತಿಮ ವರದಿಯನ್ನು ಸಲ್ಲಿಸುವುದಕ್ಕೆ ಸಾಧ್ಯವಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
ನ್ಯಾ. ಅಭಯ್ ಶ್ರೀನಿವಾಸ್ ಓಕ, ಹಾಗೂ ನ್ಯಾ. ಎನ್ಎಸ್ ಸಂಜಯ್ ಗೌಡ ಅವರಿದ್ದ ದ್ವಿಸದಸ್ಯ ಪೀಠ, ಮೇ.1 ರಿಂದ ರಜೆಯಲ್ಲಿರುವ ಎಸ್ಐಟಿ ಮುಖ್ಯಸ್ಥ ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೇಂದು ಮುಖರ್ಜಿ ಅವರ ಅನುಪಸ್ಥಿತಿಯಲ್ಲಿ ತನಿಖೆಯ ಪ್ರಗತಿಯನ್ನು ಗಮನಿಸಿದ್ದು ಈ ವಿವರಣೆ ಕೇಳಿದೆ.
ಕೋರ್ಟ್ ಕೇಳಿರುವ ಪ್ರಶ್ನೆಗೆ ಆಕ್ಷೇಪಣೆಗಳಿದ್ದರೆ ಅದನ್ನು ಸಲ್ಲಿಸುವುದಕ್ಕೂ ರಾಜ್ಯ ಸರ್ಕಾರಕ್ಕೆ ಕೋರ್ಟ್ ಸೂಚಿಸಿದೆ. ಸಿಡಿ ಹಗರಣಕ್ಕೆ ಸಂಬಂಧಿಸಿದಂತೆ ಪಿಐಎಲ್ ಗಳ ವಿಚಾರಣೆಯನ್ನು ಕೋರ್ಟ್ ನಡೆಸುತ್ತಿದೆ.
Advertisement