ಆ್ಯಸಿಡ್ ದಾಳಿ ಬೆದರಿಕೆ: ಐಪಿಎಸ್ ಅಧಿಕಾರಿ ವರ್ತಿಕಾ ಕಟಿಯಾರ್ ದೂರು ಬೆನ್ನಲ್ಲೇ ಐಎಫ್ಎಸ್ ಅಧಿಕಾರಿ ವಿರುದ್ಧ ಎಫ್ಐಆರ್ ದಾಖಲು
ಬೆಂಗಳೂರು: ಆ್ಯಸಿಡ್ ದಾಳಿ ನಡೆಸುವ ಬೆದರಿಕೆ ಹಾಕಿದ್ದ ಐಎಫ್ಎಸ್ ಅಧಿಕಾರಿ ಪತಿ ವಿರುದ್ಧ ಐಪಿಎಸ್ ಅಧಿಕಾರಿ ವರ್ತಿಕಾ ಕಟಿಯಾರ್ ಅವರು ತಮ್ಮ ಕಾನೂನು ಹೋರಾಟವನ್ನು ಮುಂದುವರೆಸಿದ್ದಾರೆ.
ಆ್ಯಡಿಸ್ ದಾಳಿ ನಡೆಸುವ ಬೆದರಿಕೆ ಹಾಕಿದ್ದ ಐಎಫ್ಎಸ್ ಅಧಿಕಾರಿ ಪತಿ ನಿತಿನ್ ಸುಭಾಷ್ ಯೋಲಾ ವಿರುದ್ಧ ನಿನ್ನೆಯಷ್ಟೇ ವರ್ತಿಕಾ ಕಟಿಯಾರ್ ಅವರು ನಗರದ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ಬೆನ್ನಲ್ಲೇ ಬೆಂಗಳೂರು ನ್ಯಾಯಾಲಯ ನಿತಿನ್ ಸುಭಾಷ್ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಪೊಲೀಸರಿಗೆ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.
ಐಎಫ್ಎಸ್ ಅಧಿಕಾರಿಯಾಗಿರುವ ಪತಿ ನಿತಿನ್ ಸುಭಾಷ್ ಯೋಲಾ ಅವರು ಮೇ,28 ರಂದು ತಾಯಿಯ ಜೊತೆಗೆ ಕಾನ್ಫರೆನ್ಸ್ ಕಾಲ್ ಮಾಡಿದ್ದರು. ಮಾತುಕತೆ ವೇಳೆ ನಿತಿನ್ ಅವರು ದೂರು ಹಿಂಪಡೆಯದಿದ್ದರೆ ಆ್ಯಸಿಡ್ ದಾಳಿ ನಡೆಸುವ ಬೆದರಿಕೆ ಹಾಕಿದ್ದರು. ಅಲ್ಲದೆ, ಮೇ.29 ರಂದು ಕೊರೋನಾ ನಿಮಯಗಳನ್ನು ಉಲ್ಲಂಘನೆ ಮಾಡಿ ನ್ನ ಕಚೇರಿಗೆ ಬಂದಿರುವ ನಿತಿನ್, ಕಚೇರಿಯಲ್ಲಿದ್ದ ಸಿಬ್ಬಂದಿಗಳ ಬಳಿ ನಾನಿರುವ ಸ್ಥಳದ ಬಗ್ಗೆ ವಿಚಾರಿಸಿದ್ದಾರೆ. ನನ್ನ ಜೀವ ಅಪಾಯದಲ್ಲಿದ್ದು, ಪತಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ವರ್ಟಿಕಾ ಕಟಿಯಾರ್ ಅವರು ದೂರಿನಲ್ಲಿ ಹೇಳಿಕೊಂಡಿದ್ದಾರೆ.
ನ್ಯಾಯಾಲಯದ ಆದೇಶದಂತೆ ಅಧಿಕಾರಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದ್ದು, ಈ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳ ಬಳಿ ಮಾತುಕತೆ ನಡೆಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಕಳೆದ ಜನವರಿ ತಿಂಗಳಿನಲ್ಲಿ ವರ್ತಿಕಾ ಕಟಿಯಾರ್ ಅವರು ಪತಿ ಯೋಲಾ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿದ್ದರು. ದೂರಿನಲ್ಲಿ ಯೋಲಾ ಸೇರಿದಂತೆ 7 ಮಂದಿಯ ಹೆಸರನ್ನು ದಾಖಲಿಸಿದ್ದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ