ಬೆಂಗಳೂರು: ತಮ್ಮ ಊರುಗಳಿಗೆ ತೆರಳುವುದಕ್ಕಾಗಿ ಕೆಎಸ್ ಆರ್ ರೈಲ್ವೆ ನಿಲ್ದಾಣದಲ್ಲಿ ಕಾಯುತ್ತಿದ್ದ ಸಾವಿರಾರು ಮಂದಿಯನ್ನು ಸಾಮಾಜಿಕ ಅಂತರವಿಲ್ಲ ಎಂಬ ಕಾರಣಕ್ಕಾಗಿ ಪ್ರಯಾಣಿಕರನ್ನು ರೈಲ್ವೆ ನಿಲ್ದಾಣದಿಂದ ಹೊರಗೆ ಕಳಿಸಿ ಆವರಣದಲ್ಲಿ ಕಾಯುವಂತೆ ಮಾಡಿದ ಘಟನೆ ಮಂಗಳವಾರ ಮೇ.04 ರಂದು ನಡೆದಿದೆ.
ರೈಲ್ವೆ ಪೊಲೀಸರು ಈ ಕೃತ್ಯ ಎಸಗಿದ್ದು, ಪ್ರಯಾಣಿಕರು ಓಳಗೆ ಬಾರದಂತೆ ಬ್ಯಾರಿಕೇಡ್ ಗಳನ್ನು ಹಾಕಿ ನಿರ್ಬಂದಿಸಿದ್ದರು. ಕೊನೆಗೆ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಬಂದು ಪರಿಸ್ಥಿತಿಯನ್ನು ನಿಯಂತ್ರಿಸಿದರು.
ಬೆಳಿಗ್ಗೆ 7 ಗಂಟೆಯಿಂದ ರೈಲ್ವೆ ನಿಲ್ದಾಣದಿಂದ ಹೊರದಬ್ಬಲ್ಪಟ್ಟ ಪ್ರಯಾಣಿಕರು ಫುಟ್ ಪಾತ್ ಮೇಲೆ ಕುಳಿತುಕೊಳ್ಳುವಂತಾಗಿತ್ತು.
ಕೊರೋನಾ ಕಾರಣದಿಂದ ಕರ್ಫ್ಯೂ ವಿಧಿಸಲಾಗಿದೆ. ಇನ್ನು ರೈಲ್ವೆ ನಿಲ್ದಾಣಕ್ಕೆ ಬೇಗ ಬರಬೇಕೆಂದರೆ ಸ್ಥಳೀಯವಾಗಿ ಸಮರ್ಪಕ ಸಾರಿಗೆ ವ್ಯವಸ್ಥೆಯ ಲಭ್ಯತೆ ಇಲ್ಲ. ಈ ಹಿನ್ನೆಲೆಯಲ್ಲಿ ದೂರದ ಊರುಗಳಿಗೆ ಪ್ರಯಾಣಿಸುವ ಮಂದಿ ತುಂಬಾ ಬೇಗ ರೈಲ್ವೆ ನಿಲ್ದಾಣವನ್ನು ಪ್ರವೇಶಿಸಿದ್ದರು. ಇಂತಹವರನ್ನು ರೈಲ್ವೆ ನಿಲ್ದಾಣದಿಂದ ಸಾಮಾಜಿಕ ಅಂತರವಿಲ್ಲ ಎಂಬ ಕಾರಣ ನೀಡಿ ಹೊರಕಳಿಸಲಾಗಿತ್ತು. ಪರಿಣಾಮವಾಗಿ ಇಂತಹ ಪ್ರಯಾಣಿಕರು ಹಾಗೂ ಅವರ ಕುಟುಂಬ ಸದಸ್ಯರು ರಸ್ತೆ ಮೇಲೆ ಕಾಲಕಳೆಯುವಂತಾಗಿತ್ತು.
ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಎಕೆ ವರ್ಮಾ, ಸೂಕ್ತ ಟಿಕೆಟ್ ಗಳನ್ನು ಹೊಂದಿದ್ದ ಪ್ರಯಾಣಿಕರು ರೈಲ್ವೆ ನಿಲ್ದಾಣದ ಒಳಗೆ ಪ್ರವೇಶಿ, ಪ್ಲಾಟ್ ಫಾರ್ಮ್ ಗಳಲ್ಲಿ ಕಾಯುವುದಕ್ಕೆ ಅನುವುಮಾಡಿಕೊಟ್ಟರು.
" ಪ್ರಯಾಣಿಕರನ್ನು ಸತತ ನಾಲ್ಕುಗಂಟೆಗಳ ಕಾಲ ನಿಲ್ದಾಣದಿಂದ ಹೊರಗೆ ಕಾಯುವಂತೆ ಮಾಡಲಾಗಿತ್ತು. ಈ ರೀತಿ ಮಾಡಿದ್ದು ಮೂರ್ಖತನ, ನಿಲ್ದಾಣದಿಂದ ಹೊರಗೆ ಕಳಿಸಿದ್ದರ ಪರಿಣಾಮ ಎಲ್ಲಾ ಪ್ರಯಾಣಿಕರೂ ಒಂದೆಡೆ ಸೇರಿ ಕೊರೋನಾ ಹರಡುವ ಭೀತಿ ಮತ್ತಷ್ಟು ಹೆಚ್ಚಾಗಿತ್ತು ಎಂದು ಹಿರಿಯ ರೈಲ್ವೆ ಅಧಿಕಾರಿಯೊಬ್ಬರು ಹೇಳಿದ್ದಾರೆ.
ರೈಲ್ವೆ ಎಡಿಜಿಪಿ ಭಾಸ್ಕರ್ ರಾವ್ ಈ ಘಟನೆಯ ಬಗ್ಗೆ ಮಾತನಾಡಿದ್ದು, ತಾವು ಜಿಆರ್ ಪಿ ಗೆ ಈ ರೀತಿ ಮಾಡುವುದಕ್ಕೆ ಆದೇಶ ನೀಡಿಲ್ಲ ಎಂದು ಹೇಳಿದ್ದಾರೆ. "ಈ ರೀತಿ ಮಾಡುವುದು ಅಮಾನವೀಯ, ಪ್ರಯಾಣಿಕರಿಗೆ ನಾನು ಇಸ್ಕಾನ್ ಹಾಗೂ ಇತರ ಏಜೆನ್ಸಿ ಮೂಲಕ ಆಹಾರಕ್ಕೆ ವ್ಯವಸ್ಥೆ ಮಾಡಿದೆ" ಎಂದು ಭಾಸ್ಕರ್ ರಾವ್ ಹೇಳಿದ್ದಾರೆ.
ಇದೇ ವೇಳೆ ಯಶವಂತ ಪುರ ರೈಲ್ವೆ ನಿಲ್ದಾಣದಲ್ಲಿ ಬಿಹಾರ, ಉತ್ತರ ಪ್ರದೇಶ ಹಾಗೂ ಕೋಲ್ಕತ್ತಾಗೆ ತೆರಳುವ ರೈಲುಗಳಲ್ಲಿ ಜನಸಂದಣಿ ಹೆಚ್ಚಿದೆ.
Advertisement